ಕುದೂರು: ವೇದ ಸುಳ್ಳಾದರೂ ಗಾದೆ ಸುಳ್ಳಾಗದು. ಗಂಡಿಗೆ ಚಟ ಇರಬಾರದು, ಹೆಣ್ಣಿಗೆ ಹಠ ಇರಬಾರದು ಎಂಬುದೊಂದು ಗಾದೆಯನ್ನು ಕುದೂರು ಗ್ರಾಮದ ಹೆಣ್ಣು ಮಕ್ಕಳು ಒಳ್ಳೆಯ ರೀತಿಯಲ್ಲಿ ಆ ಮಾತನ್ನು ನಿಜ ಮಾಡಿ ತೋರಿಸಿದ್ದಾರೆ.
ಅದರ ಪ್ರತಿಫಲವಾಗಿ ಅಯೋಧ್ಯ ರಾಮಮಂದಿರ ಲೋಕಾರ್ಪಣೆ ಸಂದರ್ಭದಲ್ಲಿ ಕುದೂರು ಗ್ರಾಮದಲ್ಲಿ ಏರ್ಪಡಿಸಿದ್ದ ಶ್ರೀರಾಮ ತಾರಕ ಹೋಮ ಮತ್ತು ಮೆರವಣಿಗೆಯಲ್ಲಿ ಚಂಡೆ ವಾದ್ಯವನ್ನು ಬಾರಿಸಿ ಸಾವಿರಾರು ಜನರು ಬೆರಗಿನಿಂದ ಮೆಚ್ಚುಗೆ ವ್ಯಕ್ತಪಡಿಸುವಂತೆ ಸೈ ಎನಿಸಿಕೊಂಡರು.
ಉಡುಪಿ ಜಿಲ್ಲೆಯ ಕಾರ್ಕಳದಿಂದ ಚಂಡೆವಾದ್ಯದ ಗುರುಗಳಾದ ಹರೀಶ್ ಕುಮಾರ್ರನ್ನು ಕರೆಸಿಕೊಂಡು ಶಾಸ್ತ್ರೀಯವಾಗಿ ಅಭ್ಯಾಸ ಮಾಡಲು ತೀರ್ಮಾನಿಸಿದ ಕುದೂರು ಗ್ರಾಮದ ಇಂದ್ರ ಎಂಬ ಮಹಿಳೆ ಒಂದು ತಂಡ ಕಟ್ಟಿಕೊಂಡು ಅಭ್ಯಾಸದಲ್ಲಿ ತೊಡಗಿದರು. ಅಷ್ಟರಲ್ಲಿ ಅಯೋಧ್ಯೆ ಕಾರ್ಯಕ್ರಮದ ಸಲುವಾಗಿ ಕುದೂರು ಗ್ರಾಮ ಸಜ್ಜಾಗತೊಡಗಿತ್ತು. ಆ ಕಾರ್ಯಕ್ರಮದ ರಾಜಬೀದಿಯಲ್ಲಿ ರಾಮದೇವರ ಮುಂದೆ ನಾವು ಚಂಡೆವಾದ್ಯ ನುಡಿಸಬೇಕೆಂದು ತಮ್ಮ ಗುರುಗಳಲ್ಲಿ ಕೇಳಿಕೊಂಡರು. ಆಗ ಗುರುಗಳು ಹೇಳಿದ್ದು, ನಾನೆಷ್ಟೇ ಚನ್ನಾಗಿ ಹೇಳಿಕೊಟ್ಟರು ಒಂದು ವಾರದಲ್ಲಿ ಚನ್ನಾಗಿ ನುಡಿಸಿ ಜನರಿಂದ ಭೇಷ್ ಎನಿಸಿಕೊಳ್ಳುವುದು ಕಷ್ಟ ಎಂದು ಹೇಳಿದ್ದಾರೆ. ಆದರೆ ಹಠಕ್ಕೆ ಬಿದ್ದ ಹೆಣ್ಣು ಮಕ್ಕಳು ನೀವು ನಮಗೆ ಹೇಳಿಕೊಡಿ, ಹಗಲು ರಾತ್ರಿ ಅಭ್ಯಾಸ ಮಾಡಿ ಕಲಿಯುತ್ತೇವೆ ಎಂದು ದಂಬಾಲು ಬಿದ್ದಿದ್ದಾರೆ. ಇವರ ಆಸಕ್ತಿಯನ್ನು ಕಂಡು ಗುರುಗಳು ಹೇಳಿಕೊಟ್ಟಿದ್ದಾರೆ. ಹಗಲು ರಾತ್ರಿ ಎನ್ನದೆ ಸತತವಾಗಿ ಅಭ್ಯಾಸ ಮಾಡಿ ಎಲ್ಲರಿಂದಲೂ ಮೆಚ್ಚುಗೆಯನ್ನು ಪಡೆದಿದ್ದಾರೆ.ಶ್ರದ್ಧೆಯೊಂದಿದ್ದರೆ ಏನನ್ನು ಬೇಕಾದರೂ ಕಲಿಯಬಹುದು ಎಂಬುದನ್ನು ಕುದೂರು ಗ್ರಾಮದ ಮಹಿಳೆಯರು ಮಾಡಿ ತೋರಿಸಿದ್ದಾರೆ.
ಕುದೂರು ಗ್ರಾಮದ ಮಹಿಳಾ ತಂಡ ಚಂಡೇವಾದ್ಯವನ್ನು ಅಯೋಧ್ಯ ರಾಮಮಂದಿರದ ಲೋಕಾರ್ಪಣೆ ದಿನದ ಸಂದರ್ಭದಲ್ಲಿ ಕುದೂರು ಗ್ರಾಮದಲ್ಲಿ ನುಡಿಸಿ ಜನಮೆಚ್ಚುಗೆ ಪಡೆದರು.