ಶಿವಾನಂದ ಅಂಗಡಿ
ಹುಬ್ಬಳ್ಳಿ: ಮುಂಗಾರು ಪೂರ್ವದಲ್ಲೇ ಕೃತಿಕಾ ಮಳೆ ಹದವಾಗಿ ಸುರಿದ ಹಿನ್ನೆಲೆಯಲ್ಲಿ ಮುಂಗಾರಿ ಬಿತ್ತನೆಗೆ ಭರ್ಜರಿ ಚಾಲನೆ ದೊರೆತಿದ್ದು, ಆದರೆ, ಎಲ್ಲೆಲ್ಲೂ ಟ್ರ್ಯಾಕ್ಟರ್ಗಳದ್ದೇ ಸದ್ದು. ಎತ್ತುಗಳು (ರಾಸು) ಮಾಯವಾಗಿದ್ದು, ಸಾಂಪ್ರದಾಯಿಕ ಒಕ್ಕಲುತನಕ್ಕೆ ಯಾಂತ್ರೀಕರಣ ಮಾರಿಯಾಗಿದೆ.ಮುಂಗಾರಿಗೆ ಹೆಸರುಕಾಳು, ಗೋವಿನಜೋಳ, ಸೋಯಾಬಿನ್, ಹತ್ತಿ, ಗೆಜ್ಜೆಶೇಂಗಾ, ಮಸಾರಿ ನೆಲದಲ್ಲಿ ಹಬ್ಬು ಶೇಂಗಾ ಬಿತ್ತನೆ ಕಾರ್ಯ ಈಗ ಜೋರಾಗಿ ನಡೆಯುತ್ತಿದ್ದು, ಗದಗ-ಹುಬ್ಬಳ್ಳಿ, ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿಗಳಲ್ಲಿ ನೀವು ನೂರಾರು ಕಿಲೋ ಮೀಟರ್ ಸಾಗಿದರೆ ಎತ್ತುಗಳಿಂದ ಬಿತ್ತನೆ ಮಾಡುವವರೇ ಕಾಣುವುದಿಲ್ಲ. ಅಷ್ಟರ ಮಟ್ಟಿಗೆ ಹೊಲಗಳಲ್ಲಿ ಟ್ರ್ಯಾಕ್ಟರ್ಗಳ ಸದ್ದು ಹೆಚ್ಚಾಗಿದೆ. ಹೀಗಾಗಿ ಧಾರವಾಡ ಆಕಾಶವಾಣಿಯಲ್ಲಿ ಪ್ರತಿದಿನ ಸಂಜೆ ಕೃಷಿ ರಂಗದಲ್ಲಿ ಪ್ರಸಾರವಾಗುತ್ತಿದ್ದ ಹಾ... ಮಹಾಲಿಂಗ, ಮಹಾಲಿಂಗ, ಮಹಾಲಿಂಗ ಹಾಡು ಮತ್ತೆ ಮತ್ತೆ ನೆನಪಿಗೆ ಬರುತ್ತಿದೆ. ನಾಡಿನೆಲ್ಲೆಡೆ ಪ್ರಸಿದ್ಧವಾಗಿದ್ದ ಕೃಷಿ ರಂಗ ಕಾರ್ಯಕ್ರಮದಲ್ಲಿ ಕೃಷಿ ಸಲಹೆಗಳು, ಬೀಜ, ಗೊಬ್ಬರ, ಕೀಟಬಾಧೆ ನಿಯಂತ್ರಣ ಸಲಹೆಗಳು ಕಾರ್ಯಕ್ರಮದಲ್ಲಿ ಮೂಡಿಬರುತ್ತಿದ್ದವು.
ಎತ್ತುಗಳ ಜಾಗದಲ್ಲಿ ಟ್ರ್ಯಾಕ್ಟರ್: ಹಳ್ಳಿಗಳ ದೇಶವಾಗಿರುವ ಭಾರತದಲ್ಲಿ ಬಹುಜನರ ಉದ್ಯೋಗ ಕೃಷಿಯೇ ಆಗಿತ್ತು. ಅತಿವೃಷ್ಟಿ, ಅನಾವೃಷ್ಟಿ, ಅವೈಜ್ಞಾನಿಕ ಕೃಷಿ ವಿಧಾನಗಳಿಂದ ಬಹುತೇಕ ಸಂಖ್ಯಾತ ರೈತರು ಕೃಷಿಯಿಂದ ಲಕ್ಷಾಂತರ ನಷ್ಟ ಅನುಭವಿಸಿ ಸಾಲದ ಸುಳಿಗೆ ಸಿಲುಕಿದ ಬೆನ್ನಲ್ಲೇ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಹೀಗಾಗಿ ಇತ್ತೀಚಿನ ಹೊಸಮನೆಗಳಲ್ಲಿ ಎತ್ತುಗಳ ಶೆಡ್, ಗೊದಲಿಯೇ ಮಾಯವಾಗಿದ್ದು, ಮನೆಯ ಹಿತ್ತಲಿನ ಶೆಡ್ಗಳಿಗೆ ಟ್ರ್ಯಾಕ್ಟರ್ಗಳು ಬಂದು ನಿಂತಿವೆ.ಮೇಲಾಗಿ ನೇಗಿಲು, ರಂಟಿ, ಬೆಳೆಸಾಲು, ಬಿತ್ತನೆ ಕುರಗಿ ಸಕಲವೂ ಯಂತ್ರಮಯವಾಗಿರುವುದರಿಂದ ಎತ್ತುಗಳನ್ನು ಸಾಕಲು ಯಾರೂ ಮುಂದೆ ಬರುತ್ತಿಲ್ಲ. ಹೀಗಾಗಿ ಎತ್ತುಗಳ ಸಂಖ್ಯೆ ತೀವ್ರವಾಗಿ ಇಳಿಮುಖವಾಗಿದೆ.
ದಿನಕ್ಕೆ 10 ಎಕರೆ ಬಿತ್ತನೆ: ಎತ್ತುಗಳಿದ್ದಾಗ ದಿನಕ್ಕೆ ಐದಾರು ಎಕರೆ ಮಾತ್ರ ಬಿತ್ತನೆ ಸಾಧ್ಯವಾಗುತ್ತಿತ್ತು. ಈ ಟ್ರ್ಯಾಕ್ಟರ್ ಬಂದ ಮೇಲೆ ದಿನವೊಂದಕ್ಕೆ 10 ಎಕರೆಗೂ ಹೆಚ್ಚು ಬಿತ್ತನೆ ಮಾಡುತ್ತೇವೆ. ಮೇಲಾಗಿ ಸಕಲವೂ ಯಂತ್ರಗಳಿಂದ ನಡೆಯುವುದರಿಂದ ಎತ್ತುಗಳು ಕಟ್ಟುವುದು ಕಾರ್ಯಸಾಧುವಲ್ಲ ಎನ್ನುತ್ತಾರೆ ರೈತರು. ಆದರೆ ಸಗಣಿ ಗೊಬ್ಬರವಿಲ್ಲದೇ ಭೂಮಿ ಫಲವತ್ತತೆ ಕಳೆದುಕೊಳ್ಳುತ್ತಿದೆ ಎಂಬುದು ರೈತರಿಗೆ ಅರಿವಿಗೆ ಇಲ್ಲದಿಲ್ಲ. ಐದಾರು ಸಾವಿರ ನೀಡಿ ಸಗಣಿ ಗೊಬ್ಬರ ಕೊಳ್ಳುವ ಪರಿಸ್ಥಿತಿ ಉದ್ಭವಿಸಿದೆ.ಹಳ್ಳಿ ಹಳ್ಳಿಗಳೂ ಸೇರಿ ಅಣ್ಣಿಗೇರಿ, ನವಲಗುಂದ, ನರಗುಂದ, ಸವದತ್ತಿಯಂಥ ನೀರಾವರಿ ಪ್ರದೇಶಗಳಲ್ಲಿ ಈಗ ಟ್ರ್ಯಾಕ್ಟರ್ಗಳ ಸದ್ದೇ ಹೆಚ್ಚಾಗಿದ್ದು, ಹುಬ್ಬಳ್ಳಿ-ವಿಜಯಪುರ ಮಾರ್ಗವಾಗಿ ನರಗುಂದ, ನವಲಗುಂದ ಪ್ರವೇಶಿಸಿದರೆ ಸಾಕು ರಸ್ತೆಯಲ್ಲೇ ನಿಮಗೆ ಸ್ವಾಗತಿಸುವುದೇ ಟ್ರ್ಯಾಕ್ಟರ್. ಅಷ್ಟರ ಮಟ್ಟಿಗೆ ಈಗ ಟ್ರ್ಯಾಕ್ಟರ್ ರೈತ ಮಿತ್ರವಾಗಿದೆ.
ಕೃಷಿ ಈಗ ಸುಲಭ: ಟ್ರ್ಯಾಕ್ಟರ್ಗಳು ಬಂದ ಮೇಲೆ ಕೃಷಿ ಈಗ ಸುಲಭವಾಗಿದೆ. ದಶಕಗಳ ಹಿಂದೆ ಎತ್ತು ಚಕ್ಕಡಿ ಮೇಲೆ ಒಕ್ಕಲುತನ ಮಾಡುವಾಗ ಕೃಷಿ ಕೆಲಸ ಅತ್ಯಂತ ಕಠಿಣವಾಗಿತ್ತು. ಇಡೀ ದಿನ ಕೆಲಸ ಮಾಡಿದರೂ 5 ಎಕರೆ ಬಿತ್ತನೆ ಸೇರಿ 5 ಎಕರೆ ಎಡೆಕುಂಟಿ ಹೊಡೆಯಲು ಆಗುತ್ತಿರಲಿಲ್ಲ. ಟ್ರ್ಯಾಕ್ಟರ್ ಬಂದ ಮೇಲೆ ಕೃಷಿ ಅತ್ಯಂತ ಸುಲಭವಾಗಿದ್ದು, ಬೀಜೋಪಚಾರ, ಮಣ್ಣು ಪರೀಕ್ಷೆ, ಸಗಣಿ ಗೊಬ್ಬರ ಬಳಸಿ ಅತಿ ಹೆಚ್ಚು ಬೆಳೆ ತೆಗೆದು ಬದುಕು ಕಟ್ಟಿಕೊಂಡ ರೈತರು ಸಾಕಷ್ಟು ಪ್ರಮಾಣದಲ್ಲಿ ಇದ್ದಾರೆ.ಸಣ್ಣ ಹಿಡುವಳಿದಾರರು ಟ್ರ್ಯಾಕ್ಟರ್ ಖರೀದಿ ಮಾಡಿದ್ದಾರೆ. ಜತೆಗೆ ಬ್ಯಾಂಕ್ಗಳು, ಖಾಸಗಿ ಫೈನಾನ್ಸ್ ಕಂಪನಿಗಳು ಸಹ ರೈತರಿಗೆ ಟ್ರ್ಯಾಕ್ಟರ್ಸಾಲ ನೀಡುತ್ತಿದ್ದು, ಖರೀದಿಗೆ ರೈತರಿಗೆ ಪ್ರೇರಣಿಯಾಗುತ್ತಿದೆ.
ಟ್ರ್ಯಾಕ್ಟರ್ ಬಂದ ಮೇಲೂ ನಾವು ಎತ್ತುಗಳನ್ನು ಉಳಿಸಿಕೊಂಡಿದ್ದೇವೆ. ಸಗಣಿ ಗೊಬ್ಬರ ಸೇರಿದಂತೆ ಎಡೆ ಹೊಡೆಯಲು ಎತ್ತುಗಳ ಬೇಕೆ ಬೇಕು, ಕಳೆದ ಶಿವರಾತ್ರಿಗಷ್ಟೇ ರು. 1.50 ಲಕ್ಷ ನೀಡಿ ಎತ್ತುಗಳನ್ನು ತಂದಿದ್ದೇವೆ. ಈಗ ಅವುಗಳ ಬೆಲೆ 2 ಲಕ್ಷ ರು. ದಾಟಿದೆ ಎನ್ನುತ್ತಾರೆ ಪ್ರಗತಿಪರ ರೈತ ಹನುಮರಡ್ಡಿ ಚಾಕಲಬ್ಬಿ.