ಅದ್ವೈತ ವೇದಾಂತ ಅನುಭವಾಮೃತವಾಗಿ ಕನ್ನಡಿಗರಿಗೆ ಉಣಬಡಿಸಿದ ಸಾಹಿತಿ ಮಲ್ಲಿಕಾರ್ಜುನಪ್ಪ

KannadaprabhaNewsNetwork | Updated : Jun 25 2025, 12:35 AM IST

ಸಾಹಿತಿ ದಿ।। ಎಸ್.ಮಲ್ಲಿಕಾರ್ಜುನಪ್ಪ ಅವರು ಕವಿ ಮಹಲಿಂಗರಂಗ ಅವರ ಅದ್ವೈತ ವೇದಾಂತವನ್ನು ಅನುಭವಾಮೃತವಾಗಿ ಕನ್ನಡಿಗರಿಗೆ ಉಣಬಡಿಸಿದ್ದಾರೆ. ಕವಿಯ ಬಗ್ಗೆ ಸಂಶೋಧನೆಗಳ ಮೂಲಕ 18 ಕೃತಿಗಳನ್ನು ಹೊರತಂದು ಜಗತ್ತಿಗೆ ಮಹಲಿಂಗರಂಗರ ಅಸ್ಮಿತೆ ಬಗ್ಗೆ ತಿಳಿಸಿದ್ದಾರೆ ಎಂದು ತಾಲೂಕು ಕಸಾಪ ಅಧ್ಯಕ್ಷೆ ಕೆ.ಸುಜಾತಮ್ಮ ರಾಜು ಹೇಳಿದ್ದಾರೆ.

- ಜಗಳೂರು ತಾಲೂಕು ಕಸಾಪ ಅಧ್ಯಕ್ಷೆ ಕೆ.ಸುಜಾತಮ್ಮ ರಾಜು ಅಭಿಮತ

- - -

ಕನ್ನಡಪ್ರಭ ವಾರ್ತೆ ಜಗಳೂರು

ಸಾಹಿತಿ ದಿ।। ಎಸ್.ಮಲ್ಲಿಕಾರ್ಜುನಪ್ಪ ಅವರು ಕವಿ ಮಹಲಿಂಗರಂಗ ಅವರ ಅದ್ವೈತ ವೇದಾಂತವನ್ನು ಅನುಭವಾಮೃತವಾಗಿ ಕನ್ನಡಿಗರಿಗೆ ಉಣಬಡಿಸಿದ್ದಾರೆ. ಕವಿಯ ಬಗ್ಗೆ ಸಂಶೋಧನೆಗಳ ಮೂಲಕ 18 ಕೃತಿಗಳನ್ನು ಹೊರತಂದು ಜಗತ್ತಿಗೆ ಮಹಲಿಂಗರಂಗರ ಅಸ್ಮಿತೆ ಬಗ್ಗೆ ತಿಳಿಸಿದ್ದಾರೆ ಎಂದು ತಾಲೂಕು ಕಸಾಪ ಅಧ್ಯಕ್ಷೆ ಕೆ.ಸುಜಾತಮ್ಮ ರಾಜು ಹೇಳಿದರು.

ಇತ್ತೀಚೆಗೆ ನಿಧನರಾದ ಸಾಹಿತಿ ಎಸ್.ಮಲ್ಲಿಕಾರ್ಜುನಪ್ಪ ಸ್ಮರಣಾರ್ಥ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಂಸ್ಮರಣೆ ಕಾರ್ಯಕ್ರಮದಲ್ಲಿ ಚಿಂತಕರು, ಸಾಹಿತಿಗಳು ಮಲ್ಲಿಕಾರ್ಜುನಪ್ಪ ಅವರ ಭಾವಚಿತ್ರಕ್ಕೆ ಪುಷ್ಪನಮನ ಅರ್ಪಿಸಿ ಅವರು ಮಾತನಾಡಿದರು.

ಮಲ್ಲಿಕಾರ್ಜುನಪ್ಪ ಅವರು ಮಹಲಿಂಗರಂಗರ ಕುರಿತಾಗಿ ಸಂಶೋಧಿಸಿದ 18 ಪುಸ್ತಕಗಳಲ್ಲಿ ಅದಿಷ್ಠಾನವೂ ಒಂದು. ಐತಿಹಾಸಿಕ ಪ್ರಜ್ಞೆ, ಸಾಂಸ್ಕೃತಿಕ ಕಾಳಜಿಗಳು ಮತ್ತು ಪ್ರಚಾರವಿಲ್ಲದೇ ತಮ್ಮದೇ ಸಾಹಿತ್ಯ ಮತ್ತು ಸಂಶೋಧನಾ ಲೋಕದಲ್ಲಿ ಅವರು ತೊಡಗಿದ್ದರು. ಸರ್ವಜ್ಞನ ಜನ್ಮಸ್ಥಳ ಕುರಿತಾಗಿ ಅವರು ಸಾಕಷ್ಟು ಸಂಶೋಧನೆಗಳನ್ನು ಮಾಡಿದ್ದರು. ಕನ್ನಡದ ಅಪ್ಪಟ ಅಭಿಮಾನಿ ಅನುಭಾವ ಕವಿ ಮಹಲಿಂಗರಂಗ ಅವರ ಅದ್ವೈತ ವೇದಾಂತದ ಕುರಿತು ಅವರ ಸಂಶೊಧನೆಗಳು ನಿಜಕ್ಕೂ ನಿತ್ಯ ಸ್ಮರಣೀಯ ಎಂದರು.

ಪ್ರೊ.ನಾಗಲಿಂಗಪ್ಪ ಮಾತನಾಡಿ, ಕೊಣಚಗಲ್ ರಂಗನಾಥ ಬೆಟ್ಟದಲ್ಲಿ ಮಹಲಿಂಗರಂಗರ ಸಮಾಧಿಯಿದ್ದು, ಅದನ್ನು ಅನ್ವೇಷಿಸಿ ಜಗತ್ತಿಗೆ ತಿಳಿಸಿದರು. ಆ ಸಮಾಧಿ ಬಗ್ಗೆ ಈಗಲೂ ಅನೇಕ ಸಾಹಿತಿಗಳಿಗೆ ಗೊಂದಲು ಎದ್ದಾಗ ಅದಕ್ಕೆ ಸಂಶೋಧನಾ ಕೃತಿಗಳನ್ನು ಹೊರತಂದು ಉತ್ತರಿಸಿದವರು. ಎಸ್.ಮಲ್ಲಿಕಾರ್ಜುನಪ್ಪ ಅವರ ವಯೋಸಹಜ ಸಾವು ಸಾಹಿತ್ಯಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.

ವಕೀಲರಾದ ಆರ್.ಓಬಳೇಶ್, ಹೋರಾಟಗಾರ ಹಾಗೂ ಪತ್ರಕರ್ತ ಧನ್ಯಕುಮಾರ್, ಸಾಹಿತ್ಯ ಪರಿಷತ್ ಸದಸ್ಯ ಬೆಲ್ಲದ ಬಸವರಾಜ್, ರೇವತಿ, ಹೋರಾಟಗಾರ ಹೊಸಕೆರೆ ಸತ್ಯಮೂರ್ತಿ, ಕಿಲಾರಿ ಕೃಷ್ಣಮೂರ್ತಿ, ಲೋಕೇಶ್ ಇದ್ದರು.

- - -

-23ಜೆಎಲ್ಆರ್ಚಿತ್ರ1:

ಜಗಳೂರು ಪಟ್ಟಣದ ತಾಪಂ ಸಭಾಂಗಣದಲ್ಲಿ ಸಾಹಿತಿ ದಿ. ಎಸ್.ಮಲ್ಲಿಕಾರ್ಜುನಪ್ಪ ಸ್ಮರಣೋತ್ಸವ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಗಣ್ಯರು ಪುಷ್ಪನಮನ ಸಲ್ಲಿಸಿದರು.