ಕಾಲೇಜಲ್ಲಿ ರಂಗಭೂಮಿ ವಿಭಾಗ ಅಗತ್ಯ: ಜಯಶ್ರೀ

KannadaprabhaNewsNetwork |  
Published : Feb 12, 2026, 02:15 AM IST
Sansa bayalu raṅgamandira 1 | Kannada Prabha

ಸಾರಾಂಶ

ಕಾಲೇಜುಗಳಲ್ಲಿ ನಾಟಕ ತರಬೇತಿಯ ವಿಭಾಗವನ್ನು ತೆರೆಯಲು ಶಿಕ್ಷಣ ಸಚಿವರು ಕ್ರಮ ವಹಿಸಬೇಕಿದ್ದು, ರಂಗಭೂಮಿ ಪ್ರಿಯರು ಈ ಸಂಬಂಧ ಸರ್ಕಾರವನ್ನು ಒತ್ತಾಯಿಸಬೇಕಿದೆ ಎಂದು ಹಿರಿಯ ರಂಗಕರ್ಮಿ ಬಿ. ಜಯಶ್ರೀ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಾಲೇಜುಗಳಲ್ಲಿ ನಾಟಕ ತರಬೇತಿಯ ವಿಭಾಗವನ್ನು ತೆರೆಯಲು ಶಿಕ್ಷಣ ಸಚಿವರು ಕ್ರಮ ವಹಿಸಬೇಕಿದ್ದು, ರಂಗಭೂಮಿ ಪ್ರಿಯರು ಈ ಸಂಬಂಧ ಸರ್ಕಾರವನ್ನು ಒತ್ತಾಯಿಸಬೇಕಿದೆ ಎಂದು ಹಿರಿಯ ರಂಗಕರ್ಮಿ ಬಿ. ಜಯಶ್ರೀ ಹೇಳಿದರು.

ಬುಧವಾರ ರವೀಂದ್ರ ಕಲಾಕ್ಷೇತ್ರದ ಸಂಸ ಬಯಲು ರಂಗಮಂದಿರದಲ್ಲಿ ರಂಗಸೌರಭ ವತಿಯಿಂದ ಏರ್ಪಡಿಸಿರುವ ರಾಜ್ಯ ಮಟ್ಟದ ಅಂತರ್ ಕಾಲೇಜು ರಂಗ ಸ್ಪರ್ಧೆ ‘ಸೌರಭ - 2026’ ಉದ್ಘಾಟಿಸಿ ಅವರು ಮಾತನಾಡಿದರು.

ಬಿ.ವಿ.ಕಾರಂತರ ಕಾಲದಿಂದಲೂ ಎಲ್ಲ ಕಾಲೇಜಿನಲ್ಲಿ ನಾಟಕ ವಿಭಾಗ ತೆರೆಯಬೇಕು ಎಂಬ ಪ್ರಯತ್ನ ನಡೆಯುತ್ತಿದೆ. ಇನ್ನಾದರೂ ಇದು ಸಾಕಾರಗೊಳ್ಳಬೇಕು. ಕ್ರೀಡೆಯಂತೆಯೆ ರಂಗಭೂಮಿ ಪಾಠ ಇರಬೇಕು. ಈ ಬಗ್ಗೆ ಶಿಕ್ಷಣ ಸಚಿವರನ್ನು ಒತ್ತಾಯಿಸಬೇಕಿದೆ. ಜತೆಗೆ ನಾಟಕ ವಿಮರ್ಷೆ ಮಾಡುವ ಲೇಖಕರಿಗೆ ಪತ್ರಿಕೆಗಳು ಪ್ರಾಶಸ್ತ್ಯ ನೀಡಿ ಬೆಳೆಸಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳು ರಂಗಭೂಮಿಯಿಂದ ದೂರವಾಗಿದ್ದಾರೆ. ಮೊಬೈಲಿನಲ್ಲಿ ಮುಳುಗಿದರೆ ಕಲ್ಪನಾ ಶಕ್ತಿ ಬೆಳೆಯುವುದಿಲ್ಲ. ವ್ಯಕ್ತಿತ್ವ ವಿಕಸನ ಆಗುವುದಿಲ್ಲ. ಯುವ ಸಮುದಾಯ ರಂಗಭೂಮಿಗೆ ಬಂದರೆ ಪರಸ್ಪರ ಆತ್ಮೀಯತೆ, ಒಬ್ಬರನ್ನೊಬ್ಬರು ಪ್ರೀತಿಸುವ ಗುಣ, ಶಾಂತಸ್ವಭಾವ ಬೆಳೆಯುತ್ತದೆ. ಅನಗತ್ಯ ಉದ್ವೇಗ, ಕೋಪ ಕಡಿಮೆಯಾಗುತ್ತದೆ. ವ್ಯಕ್ತಿತ್ವ ಬೆಳೆಯುತ್ತದೆ ಎಂದರು.

‘ಕನ್ನಡಪ್ರಭ’ ಹಾಗೂ ‘ಏಷ್ಯಾನೆಟ್ ಸುವರ್ಣ ನ್ಯೂಸ್’ ಪ್ರಧಾನ ಸಂಪಾದಕ ರವಿ ಹೆಗಡೆ ಮಾತನಾಡಿ, ನಾಟಕ‌ದ ರೀತಿಯ ಕಲಾ ಹವ್ಯಾಸಗಳು ಮುಂದೆ ಯಾವುದೇ ಕ್ಷೇತ್ರದ ಉದ್ಯೋಗಕ್ಕೆ ಸೇರಿದರು ಅಲ್ಲಿ ಸೃಜನಾತ್ಮಕ ಗುಣ, ಮಾನವೀಯ ಮೌಲ್ಯ ಹೊಂದಲು ಸಾಧ್ಯವಾಗುತ್ತದೆ. ಕಾಲೇಜಿಗೂ ಮೊದಲು ನಮ್ಮಲ್ಲಿ ಪರಿಪಕ್ವತೆ ಇರಲ್ಲ. ಉದ್ಯೋಗ, ಜೀವನ ಕಟ್ಟಿಕೊಳ್ಳುವ ವಿಚಾರದಲ್ಲಿ ಸ್ಪಷ್ಟ ಪರಿಕಲ್ಪನೆ ಇರುವುದಿಲ್ಲ. ಕಾಲೇಜಿನ ದಿನಗಳಲ್ಲಿ ನಮ್ಮ ಜೊತೆಗೂಡುವ ಹವ್ಯಾಸ ಜೀವನದುದ್ದಕ್ಕೂ ಬೆಳೆದುಕೊಂಡು ಹೋಗುತ್ತದೆ ಎಂದರು.

ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ ಮಾತನಾಡಿ, ಕನ್ನಡ ರಂಗಭೂಮಿಗೆ ಇಂದು ಅಗತ್ಯವಾದುದು ಪ್ರಚಾರ. ಬುಕ್ ಮೈ ಶೋ ಅಂತಹ ಪ್ಲಾಟ್ಫಾರ್ಮ್ ನಲ್ಲಿ 60-80 ಟಿಕೆಟ್‌ ಮಾರಾಟವಾದರೆ ದೊಡ್ಡದು ಎಂದು ಬೀಗುವ ಪರಿಸ್ಥಿತಿಯಲ್ಲಿದ್ದೇವೆ. ಹೀಗಾಗಿ ಕಾಲೇಜು ರಂಗಭೂಮಿಯ ಜವಾಬ್ದಾರಿ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದ್ದು, ಮಾದಕ ವ್ಯಸನ, ಧರ್ಮ ಸಂಘರ್ಷ, ದೂರ್ತ ರಾಜಕಾರಣದ ಬಗ್ಗೆ ಯುವಕರನ್ನು ಜಾಗೃತಗೊಳಿಸಬೇಕಿದೆ ಎಂದರು.

ರಂಗಸೌರಭ ಸಂಚಾಲಕ ಆರ್.ಪಿ.ಉಮಾಶಂಕರ್, ಸದಸ್ಯ ಪ್ರಮೋದ್ ಶೆಟ್ಟಿ, ಮಾಲತೇಶ ಬಡಿಗೇರ, ವಲ್ಲಭ, ಅನಿರುದ್ಧ, ಎಂ.ಜಿ. ನವೀನ್‌ ಇದ್ದರು.

‘ಕನ್ನಡಪ್ರಭ’ ಪ್ರಶಸ್ತಿ

ರಾಜ್ಯ ಮಟ್ಟದ ಅಂತರ್ ಕಾಲೇಜು ರಂಗ ಸ್ಪರ್ಧೆ- 2026 ‘ಸೌರಭ ’ ದಲ್ಲಿ ವಿಜೇತವಾಗುವ ಒಂದು ತಂಡಕ್ಕೆ ‘ಕನ್ನಡಪ್ರಭ’ ಹೆಸರಿನಲ್ಲೂ ಪ್ರಶಸ್ತಿ ಸಿಗಲಿದೆ. ಎಲ್ಲಾ ಸ್ಪರ್ಧೆಗಳಲ್ಲಿ ಅತ್ಯುತ್ತಮ ನಿರ್ವಹಣೆ ತೋರಿದ ಕಾಲೇಜಿಗೆ ‘ಪದ್ಮಭೂಷಣ ಡಾ. ರಾಜ್‌ಕುಮಾರ್‌ ಸರ್ವೋತ್ತಮ ಕಾಲೇಜು’ ಪಾರಿತೋಷಕ ನೀಡಲಾಗುತ್ತಿದೆ. ಈ ಪಾರಿತೋಷಕವನ್ನು ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಪ್ರಾಯೋಜಿಸಿದ್ದಾರೆ. 70 ಕೆಜಿ ತೂಕವುಳ್ಳ ಕಂಚಿನ ಮಹಾನಟನ ಮೂರ್ತಿಯನ್ನು ಕನ್ನಡ ನಾಡಿನ ಹೆಸರಾಂತ ಕಲಾ ನಿರ್ದೇಶಕ ಶಶಿಧರ ಅಡಮ ನಿರ್ಮಿಸಿಕೊಟ್ಟಿದ್ದಾರೆ. ನಟಿ ಗಿರಿಜಾ ಲೋಕೇಶ್‌ ಅವರ ಹೆಸರಿನಲ್ಲೂ ಪ್ರಶಸ್ತಿ ಇದೆ.

ನಟನೆ ಚಿಕ್ಕವರಿಂದ‌‌ ದೊಡ್ಡವರವರೆಗೆ ಸಹಜವಾಗಿ ಬರುವ ಪ್ರಕ್ರಿಯೆ. ಇದನ್ನು ಸೃಜನಶೀಲವಾಗಿ ಬೆಳೆಸಿಕೊಳ್ಳಲು ರಂಗಸೌರಭ ರೀತಿಯ ವೇದಿಕೆ ಬೇಕಾಗುತ್ತದೆ. ರಂಗಸೌರಭ ಅತ್ಯುತ್ತಮವಾಗಿ ಆರನೇ ವರ್ಷಕ್ಕೆ ಕಾಲಿಟ್ಟಿರುವುದು ಸಂತಸದಿಂದ ವಿಚಾರ. ‘ಕನ್ನಡಪ್ರಭ’ದಲ್ಲಿ ಹಿಂದೆ ಕಾಲೇಜು ರಂಗ ಎಂಬ ವಿಶೇಷ ಪುಟವಿತ್ತು. ಕಾಲೇಜು ವಿದ್ಯಾರ್ಥಿಗಳ ಸೃಜನಾತ್ಮಕ ಕಾರ್ಯಗಳಿಗೆ ವೇದಿಕೆಯಾಗಿತ್ತು. ಅದರಿಂದ ಸಾಕಷ್ಟು ಲೇಖಕರು ರೂಪುಗೊಂಡಿದ್ದರು. ಜತೆಗೆ ಪುರವಣಿಯಲ್ಲಿ ರಂಗ ಚಟುವಟಿಕೆ, ನಾಟಕ ವಿಮರ್ಷೆ ಪ್ರಕಟ ಗಮನಹರಿಸಲಿದ್ದೇವೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೈರತಿ ವಿರುದ್ಧ ಸಿಐಡಿ ಲುಕೌಟ್‌ ನೋಟಿಸ್‌
ಇಂಟರ್ನೆಟ್‌ ಸದ್ಭಳಕೆ, ಜಾಗೃತಿ ಅಗತ್ಯ: ಜವರೇಗೌಡ ಕಿವಿಮಾತು