ವಿಶ್ವವಿಖ್ಯಾತ ಚನ್ನಕೇಶವ ದೇಗುಲ, ಸುತ್ತಲಿನ ಪರಿಸರ ಹಾಳುಗೆಡವಿದ ಅಶುಚಿತ್ವ

KannadaprabhaNewsNetwork |  
Published : Nov 26, 2025, 01:15 AM IST
ಬೇಲೂರು  ಫೋಟೊ  ಚನ್ನಕೇಶವ ದೇಗುಲದ ಬಳಿ   ಅಯ್ಯಪ್ಪಸ್ವಾಮಿ ಭಕ್ತರು, ಪ್ರವಾಸಿಗರು  ಅಡುಗೆ ಮಾಡಿ ನಂತರ    ಉಳಿಯುವ ಆಹಾರ ಪದಾರ್ಥಗಳನ್ನು ಎಲ್ಲೆಂದರಲ್ಲಿ   ಬಿಸಾಕಿ ಹೋಗುತ್ತಿದ್ದಾರೆ.    | Kannada Prabha

ಸಾರಾಂಶ

ವಿಶ್ವ ಪಾರಂಪರಿಕ ದೇಗುಲದ ಗೋಡೆಯ ಬಳಿ ಎಲ್ಲೆಂದರಲ್ಲಿ ಅಡುಗೆ ಮಾಡಿ ಅನ್ನದ ಗಂಜಿ ಬಸಿದು ಉಳಿದ ಆಹಾರವನ್ನು ದೇಗುಲದ ಪಕ್ಕದಲ್ಲೇ ಎಸೆದು ಹೋಗುತ್ತಾರೆ . ಈ ಬಗ್ಗೆ ಮಾಹಿತಿ ಇದ್ದರೂ ಜಾಣ ಮೌನಕ್ಕೆ ಶರಣಾಗಿರುವುದು ಏಕೆ ಎಂದು ಚನ್ನಕೇಶವನ ಭಕ್ತರು ಪ್ರಶ್ನೆ ಮಾಡುತ್ತಿದ್ದಾರೆ.

ಅಡುಗೆ ಮಾಡಿ ಊಟ ಸೇವಿಸಿ ತ್ಯಾಜ್ಯ ಎಲ್ಲೆಂದರಲ್ಲಿ ಬಿಸಾಡುವ ಪ್ರವಾಸಿಗರು । ಕಣ್ಮುಚ್ಚಿ ಕುಳಿತ ದೇಗುಲದ ಆಡಳಿತಾಧಿಕಾರಿಗಳ ವರಸೆಗೆ ಕಿಡಿಕಾರಿದ ಸ್ಥಳೀಯರು

ಕನ್ನಡಪ್ರಭ ವಾರ್ತೆ ಬೇಲೂರು ವಿಶ್ವವಿಖ್ಯಾತ ಚನ್ನಕೇಶವ ದೇಗುಲದ ಬಳಿ ಅಯ್ಯಪ್ಪಸ್ವಾಮಿ ಭಕ್ತರು, ಪ್ರವಾಸಿಗರು ಅಡುಗೆ ಮಾಡಿ ನಂತರ ಉಳಿಯುವ ಆಹಾರ ಪದಾರ್ಥ, ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬಿಸಾಕಿ ಹೋಗುತ್ತಿದ್ದು ಇದರಿಂದ ಶುಚಿತ್ವವಿಲ್ಲದೇ ದೇಗುಲ ಸುತ್ತಮುತ್ತಲಿನ ಪರಿಸರ ಹಾಳಾಗುತ್ತಿದೆ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.

ಇಲ್ಲಿನ ಶ್ರೀ ಚನ್ನಕೇಶವ ಸ್ವಾಮಿ ದೇಗುಲದ ಬಲಭಾಗದಲ್ಲಿ ಪ್ರವಾಸಿಗರು ಹಾಗೂ ಅಯ್ಯಪ್ಪ ಸ್ವಾಮಿ ಭಕ್ತರು ಅಡುಗೆ ಮಾಡಿ ತಿಂಡಿ, ಊಟ ಸೇವನೆ ಮಾಡಿ ತೆರಳುತ್ತಾರೆ. ಆದರೆ ತಮ್ಮ ಆಹಾರ ಸೇವನೆಯ ನಂತರ ಉಳಿದ ಪ್ಯಾಕೆಟ್‌ಗಳು, ತಿಂಡಿ ಪದಾರ್ಥಗಳು , ಅನ್ನ ಸಾಂಬಾರ್, ಪ್ಲಾಸ್ಟಿಕ್‌ ತಟ್ಟೆಗಳನ್ನು ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ಬಿಸಾಕಿ ಹೋಗುತ್ತಾರೆ. ಇದರಿಂದ ದೇಗುಲದ ಸುತ್ತಮುತ್ತಲಿನ ಪರಿಸರಕ್ಕೆ ಧಕ್ಕೆಯಾಗಿದ್ದು, ಭಕ್ತರಿಗೆ ಹಾಗೂ ಪ್ರವಾಸಿಗರು ಮೂಗು ಮುಚ್ಚಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇದಕ್ಕೆ ಸಂಬಂಧಪಟ್ಟಂತೆ ಹಲವಾರು ಬಾರಿ ಗಮನಕ್ಕೆ ತರಲಾಗಿದೆ. ಆದರೆ ದೇಗುಲದ ಆಡಳಿತಾಧಿಕಾರಿಗಳು ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ದೇಗುಲದ ಆದಾಯ ಮಾತ್ರ ನೋಡುವ ಅಧಿಕಾರಿಗಳು ಶುಚಿತ್ವದ ಬಗ್ಗೆ ಗಮನ ನೀಡುತ್ತಿಲ್ಲ.

ವಿಶ್ವ ಪಾರಂಪರಿಕ ದೇಗುಲದ ಗೋಡೆಯ ಬಳಿ ಎಲ್ಲೆಂದರಲ್ಲಿ ಅಡುಗೆ ಮಾಡಿ ಅನ್ನದ ಗಂಜಿ ಬಸಿದು ಉಳಿದ ಆಹಾರವನ್ನು ದೇಗುಲದ ಪಕ್ಕದಲ್ಲೇ ಎಸೆದು ಹೋಗುತ್ತಾರೆ . ಈ ಬಗ್ಗೆ ಮಾಹಿತಿ ಇದ್ದರೂ ಜಾಣ ಮೌನಕ್ಕೆ ಶರಣಾಗಿರುವುದು ಏಕೆ ಎಂದು ಚನ್ನಕೇಶವನ ಭಕ್ತರು ಪ್ರಶ್ನೆ ಮಾಡುತ್ತಿದ್ದಾರೆ.

ಈ ಬಗ್ಗೆ ಸ್ಥಳೀಯರಾದ ಕುಮಾರ ನಾಯಕ್ , ಆಟೋ ಚಾಲಕರಾದ ಕುಮಾರಸ್ವಾಮಿ , ತ್ರಿಮೂರ್ತಿ, ಶ್ರೀನಿವಾಸ್ ಮಾತನಾಡಿ, ಅಡುಗೆ ಮಾಡುವುದರಲ್ಲಿ ತಪ್ಪಿಲ್ಲ. ಆದರೆ ಅದರ ಸ್ವಚ್ಛತೆಯ ಜವಾಬ್ದಾರಿಯನ್ನೂ ಹೊತ್ತುಕೊಳ್ಳಬೇಕು. ದೇಗುಲದ ಪಾವಿತ್ರ್ಯತೆಯನ್ನು ಕಾಪಾಡಬೇಕು. ದೇಗುಲ ಆಡಳಿತ ಇದನ್ನು ಗಮನಿಸದೆ ಮೌನವಾಗಿರುವುದು ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ದೇಗುಲದ ಆಡಳಿತ ಅಧಿಕಾರಿಗಳಿಗೆ ಹಲವು ಬಾರಿ ಸಾರ್ವಜನಿಕರು ದೂರು ನೀಡಿದ್ದರೂ, ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ದೇಗುಲದ ಸುತ್ತಲೂ ಅಡುಗೆ ಮಾಡಲು ನಿಗದಿತ ಸ್ಥಳವಿಲ್ಲ, ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಇಲ್ಲ , ಇದಕ್ಕೆ ಸಂಬಂಧಪಟ್ಟಂತೆ ತಿಳಿವಳಿಕೆ ನೀಡಲು ಸೂಚನಾ ಫಲಕಗಳ ಕೊರತೆಯಿದೆ. ದೇಗುಲದಲ್ಲಿ ಆಡಳಿತಾಧಿಕಾರಿಗಳು ಇದ್ದಾರೋ ಇಲ್ಲವೋ ಎಂಬುದು ಯಕ್ಷ ಪ್ರಶ್ನೆಯಾಗಿ ಉಳಿದಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಿಡ್ನಾಪ್‌ ಆದ 1094 ಮಕ್ಕಳು ಇನ್ನೂ ಪತ್ತೆಯಾಗಿಲ್ಲ!
ತನಗೆ ಮದುವೆ ಮಾಡಿದ್ದ ಪುರೋಹಿತಗೂ ರಾಜೀವ್‌ ಲಾಂಗ್‌ ತೋರಿಸಿ ಧಮ್ಕಿ