ಬೋಧನಾ ತರಬೇತಿ ಕಾರ್ಯಾಗಾರದಲ್ಲಿ ಡಾ.ವಿ.ಬಸವರಾಜ್ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ರಂಗಭೂಮಿ ಚಟುವಟಿಕೆಗಳ ಆಯಾಮಗಳನ್ನು ಶಿಕ್ಷಣ ಕ್ಷೇತ್ರದಲ್ಲಿ ಅಳವಡಿಸಿಕೊಂಡರೆ ಬೋಧನೆಯು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಪ್ರಶಿಕ್ಷಣಾರ್ಥಿಗಳು ಹೆಚ್ಚಿನ ವಿಷಯಗಳನ್ನು ಅರಿತು ಜ್ಞಾನವನ್ನು ಹೆಚ್ಚಿಸಿಕೊಳ್ಳುವುದರಿಂದ ಆತ್ಮಸ್ಥೈರ್ಯ ಬೆಳೆದು ಸಹನೆ ಮತ್ತು ತಾಳ್ಮೆ ಗಳಿಸಬಹುದು ಎಂದು ಡಾ.ವಿ.ಬಸವರಾಜ್ ಅಭಿಪ್ರಾಯಪಟ್ಟರು.ನಗರದ ಕೋಟೆ ರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಶಿಕ್ಷಣ ಮಹಾವಿದ್ಯಾಲಯದ ಆವರಣದಲ್ಲಿ ರಂಗಸೌರಭ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಏರ್ಪಡಿಸಿದ್ದ ದ್ವಿತೀಯ ಬಿಇಡಿ ಪ್ರಶಿಕ್ಷಣಾರ್ಥಿಗಳಿಗೆ ರಂಗಭೂಮಿ ಕಾರ್ಯಗಾರ, ಶಿಕ್ಷಣದಲ್ಲಿ ರಂಗ ಕಲೆ ಆಂಗಿಕ, ವಾಚಿಕ, ಆಹಾರ್ಯ, ಸಾತ್ವಿಕ ಅಭಿನಯಗಳ ಜೊತೆಗೆ ನವರಸಭರಿತ ಬೋಧನಾ ತರಬೇತಿ ಕಾರ್ಯಗಾರದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಅಭಿವ್ಯಕ್ತಿ ಶಿಕ್ಷಕರ ಸ್ವತ್ತಾಗಬೇಕು. ರಂಗಭೂಮಿ ಕ್ಷೇತ್ರವು ಜ್ಞಾನ, ಕ್ರಿಯೆ, ಚಟುವಟಿಕೆಗಳ ಜೊತೆಗೆ ವೈಚಾರಿಕತೆಯಿಂದ ಕೂಡಿದ ಆಲೋಚನೆಗಳು ಸೃಜನಶೀಲತೆಯನ್ನು ಅಭಿವ್ಯಕ್ತಿಸುತ್ತದೆ. ವೈಜ್ಞಾನಿಕತೆಯನ್ನು ರೂಢಿಸಿಕೊಂಡ ಶಿಕ್ಷಕ ವಿಮರ್ಶಾತ್ಮಕ ಚಿಂತನೆಗಳನ್ನು ಬೆಳೆಸಿಕೊಳ್ಳುತ್ತಾನೆ ಎಂದರು.ಉಪನ್ಯಾಸಕ ಡಾ.ಕೆ.ಮೋಹನ್ ಕುಮಾರ್ ಮಾತನಾಡಿ ರಂಗಭೂಮಿ ಮತ್ತು ಶಿಕ್ಷಣ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ನಾಟಕ ಮಕ್ಕಳ ಶೈಕ್ಷಣಿಕ ಶಿಸ್ತನ್ನು ಮೂಡಿಸಿ ಭಯವನ್ನು ದೂರಮಾಡುತ್ತದೆ ಎಂದರು.
ಈ ಸಂದರ್ಭದಲ್ಲಿ ರಾಘವೇಂದ್ರ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎ.ಜಿ.ಬಸವರಾಜಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಚಿನ್ಮಯ ಮಯೂರ ಯೋಗ, ಕ್ರೀಡಾ, ಸಾಂಸ್ಕೃತಿಕ ಸಂಸ್ಥೆಯ ಕಾರ್ಯದರ್ಶಿ ಎಂ.ಬಿ.ಮುರುಳಿ, ಉಪನ್ಯಾಸಕರಾದ ಬಿ.ಎಸ್.ನಟರಾಜ್, ಸುದರ್ಶನ, ಎಸ್.ಟಿ.ಪದ್ಮಶ್ರೀ, ಎಮ್.ಸ್ವಾತಿ, ಜಿ.ಎಸ್.ರಾಘವೇಂದ್ರ, ಅಧೀಕ್ಷಕ ಮಲ್ಲೇಶಪ್ಪ, ರಂಗಭೂಮಿ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿ ರಂಗ ನಿರ್ದೇಶಕ ಕೆ.ಪಿ.ಎಂ ಗಣೇಶಯ್ಯ, ಜಿಲ್ಲಾ ಮಟ್ಟದ ಅಸಾಧಾರಣ ಪ್ರತಿಭೆ ಪ್ರಶಸ್ತಿ ವಿಜೇತ ಕೆಪಿಎಂ ಗುರುದೇವ್ ಎಂ.ಬಿ.ಮಂಜುನಾಥ್, ಯು.ನಿಂಗಪ್ಪ ಇದ್ದರು.