- ಕುವೆಂಪು ಕಲಾಮಂದಿರದಲ್ಲಿ ಲಕ್ಷ್ಮಣ ತುಕಾರಾಂ ಗೋಲೆ ನಾಟಕ ಪ್ರದರ್ಶನ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಸಮಾಜ ಪರಿವರ್ತನೆಗೆ ನಾಂದಿಯಾದ ನಾಟಕಗಳನ್ನು ಪ್ರತಿಯೊಬ್ಬರೂ ವೀಕ್ಷಿಸುವ ಮೂಲಕ ಕಲೆಯನ್ನು ಪ್ರೋತ್ಸಾಹಿಸುವಂತೆ ಬಸವತತ್ವ ಪೀಠದ ಪೀಠಾಧ್ಯಕ್ಷ ಡಾ. ಬಸವ ಮರುಳಸಿದ್ದ ಸ್ವಾಮೀಜಿ ಹೇಳಿದರು.ಕುವೆಂಪು ಕಲಾಮಂದಿರದಲ್ಲಿ ಬಸವತತ್ವ ಪೀಠ, ಕಲಾ ಸೇವಾಸಂಘ, ಆಶಾಕಿರಣ ಚಾರಿಟಬಲ್ ಟ್ರಸ್ಟ್, ಲಯನ್ ಸಂಸ್ಥೆ, ಸುಗಮ ಸಂಗೀತ ಗಂಗಾ, ಎಐಟಿ, ಆಶ್ರಯ ಫೌಂಡೇಷನ್, ಕಲ್ಕಟ್ಟೆ ಪುಸ್ತಕದ ಮನೆ, ಜೆಸಿ ಸಂಸ್ಥೆ, ಪೂರ್ವಿ ಸುಗಮಸಂಗೀತ ಅಕಾಡೆಮಿ ಆಶ್ರಯದಲ್ಲಿ ನಡೆದ ''''''''ಲಕ್ಷ್ಮಣ ತುಕಾರಾಂ ಗೋಲೆ'''''''' ನಾಟಕ ಪ್ರದರ್ಶನದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.ದೂರದರ್ಶನ ಮನುಷ್ಯನನ್ನು ಚಿಕ್ಕದಾಗಿ ತೋರಿಸಿದರೆ, ಸಿನಿಮಾ ದೊಡ್ಡದಾಗಿ ತೋರಿಸುತ್ತದೆ. ರಂಗಭೂಮಿ ಮಾತ್ರ ಮನುಷ್ಯನನ್ನು ಮನುಷ್ಯನಾಗಿ ಬಿಂಬಿಸುತ್ತದೆ ಎಂದು ವಿಶ್ಲೇಷಿಸಿದರು.ವಾಸ್ತವದ ರಂಗಭೂಮಿ ಮನುಷ್ಯನನ್ನು ಮನುಷ್ಯನಾಗಿ ತೋರಿಸುವ ಕಲಾ ಪ್ರಕಾರವೇ ನಾಟಕ. ಪಾತಕ ಲೋಕದ ಅಪರಾಧ ದಿಂದ ಹೊರಬಂದು ಗಾಂಧೀಜಿ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡ ಲಕ್ಷ್ಮಣ್ ತುಕಾರಾಂ ಗೋಲೆ ನಾಟಕ ಅವರ ಜೀವನ ಚರಿತ್ರೆ ಎಂದು ಹೇಳಿದರು.ಪ್ರತಿಯೊಬ್ಬ ಮನುಷ್ಯನಿಗೆ ಪರಿವರ್ತನೆಗೆ ಒಂದು ಒಳ್ಳೆಯ ಅವಕಾಶವಿದೆ. ಪ್ರತಿ ಪಾಪಿಗೂ ಒಂದು ಭವಿಷ್ಯ ಇದೆ. ಅದರಂತೆ ಒಳ್ಳೆಯ ಭವಿಷ್ಯ ರೂಪಿಸುವ ನಾಟಕ ಇದು. ಎಲ್ಲರೂ ವೀಕ್ಷಿಸಿ ಪ್ರೋತ್ಸಾಹಿಸುವ ಅಗತ್ಯ ಇದೆ ಎಂದರು.ಮುಂದಿನ ದಿನಗಳಲ್ಲಿ ಈ ರೀತಿ ಸಾಮಾಜಿಕ ಬದಲಾವಣೆ ನಾಟಕಗಳನ್ನು ಹೆಚ್ಚು ಹೆಚ್ಚು ಪ್ರದರ್ಶಿಸಿ ಜನರ ಮನಃಪರಿವರ್ತನೆಗೆ ನಾಂದಿಯಾಗಲಿ ಎಂದು ಶುಭ ಹಾರೈಸಿದರು.ವಿಪ ಸದಸ್ಯ ಸಿ.ಟಿ. ರವಿ ಮಾತನಾಡಿ, ಮೋಹನ್ ದಾಸ್ರನ್ನು ಮಹಾತ್ಮಾ ಗಾಂಧಿಯಾಗಿ ಪರಿವರ್ತನೆ ಮಾಡಿದ್ದು ಅವರು ಚಿಕ್ಕಂದಿನಲ್ಲಿ ವಿಕ್ಷಿಸಿದ ಹರಿಶ್ಚಂದ್ರ ನಾಟಕ. ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಇಂತಹ ಸಾಮಾಜಿಕ ಪರಿವರ್ತನೆ ನಾಟಕಗಳ ಪ್ರದರ್ಶನ ಜನರಲ್ಲಿ ಭಾವನಾತ್ಮಕ ವಿಚಾರಧಾರೆ ನೆಲೆಸಲು ಪೂರಕ ಎಂದರು.ಪರಿವರ್ತನೆ ದಾರಿಯಲ್ಲಿ ಸಾಗಬೇಕಾದರೆ ಎಲ್ಲರಿಗೂ ಅವಕಾಶವಿದೆ ಎಂಬುದನ್ನು ಗಾಂಧೀಜಿ ಮನಗಂಡಿದ್ದರು. ಇಂತಹ ಅವಕಾಶಗಳಿಗೆ ಜಿಲ್ಲೆಯಲ್ಲಿ ವಿಫುಲ ಅವಕಾಶಗಳಿವೆ. ನಾಟಕ ಪ್ರದರ್ಶನ ಯಶಸ್ವಿಯಾಗಲಿ ಎಂದು ಹೇಳಿದರು.ಮಕ್ಕಳ ತಜ್ಞ ಡಾ. ಜಿ.ಪಿ. ಕೃಷ್ಣೇಗೌಡ ಮಾತನಾಡಿ, ನಿಜವಾದ ಕಲೆ ಉಳಿದಿದೆ ಅಂದರೆ ಅದು ರಂಗಭೂಮಿ ಕಲಾವಿದರಲ್ಲಿ ಮಾತ್ರ ಕಾಣಲು ಸಾಧ್ಯ ಎಂದು ತಿಳಿಸಿದರು.ಆರ್ಕೆಸ್ಟ್ರಾ, ಸಿನಿಮಾ, ದೂರದರ್ಶನ, ಮೊಬೈಲ್ ಮುಂತಾದವುಗಳ ಗೀಳಿಗೆ ಬಿದ್ದು ಈ ರೀತಿ ಸಾಮಾಜಿಕ ಪರಿವರ್ತನೆ ಉತ್ತಮ ನಾಟಕ ಪ್ರದರ್ಶನ ನೋಡಲು ಪ್ರೇಕ್ಷಕರ ಸಂಖ್ಯೆ ಇಳಿಮುಖ ವಾಗಿರುವುದು ವಿಷಾದನೀಯ ಎಂದರು.ತುಕಾರಾಂರವರು ಗಾಂಧೀಜಿ ಆದರ್ಶ ಮೈಗೂಡಿಸಿಕೊಂಡು ಸಮಾಜ ಪರಿವರ್ತನೆ ನಾಟಕ ನಿರ್ದೇಶಿಸಿದ್ದಾರೆ. ಮಹಾ ರಾಷ್ಟ್ರ ಸರ್ಕಾರ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದು, ಇಲ್ಲಿಗೂ ಬರುವಂತೆ ಲಕ್ಷ್ಮಣ ಅವರಿಗೆ ಆಹ್ವಾನ ನೀಡಿರುವುದಾಗಿ ಹೇಳಿದರು.ಈ ಸಂದರ್ಭದಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕರಾದ ಮಂಜುಳ ಹುಲ್ಲಳ್ಳಿ, ಎಐಟಿ ರಿಜಿಸ್ಟ್ರಾರ್ ಡಾ. ಸಿ.ಕೆ ಸುಬ್ರಾಯ, ಪ್ರಾಂಶುಪಾಲ ಡಾ. ಸಿ.ಟಿ ಜಯದೇವ್, ಕಾಂತೇಶ್ ಕದರ ಮಂಡಲಗಿ, ಲಯನ್ಸ್ ಅಧ್ಯಕ್ಷ ಕುಮಾರ್ ಸಿ.ಎನ್, ಗಾಯಕ ಎಂ.ಎಸ್ ಸುಧೀರ್ ಮತ್ತಿತರರು ಉಪಸ್ಥಿತರಿದ್ದರು. ಕೊನೆಯಲ್ಲಿ ಲಯನ್ಸ್ ಪ್ರಧಾನ ಕಾರ್ಯದರ್ಶಿ ಗೋಪಿಕೃಷ್ಣ ವಂದಿಸಿದರು.