ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಭಾವನಾತ್ಮಕ ಸಂಬಂಧ ಗಟ್ಟಿಗೊಳಿಸಲು ರಂಗಭೂಮಿ ಸಹಕಾರಿ

KannadaprabhaNewsNetwork | Published : Mar 28, 2025 12:33 AM

ರಾಮನಗರ: ಭಾವನಾತ್ಮಕ ಸಂಬಂಧವನ್ನು ಗಟ್ಟಿಗೊಳಿಸುವಲ್ಲಿ ಹಾಗೂ ಮಾನವೀಯತೆ ಬೆಳೆಸುವಲ್ಲಿ ರಂಗಭೂಮಿ ಕಲೆ ಸಹಕಾರಿಯಾಗಿದೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿಹೇಳಿದರು.

ರಾಮನಗರ: ಭಾವನಾತ್ಮಕ ಸಂಬಂಧವನ್ನು ಗಟ್ಟಿಗೊಳಿಸುವಲ್ಲಿ ಹಾಗೂ ಮಾನವೀಯತೆ ಬೆಳೆಸುವಲ್ಲಿ ರಂಗಭೂಮಿ ಕಲೆ ಸಹಕಾರಿಯಾಗಿದೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿಹೇಳಿದರು.

ನಗರದ ಸ್ಪೂರ್ತಿ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಜಿಲ್ಲಾ ರಂಗಭೂಮಿ ಕಲಾ ಬಳಗಗಳ ಒಕ್ಕೂಟದ ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆ ಸಮಾರಂಭ ಉದ್ಘಾಟಿಸಿದ ಅವರು, ರಂಗಭೂಮಿ ಕಲೆಯನ್ನು ಕಲಾವಿದರು ಮತ್ತು ಕಲಾಸಕ್ತರು ಹೆಚ್ಚೆಚ್ಚು ಪ್ರೋತ್ಸಾಹಿಸುವ ಮೂಲಕ ಅದನ್ನು ಉಳಿಸಿ ಬೆಳೆಸಬೇಕು ಎಂದು ಹೇಳಿದರು.

ರಂಗಭೂಮಿ ಸಮಾಜದ ಪ್ರತಿಬಿಂಬವಾಗಿದ್ದು, ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಕೆಲಸವನ್ನು ಮಾಡುತ್ತಿದೆ. ರಂಗಭೂಮಿಗೆ ಸಾಮಾಜಿಕ ವ್ಯವಸ್ಥೆಯಲ್ಲಿ ವಿಶಿಷ್ಟವಾದ ಸ್ಥಾನವಿದ್ದು, ಜಿಲ್ಲೆಯ ರಂಗಭೂಮಿಯ ಗತವೈಭವ ನಾವು ಮೆರೆಯಲು ಸಾಧ್ಯವಿಲ್ಲ. ರಂಗಭೂಮಿ ವೈಭವವನ್ನು ಮತ್ತೆ ಮರುಕಳಿಸುವಂತೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.

ರಂಗಭೂಮಿ ಅದ್ಭುತವಾದ ಕಲೆ. ಜಗತ್ತಿನಲ್ಲಿ ವಿಶ್ವಪ್ರಸಿದ್ಧಿ ಪಡೆದಿರುವ ಖ್ಯಾತನಾಮರೆಲ್ಲರು ರಂಗಭೂಮಿ ಹಿನ್ನೆಲೆಯಿಂದ ಬಂದವರು. ಸಿನಿಮಾ ಕ್ಷೇತ್ರದಲ್ಲಿರುವ ಮೇರು ನಟರೆಲ್ಲರು ರಂಗಭೂಮಿ ಕ್ಷೇತ್ರದ ಕೊಡುಗೆ ಎಂದು ಹೇಳಿದರು.

ರಂಗ ಕಲಾವಿದರು ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತಿದ್ದಾರೆ. ರಂಗ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸ ಆಗಬೇಕಿದೆ. ಆಗ ಮಾತ್ರ ರಂಗಕಲೆ ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ರಂಗಭೂಮಿ ಕ್ಷೇತ್ರಕ್ಕೆ ರಾಮನಗರ ಜಿಲ್ಲೆಯ ಅನೇಕ ಕಲಾವಿದರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಆದರೆ, ಈ ಜಿಲ್ಲೆಯಲ್ಲಿ ಸುಸಜ್ಜಿತವಾದಿ ರಂಗ ಮಂದಿರ ಇಲ್ಲದಿರುವುದು ನೋವಿನ ಸಂಗತಿ. ಈ ಕೊರಗನ್ನು ನಿವಾರಿಸುವ ಸಲುವಾಗಿ ಅಂಬೇಡ್ಕರ್ ಭವನವನ್ನು ರವೀಂದ್ರ ಕಲಾಕ್ಷೇತ್ರದ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ ಎಂದು ಶೇಷಾದ್ರಿ ಹೇಳಿದರು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಆರ್.ಕೆ.ಬೈರಲಿಂಗಯ್ಯ ಮಾತನಾಡಿ, ರಾಮನಗರ ರಂಗಭೂಮಿ ಕಲಾವಿದರನ್ನು ಅತಿ ಹೆಚ್ಚು ಹೊಂದಿರುವ ಜಿಲ್ಲೆ. ಇಲ್ಲಿ ಮಹಿಳೆಯರು ರಂಗಭೂಮಿ ಕ್ಷೇತ್ರಕ್ಕೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ ಎಂದರು.

ಕಲಾವಿದರನ್ನು ಒಂದೆಡೆ ಸೇರಿ ನಾಟಕ ಪ್ರದರ್ಶನ ಮಾಡುವುದು ಕಷ್ಟಸಾಧ್ಯ. ರಂಗ ಕಲೆ ಉಳಿಸಿ ಬೆಳೆಸುವ ಕೆಲಸ ಆಗಬೇಕು. ಕಲೆಯನ್ನು ಪ್ರೋತ್ಸಾಹಿಸುವ ಪೋಷಕರು ಇರುವುದರಿಂದಲೇ ರಂಗಭೂಮಿ ಕ್ಷೇತ್ರ ಉಳಿದಿದೆ ಎಂದು ತಿಳಿಸಿದರು.

ಜಿಲ್ಲಾ ರಂಗಭೂಮಿ ಕಲಾ ಬಳಗಗಳ ಒಕ್ಕೂಟದ ಅಧ್ಯಕ್ಷ ಬೈರೇಗೌಡ ಮಾತನಾಡಿ, ಕಲಾವಿದರನ್ನು ಒಂದೆಡೆ ಸೇರಿಸಿ ನಾಟಕ ಪ್ರದರ್ಶನ ಆಯೋಜನೆಗೆ ಒತ್ತು ನೀಡುತ್ತೇವೆ. ಆ ಮೂಲಕ ರಂಗಭೂಮಿ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಆಕಾಡೆಮಿ ಸದಸ್ಯ ಕುಂಬಾಪುರ ಬಾಬು, ಜೆಡಿಎಸ್ ತಾಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ ಮಾತನಾಡಿದರು. ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಸತೀಶ್, ಕಲಾವಿದರಾದ ವಿಜಿ, ಸಮದ್, ಶಿವಾನಂದಮೂರ್ತಿ, ಲಿಂಗೇಗೌಡ ಮತ್ತಿತರರು ಉಪಸ್ಥಿತರಿದ್ದರು.

27ಕೆಆರ್ ಎಂಎನ್ 2.ಜೆಪಿಜಿ

ರಾಮನಗರದ ಸ್ಪೂರ್ತಿ ಭವನದಲ್ಲಿ ನಡೆದ ವಿಶ್ವ ರಂಗಭೂಮಿ ದಿನಾಚರಣೆ ಸಮಾರಂಭದಲ್ಲಿ ಹಿರಿಯ ಕಲಾವಿದರನ್ನು ಸನ್ಮಾನಿಸಲಾಯಿತು.