ಲಿಂಗಾಯತರು/ಒಕ್ಕಲಿಗರಿಗಿಂತ ‘ಅಲ್ಪಸಂಖ್ಯಾತ’ ಮುಸ್ಲಿಮರೇ ಬಹುಸಂಖ್ಯಾತರು! ರಾಜ್ಯದಲ್ಲಿ ಅಹಿಂದ ಜನರೇ ನಂ.1

KannadaprabhaNewsNetwork | Published : Mar 1, 2024 2:17 AM

ಸಾರಾಂಶ

ರಾಜ್ಯದಲ್ಲಿ ತೀವ್ರ ಚರ್ಚೆ, ಅಪಸ್ವರ, ಕೋಲಾಹಲ ಸೃಷ್ಟಿಸಲಿದೆ ಎನ್ನಲಾಗಿರುವ ಜಾತಿವಾರು ಜನಸಂಖ್ಯೆಯ ವಿವರಗಳನ್ನೊಳಗೊಂಡ ‘ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ವರದಿ’ಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಅವರು ಗುರುವಾರ ಹಸ್ತಾಂತರ ಮಾಡಿದರು.

ಯಾವ ಜಾತಿ ಎಷ್ಟು ಜನ?

1.08 ಕೋಟಿ: ಪರಿಶಿಷ್ಟ ಜಾತಿ

70 ಲಕ್ಷ: ಮುಸ್ಲಿಮರು

65 ಲಕ್ಷ: ಲಿಂಗಾಯತರು60 ಲಕ್ಷ: ಒಕ್ಕಲಿಗರು

45 ಲಕ್ಷ: ಕುರುಬರು

40.45 ಲಕ್ಷ: ಪರಿಶಿಷ್ಟ ಪಂಗಡ

15 ಲಕ್ಷ: ಈಡಿಗ, ವಿಶ್ವಕರ್ಮ, ಬೆಸ್ತ (ತಲಾ)14 ಲಕ್ಷ: ಬ್ರಾಹ್ಮಣ

--

ಮುಂದೇನು?

- ಜಾತಿ ಗಣತಿ ವರದಿ ಬಹಿರಂಗಗೊಳಿಸಿ ಸಾಮಾಜಿಕ ನ್ಯಾಯ ಕಲ್ಪಿಸುವ ವಿಚಾರದಲ್ಲಿ ಸಿಎಂ ಸಿದ್ದು ದೃಢ ನಿಲುವು- ಆದರೆ ಲೋಕಸಭೆ ಚುನಾವಣೆ ಹತ್ತಿರದಲ್ಲಿದೆ. ವರದಿ ಬಹಿರಂಗಪಡಿಸಿದರೆ ಆಗುವ ಪರಿಣಾಮಗಳ ಭೀತಿಯೂ ಇದೆ- ಜಾತಿ ಗಣತಿ ಬಗ್ಗೆ ಅಧ್ಯಯನ ನಡೆಸಲು ಸಚಿವ ಸಂಪುಟ ಉಪಸಮಿತಿಯನ್ನು ಸರ್ಕಾರ ರಚಿಸುವ ಸಾಧ್ಯತೆ- ಜಾತಿ ಗಣತಿ ವರದಿಯನ್ನು ಸಮಗ್ರವಾಗಿ ಅಧ್ಯಯನ ನಡೆಸಿ, ಏನು ಮಾಡಬೇಕು ಎಂದು ಉಪಸಮಿತಿ ವರದಿ ಸಲ್ಲಿಕೆ ನಿರೀಕ್ಷೆ- ಮತ್ತೊಂದೆಡೆ ವರದಿಯ ಅಂಶಗಳನ್ನು ಅಧಿಕೃತವಾಗಿ ಬಹಿರಂಗಗೊಳಿಸಿ ಸಾರ್ವಜನಿಕ ಚರ್ಚೆಗೆ ಬಿಡುವ ಸಾಧ್ಯತೆ

--ಕನ್ನಡಪ್ರಭ ವಾರ್ತೆ ಬೆಂಗಳೂರುರಾಜ್ಯದಲ್ಲಿ ತೀವ್ರ ಚರ್ಚೆ, ಅಪಸ್ವರ, ಕೋಲಾಹಲ ಸೃಷ್ಟಿಸಲಿದೆ ಎನ್ನಲಾಗಿರುವ ಜಾತಿವಾರು ಜನಸಂಖ್ಯೆಯ ವಿವರಗಳನ್ನೊಳಗೊಂಡ ‘ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ವರದಿ’ಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಅವರು ಗುರುವಾರ ಹಸ್ತಾಂತರ ಮಾಡಿದರು.

ಈ ವರದಿಯಲ್ಲಿ ಏನಿದೆ ಎಂಬ ಅಂಶ ಅಧಿಕೃತವಾಗಿ ಇನ್ನೂ ಬಹಿರಂಗಗೊಂಡಿಲ್ಲವಾದರೂ, ಕೆಲ ಕುತೂಹಲಕಾರಿ ವಿಚಾರಗಳು ಹೊರ ಬಿದ್ದಿವೆ. ಮೂಲಗಳ ಪ್ರಕಾರ ಅಲ್ಪಸಂಖ್ಯಾತ, ದಲಿತ ಹಾಗೂ ಹಿಂದುಳಿದ ವರ್ಗ (ಅಹಿಂದ)ವು ರಾಜ್ಯದ ಒಟ್ಟಾರೆ ಜನಸಂಖ್ಯೆಯ ಶೇ.60ರಷ್ಟು ಇದೆ. ಅದರಲ್ಲೂ ಅಲ್ಪಸಂಖ್ಯಾತ ಸಮುದಾಯವು ಇದುವರೆಗೂ ರಾಜ್ಯದ ಅತಿ ದೊಡ್ಡ ಸಮುದಾಯಗಳೆನಿಸಿದ್ದ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳಿಗಿಂತ ಹೆಚ್ಚಿದೆ. ಬಹಿರಂಗಗೊಂಡಿರುವ ಅಂಕಿ-ಅಂಶಗಳ ಪ್ರಕಾರ ಮುಸ್ಲಿಮರು 70 ಲಕ್ಷ, ಲಿಂಗಾಯತರು 65 ಲಕ್ಷ, ಒಕ್ಕಲಿಗರು 60 ಲಕ್ಷ ಇದ್ದಾರೆ. ತನ್ಮೂಲಕ ರಾಜ್ಯದಲ್ಲಿ ಅಲ್ಪಸಂಖ್ಯಾತರು ಪ್ರಬಲ ಸಮುದಾಯಗಳಿಗೆ ಹೋಲಿಸಿದಾಗ ಬಹುಸಂಖ್ಯಾತರಾಗುತ್ತಾರೆ.

ರಾಜ್ಯದಲ್ಲಿರುವ 5.98 ಕೋಟಿ ಜನಸಂಖ್ಯೆಯ ಪೈಕಿ 3.96 ಕೋಟಿ ಜನರು ಅಹಿಂದ ಸಮುದಾಯಕ್ಕೆ ಸೇರಿದವರಾಗಿದ್ದಾರೆ. 1.87 ಕೋಟಿ ಜನ ಲಿಂಗಾಯಿತ, ಒಕ್ಕಲಿಗ, ಬ್ರಾಹ್ಮಣ ಹಾಗೂ ಇತರ ಸಮುದಾಯದವರಾಗಿದ್ದಾರೆ. ಪರಿಶಿಷ್ಟ ಜಾತಿಯ 1.08 ಕೋಟಿ ಜನ, ಪರಿಶಿಷ್ಟ ಪಂಗಡದ 40.45 ಲಕ್ಷ ಜನ ಇದ್ದರೆ, ಹಿಂದುಳಿದ ಸಮುದಾಯಕ್ಕೆ ಸೇರಿದ ಕುರುಬರು 45 ಲಕ್ಷ ಜನರಿದ್ದಾರೆ.816 ಒಬಿಸಿ ಜಾತಿ:ಒಟ್ಟು 816 ಇತರ ಹಿಂದುಳಿದ ಜಾತಿಗಳನ್ನು ಗುರುತಿಸಲಾಗಿದೆ. 1,351 ಜಾತಿಗಳನ್ನು ಸಮೀಕ್ಷೆಯಡಿ ಪರಿಗಣನೆಗೆ ತೆಗೆದುಕೊಳ್ಳಲಾಗಿದ್ದು, ಹೊಸದಾಗಿ 192 ಜಾತಿಗಳನ್ನ ದಾಖಲಿಸಲಾಗಿದೆ. 10ಕ್ಕಿಂತ ಕಡಿಮೆ ಜನಸಂಖ್ಯೆ ಇರುವ 80 ಜಾತಿಗಳ ಹೆಸರನ್ನು ವರದಿಯಲ್ಲಿ ದಾಖಲಿಸಲಾಗಿದೆ. ಸುಮಾರು 30 ಜಾತಿಗಳು ಅತ್ಯಂತ ಹಿಂದುಳಿದ ಜಾತಿ ವರ್ಗದಡಿ ಸೇರಲಿವೆ ಎಂದು ತಿಳಿದು ಬಂದಿದೆ.

ಜಾತಿಗಣತಿ ವರದಿಯ ಪ್ರಕಾರ ಒಟ್ಟು 5.98 ಕೋಟಿ ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿದ್ದು, 32 ಲಕ್ಷ ಜನ ಸಮೀಕ್ಷೆಯಿಂದ ಹೊರಗುಳಿದಿದ್ದಾರೆ ಎನ್ನಲಾಗಿದೆ.ವರದಿ ಸಲ್ಲಿಕೆ:

ಆಯೋಗದ ಸದಸ್ಯರು ಮತ್ತು ಸದಸ್ಯ ಕಾರ್ಯದರ್ಶಿಯವರೊಂದಿಗೆ ಆಗಮಿಸಿದ ಹೆಗ್ಡೆಯವರು, 200 ಪುಟಗಳ ಪ್ರಧಾನ ವರದಿ ಮತ್ತು 48 ಸಂಪುಟಗಳ ದತ್ತಾಂಶ ಇರುವ ಎರಡು ಪೆಟ್ಟಿಗೆಗಳ ವರದಿಯನ್ನು ವಿಧಾನಸೌಧದಲ್ಲಿನ ಮುಖ್ಯಮಂತ್ರಿಯವರ ಕಚೇರಿಯಲ್ಲಿ ಹಸ್ತಾಂತರಿಸಿದರು. ವರದಿಯನ್ನು ಸರ್ಕಾರ ಮುಂದಿನ ಸಚಿವ ಸಂಪುಟದಲ್ಲೇ ಮಂಡಿಸುವ ಸಾಧ್ಯತೆ ಇದೆ.ಉಪ ಸಮಿತಿಯಿಂದ ಅಧ್ಯಯನ:

ಜಾತಿ ಗಣತಿ ಸಾರ್ವಜನಿಕಗೊಳಿಸಿ, ವರದಿಯಲ್ಲಿನ ದತ್ತಾಂಶಗಳ ಅನುಸಾರ ಸಮುದಾಯಗಳಿಗೆ ಕಾರ್ಯಕ್ರಮಗಳು, ಸೌಲಭ್ಯಗಳನ್ನು ಒದಗಿಸುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಬೇಕು ಎಂಬ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೃಢ ನಿಲುವು ಹೊಂದಿದ್ದಾರೆ.

ಆದರೆ, ಲೋಕಸಭೆ ಚುನಾವಣೆ ಹತ್ತಿರ ಇದ್ದು, ವರದಿ ಬಹಿರಂಗಪಡಿಸುವುದರಿಂದ ಎದುರಾಗಬಹುದಾದ ಸಂಭವನೀಯ ವಿರೋಧಗಳು, ರಾಜಕೀಯ ಸ್ಥಿತ್ಯಂತರದಿಂದ ಪಾರಾಗಲು ವರದಿ ಅಧ್ಯಯನಕ್ಕೆ ಸಂಪುಟ ಉಪ ಸಮಿತಿಯನ್ನು ರಚಿಸಲಾಗುತ್ತದೆ. ಉಪ ಸಮಿತಿಯು ವರದಿಯನ್ನು ಸಮಗ್ರವಾಗಿ ಅಧ್ಯಯನ ನಡೆಸಿ ಸರ್ಕಾರ ಮಟ್ಟದಲ್ಲಿ ಏನೇನು ಮಾಡಬೇಕು ಎಂಬ ಬಗ್ಗೆ ವರದಿ ಸಲ್ಲಿಸಲಿದೆ. ಮತ್ತೊಂದೆಡೆ ವರದಿಯ ಅಂಶಗಳನ್ನು ಅಧಿಕೃತವಾಗಿ ಬಹಿರಂಗಪಡಿಸಿ ಸಾರ್ವಜನಿಕ ಚರ್ಚೆಗೆ ಬಿಡುವ ಉದ್ದೇಶವೂ ಇದೆ. ವರದಿಯನ್ನು ಒಟ್ಟು 13 ವಿಭಾಗಗಳಾಗಿ ವಿಂಗಡಿಸಲಾಗಿದೆ. ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ, ಜಾತಿವಾರು ಜನಸಂಖ್ಯೆ, ಜಾತಿ ವರ್ಗಗಳ ಲಕ್ಷಣಗಳು, ವಿಧಾನಸಭಾವಾರು ಜಾತಿಗಳ ಅಂಕಿ-ಅಂಶಗಳು, ತಾಲೂಕುವಾರು ಜಾತಿಯ ಕುಟುಂಬಗಳು, ಜನಸಂಖ್ಯೆಯ ವರದಿ, ಶಿಕ್ಷಣ ಮಾಹಿತಿ, ಉದ್ಯೋಗ ಮತ್ತು ರಾಜಕೀಯ ಪ್ರಾತಿನಿಧ್ಯದ ಕುರಿತು ದ್ವಿತೀಯ ಮೂಲಗಳಿಂದ ಮಾಹಿತಿಯನ್ನು ಸಂಗ್ರಹಿಸಲಾಗಿದೆ.2015ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜು ಅವರ ಅವಧಿಯಲ್ಲಿ ರಾಜ್ಯದಲ್ಲಿ ಮನೆ ಮನೆಗೆ ತೆರಳಿ 54 ಪ್ರಶ್ನಾವಳಿಗಳನ್ನು ಕೇಳಿ ಉತ್ತರ ಪಡೆಯಲಾಗಿತ್ತು ಎಂದು ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಹೇಳಿದ್ದಾರೆ.

Share this article