ಚನ್ನಪಟ್ಟಣ: ಪತ್ರಿಕಾ ವಿತರಕರು ಸೂರ್ಯ ಉದಯಿಸುವ ಮುನ್ನವೇ ದುಡಿಯುವ ಕಾಯಕ ಯೋಗಿಗಳಾಗಿದ್ದು ಅವರ ಕಾರ್ಯ ಶ್ಲಾಘನೀಯ ಎಂದು ಶುಭೋದಯ ಸಾಂಸ್ಕೃತಿಕ ಸ್ನೇಹ ಬಳಗದ ಕಾರ್ಯದರ್ಶಿ ರಾಂಪುರ ಮಲ್ಲೇಶ್ ತಿಳಿಸಿದರು.
ವಿಶ್ವಪತ್ರಿಕಾ ವಿತರಕರ ದಿನಾಚರಣೆ ಅಂಗವಾಗಿ ಚನ್ನಪಟ್ಟಣದ ಕೋಟೆ ಬಡಾವಣೆಯ ನ್ಯೂ ಮಿಲೇನಿಯಂ ಶಾಲೆಯಲ್ಲಿ ಹಿರಿಯ ಪತ್ರಿಕಾ ವಿತರಕ ಎಂ.ಶಿವಮಾಧು ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ ಸುಮಾರು ೩೭ ವರ್ಷಗಳಿಂದ ಪತ್ರಿಕಾ ವಿತರಕರಾಗಿ, ಹಂಚಿಕೆದಾರರಾಗಿ ಹಾಗೂ ಪತ್ರಿಕಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಎಂ. ಶಿವಮಾದು ಪತ್ರಿಕೆ ವಿತರಣೆಯಿಂದಲೇ ತಮ್ಮ ಬದುಕನ್ನು ಕಟ್ಟಿಕೊಂಡು ಸಾಧಕರಾಗಿ ಗುರುತಿಸಿಕೊಂಡಿದ್ದಾರೆ. ನೂರಾರು ಯುವಕರಿಗೆ ಕೆಲಸ ನೀಡಿದ್ದಾರೆ ಎಂದು ತಿಳಿಸಿದರು.ಪತ್ರಿಕಾ ವರದಿಗಾರರಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ಪತ್ರಕರ್ತರ ಸಂಘದಲ್ಲಿಯೂ ಕೆಲಸ ಮಾಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷರಾಗಿ ನಾಡು ನುಡಿ ಸೇವೆ ಮಾಡಿದ್ದಾರೆ. ಸಮಾಜಸೇವಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ಸಾಮಾಜಿಕ ಸೇವೆ ಅನನ್ಯ ಎಂದರು.
ಶಿಕ್ಷಣ ಸಂಯೋಜಕ ಯೋಗೇಶ್ ಚಕ್ಕೆರೆ ಮಾತನಾಡಿ, ಮಳೆಯಾಗಲಿ, ಬಿಸಿಲಾಗಲಿ, ಗಾಳಿಯಾಗಲಿ, ಯಾವ ಹವಾಮಾನವಿದ್ದರೂ ಸಹ ಪತ್ರಿಕೆಗಳನ್ನು ನಮ್ಮ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡುವುದು ಸುಲಭವಲ್ಲ. ಪತ್ರಿಕಾ ವಿತರಕರು ನಮ್ಮ ದಿನವನ್ನು ಮಾಹಿತಿ ಹಾಗೂ ಜ್ಞಾನದಿಂದ ಆರಂಭವಾಗುವಂತೆ ಮಾಡುವ ಸೇವೆಯನ್ನು ನಿರಂತರವಾಗಿ ಮಾಡುತ್ತಿದ್ದಾರೆ . ಜನಸಾಮಾನ್ಯರಿಗೆ ಸುದ್ದಿಯನ್ನು ತಲುಪಿಸುವ ಸೇತುವೆಯಂತೆ ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು.ಈ ಸಂದರ್ಭದಲ್ಲಿ ಶುಭೋದಯ ಸಾಂಸ್ಕೃತಿಕ ಬಳಗದ ಉಪಾಧ್ಯಕ್ಷ ,ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ದಪ್ಪ, ಖಜಾಂಚಿ ಸಿ. ಎಸ್. ಶ್ರೀಕಂಠಯ್ಯ, ಸಂಚಾಲಕ, ರಾಮು, ಪದಾಧಿಕಾರಿಗಳಾದ ಮೈನಾಯಕನಹಳ್ಳಿ ರಾಜು, ನ್ಯೂ ಮಿಲೇನಿಯಂ, ಶಾಲೆಯ ಕಾರ್ಯದರ್ಶಿ ಲಕ್ಷ್ಮಮ್ಮ, ಸಂಸ್ಥಾಪಕ ಸಿದ್ದರಾಜೇಗೌಡ ಇತರರು ಉಪಸ್ಥಿತರಿದ್ದರು.
ಪೊಟೋ೬ಸಿಪಿಟಿ೧:ಚನ್ನಪಟ್ಟಣದಲ್ಲಿ ವಿಶ್ವ ಪತ್ರಿಕಾ ವಿತರಕರ ದಿನಾಚರಣೆಯ ಅಂಗವಾಗಿ ಹಿರಿಯ ಪತ್ರಿಕಾ ವಿತರಕ ಎಂ.ಶಿವಮಾಧು ಅವರನ್ನು ಸನ್ಮಾನಿಸಿಸಲಾಯಿತು.