ಚಿಕ್ಕಬಳ್ಳಾಪುರದಲ್ಲಿ 5ನೇ ವರ್ಷದ ಪತ್ರಕರ್ತರ ಮಕ್ಕಳ 2026ನೇ ಸಾಲಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಪ್ರತಿಭೆ ಎಂಬುದು ವೃತ್ತಿ, ಐಶ್ವರ್ಯ ಅಥವಾ ಮನೆಯ ಹಿನ್ನೆಲೆಯನ್ನು ನೋಡಿ ಬರುವುದಿಲ್ಲ. ಸಾಧನೆ ಮಾಡುವ ಛಲ, ಪರಿಶ್ರಮ ಮತ್ತು ಕನಸುಗಳೇ ವ್ಯಕ್ತಿಯನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತವೆ. ಆದ್ದರಿಂದ ಶೈಕ್ಷಣಿಕ ಸಾಧನೆ ಮಾಡಿದ ಎಲ್ಲ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸತ್ಕರಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಸಂಸದ ಡಾ.ಕೆ. ಸುಧಾಕರ್ ಹೇಳಿದರು.
ನಗರದ ಜಿಲ್ಲಾ ಕನ್ನಡ ಭವನದಲ್ಲಿ ಭಾನುವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ನಡೆದ 5ನೇ ವರ್ಷದ ಪತ್ರಕರ್ತರ ಮಕ್ಕಳ- 2026ನೇ ಸಾಲಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಇಂದು ದೇಶದ ಭವಿಷ್ಯವನ್ನು ಪ್ರತಿಭೆ ಮತ್ತು ಜ್ಞಾನದ ಮೂಲಕ ಕಟ್ಟಬೇಕಾಗಿದೆ. ಅನಾದಿ ಕಾಲದಿಂದಲೂ ಭಾರತದ ಜ್ಞಾನ ಪರಂಪರೆ ವಿಶ್ವಕ್ಕೆ ಮಾದರಿಯಾಗಿದೆ. ಪ್ರಾಚೀನ ಕಾಲದಲ್ಲಿ ನಳಂದಾ ವಿಶ್ವವಿದ್ಯಾಲಯಕ್ಕೆ ಸುಮಾರು 70ಕ್ಕೂ ಹೆಚ್ಚು ದೇಶಗಳ ವಿದ್ಯಾರ್ಥಿಗಳು ಬಂದು ಶಿಕ್ಷಣ ಪಡೆಯುತ್ತಿದ್ದರು ಎಂಬುದು ಇತಿಹಾಸದಲ್ಲಿ ದಾಖಲಾಗಿದೆ ಎಂದು ತಿಳಿಸಿದರು.ಇತಿಹಾಸದ ಪುಟ ಸೇರಿರುವ ವರ್ತಮಾನದಲ್ಲಿ ಬದುಕುತ್ತಿರುವ ಅನೇಕ ಜ್ಞಾನಬಲದಲ್ಲಿ ಬದುಕು ಕಟ್ಟಿಕೊಂಡಿರುವವರೆಲ್ಲಾ ಆರ್ಥಿಕವಾಗಿ ಬಡವರಾಗಿದ್ದವರೇ ಆಗಿದ್ದಾರೆ. ಹೀಗಾಗಲು ಅವರು ಕಂಡಿದ್ದ ಕನಸು ಮತ್ತು ಅವರಿಗಿದ್ದ ಅಪರಿಮಿತವಾದ ಜ್ಞಾನದ ಹಸಿವೇ ಅವರನ್ನು ಸಾಧಕರನ್ನಾಗಿ ರೂಪಿಸಿತು. ಇಲ್ಲಿ ಸನ್ಮಾನಗೊಳ್ಳುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳು ಕೂಡ ಅಂತಹ ಮಹನೀಯರಿಂದ ಪ್ರೇರಣೆ ಪಡೆದು ಜೀವನದಲ್ಲಿ ದೊಡ್ಡ ಸಾಧನೆ ಮಾಡಬೇಕು ಎಂದು ಕರೆ ನೀಡಿದರು.
ಭಾರತದ ಮಾಜಿ ರಾಷ್ಟ್ರಪತಿ ಹಾಗೂ ವಿಜ್ಞಾನಿ ಎಪಿಜೆ ಅಬ್ದುಲ್ ಕಲಾಂ ಅವರ ಜೀವನವನ್ನು ಆದರ್ಶವಾಗಿ ತೆಗೆದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ತಂತ್ರಜ್ಞಾನದ ಜೊತೆಗೆ ಅಧ್ಯಯನಶೀಲತೆಯನ್ನೂ ಬೆಳೆಸಿಕೊಳ್ಳಬೇಕು. ಜೀವನದ ಉದ್ದಕ್ಕೂ ವಿದ್ಯಾರ್ಥಿಯಾಗಿ ಕಲಿಯುವ ಮನೋಭಾವ ಇರಬೇಕು ಎಂದು ಹೇಳಿದ ಅವರು ಎಲ್ಲ ಪ್ರತಿಭಾವಂತ ವಿದ್ಯಾರ್ಥಿಗಳ ಮುಂದಿನ ಜೀವನ ಸುಖ ಸಂತೋಷದಿಂದ ಕೂಡಿರಲಿ ಎಂದು ಶುಭ ಹಾರೈಸಿದರು.
ಸಿಕೆಬಿ-3 ನಗರದ ಜಿಲ್ಲಾ ಕನ್ನಡ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ನಡೆದ 5ನೇ ವರ್ಷದ ಪತ್ರಕರ್ತರ ಮಕ್ಕಳ- 2026ನೇ ಸಾಲಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು