ಕೂಡ್ಲಿಗಿ: ತಾಲೂಕು ಕೇಂದ್ರದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೇ ಗ್ರಾಮೀಣ ಭಾಗದಿಂದ ಚಿಕಿತ್ಸೆ ಅರಸಿ ಆಸ್ಪತ್ರೆಗೆ ಬರುವ ಬಡವರು ನಿರಾಸೆಗೊಳ್ಳುತ್ತಿದ್ದಾರೆ.
ಈ ಸರ್ಕಾರಿ ಆಸ್ಪತ್ರೆಯಲ್ಲಿ ನೇತ್ರತಜ್ಞ, ಚರ್ಮರೋಗ, ಸರ್ಜನೇ ವೈದ್ಯರ ಅಗತ್ಯವಿದೆ. ಇಟ್ಟಿಗಿ ಸರ್ಕಾರಿ ಆಸ್ಪತ್ರೆಯಿಂದ ಸರ್ಜನ್ ವೈದ್ಯ ಕೊಟ್ರೇಶ್ ನಿಯೋಜನೆ ಮೇರೆಗೆ ವಾರಕ್ಕೆ ಎರಡು ಬಾರಿ ಬೇರೆ ಕಡೆಯಿಂದ ಕೂಡ್ಲಿಗಿಗೆ ಬರುತ್ತಾರೆ. ಇದರಿಂದ ಇಲ್ಲಿಯ ರೋಗಿಗಳ ಎಲ್ಲ ಸಮಸ್ಯೆಗೆ ಪರಿಹಾರ ದೊರೆಯುವುದಿಲ್ಲ. ದಂತ ವೈದ್ಯರು, ಮಕ್ಕಳ ವೈದ್ಯರು, ಸ್ತ್ರೀರೋಗ ತಜ್ಞರು, ಕಿವಿ, ಮೂಗು, ಗಂಟಲು ತಜ್ಞರು, ನರ್ಸ್ಗಳು, ಡಿ ಗ್ರೂಪ್ ಸಿಬ್ಬಂದಿ ಬಹುತೇಕ ಇರುವುದರಿಂದ ಆಸ್ಪತ್ರೆಯಲ್ಲಿ ಈ ವಿಭಾಗಗಳಲ್ಲಿ ಉತ್ತಮ ಆರೋಗ್ಯ ಸೇವೆ ಸಿಗುತ್ತಿದೆ. ಅರವಳಿಕೆ ತಜ್ಞರು, ಸ್ತ್ರೀರೋಗ ತಜ್ಞರ ಅಗತ್ಯವೂ ಇದೆ.
150 ಬೆಡ್ ಆಸ್ಪತ್ರೆಗೆ ಬೇಡಿಕೆ:
100 ಹಾಸಿಗೆಯ ಆಸ್ಪತ್ರೆಯಲ್ಲಿ ಅಗತ್ಯವಿರುವ ಎಲ್ಲ ವೈದ್ಯರನ್ನು ನೇಮಕ ಮಾಡಿದರೆ 150 ಬೆಡ್ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವ ಮೂಲಕ ರಾಜ್ಯದ ಅತ್ಯಂತ ಹಿಂದುಳಿದ ತಾಲೂಕಿನ ಜನತೆಗೆ ಆರೋಗ್ಯ ಸೇವೆ ನೀಡಬೇಕಿದೆ.
ಕೂಡ್ಲಿಗಿ ತಾಲೂಕು ಕೇಂದ್ರದ ಆಸ್ಪತ್ರೆಯಲ್ಲಿ ನೇತ್ರತಜ್ಞರು, ಚರ್ಮರೋಗ ತಜ್ಞರು ಇಲ್ಲ. ಸರ್ಜನ್ ವೈದ್ಯರು ಇಟ್ಟಿಗಿಯಿಂದ ವಾರಕ್ಕೆ ಎರಡು ದಿನಗಳು ಮಾತ್ರ ಬರುತ್ತಾರೆ. ಇದ್ದುದರಲ್ಲಿಯೇ ಉತ್ತಮ ಸೇವೆ ನೀಡುತ್ತೇವೆ ಎನ್ನುತ್ತಾರೆ ಕೂಡ್ಲಿಗಿ ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರದೀಪಕುಮಾರ.
ಶಾಸಕರು ಕಾಳಜಿ ವಹಿಸಲಿ:
ರಾ.ಹೆ.ಯಲ್ಲಿ ಹಗಲು-ರಾತ್ರಿ ಐದಾರು ಅಪಘಾತ ಸಂಭವಿಸುತ್ತವೆ. ಹೀಗಿದ್ದರೂ ಕಾಯಂ ಸರ್ಜನ್ ವೈದ್ಯರಿಲ್ಲ. ನಮ್ಮ ಕ್ಷೇತ್ರದ ಮತದಾರರು ವೈದ್ಯರನ್ನು ಆಯ್ಕೆಮಾಡಿ ಶಾಸಕರನ್ನಾಗಿ ಆಯ್ಕೆ ಮಾಡಿದ್ದಾರೆ. ಆರೋಗ್ಯ ಕ್ಷೇತ್ರಕ್ಕೆ ಶಾಸಕರು ಮತ್ತಷ್ಟು ಕಾಳಜಿ ವಹಿಸಬೇಕಿದೆ ಎನ್ನುತ್ತಾರೆ ಕೂಡ್ಲಿಗಿ ತಾಲೂಕಿನ ಬಯಲುತುಂಬರಗುದ್ದಿಯ ನಾಗರಾಜ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.