ಕನ್ನಡಪ್ರಭವಾರ್ತೆ ಚಿತ್ರದುರ್ಗ
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬೆಂಗಳೂರಿನ ಬಿ.ಶಿವಣ್ಣ ಫೌಂಡೇಶನ್ ಟ್ರಸ್ಟ್ ವತಿಯಿಂದ ಶನಿವಾರ ಚಿತ್ರದುರ್ಗ ಹೊರವಲಯ ಚಂದ್ರವಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲೆಯಲ್ಲಿ 50 ಸಾವಿರ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಅಭಿವೃದ್ಧಿ, ಕೈಗಾರಿಕೆಗಳ ಕಾರಣದಿಂದ ಗಿಡ-ಮರ, ಅರಣ್ಯ ನಾಶವಾಗುತ್ತಿದೆ. ಗಿಡಗಳನ್ನು ನೆಟ್ಟು ಪೋಷಿಸುವುದು ಕೇವಲ ಅರಣ್ಯ ಇಲಾಖೆ ಕೆಲಸವೆಂದು ಭಾವಿಸುವುದು ತಪ್ಪು. ಅದು ಪ್ರತಿಯೊಬ್ಬರ ಜವಾಬ್ದಾರಿ. ಜಿಲ್ಲೆಯಲ್ಲಿ 84 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶವಿದೆ. ಮಳೆಗಾಲದಲ್ಲಿ ಗಿಡಗಳನ್ನು ನೆಟ್ಟು ಪೋಷಿಸಿ ದೊಡ್ಡ ಮರವನ್ನಾಗಿ ಬೆಳೆಸಿದಾಗ ಮುಂದಿನ ಪೀಳಿಗೆಗೆ ಹಸಿರು ಪರಿಸರ ಕೊಡುಗೆಯಾಗಿ ನೀಡಬಹುದು. ಅತ್ಯಧಿಕ ಬಿಸಿಲಿನ ತಾಪಮಾನವೂ ಕೂಡ ಪರಿಸರ ನಾಶಕ್ಕೆ ಕಾರಣವಾಗುತ್ತದೆ. ಗಾಳಿ, ನೀರು, ಆಹಾರ ಎಲ್ಲವೂ ಕಲುಷಿತವಾಗುತ್ತಿದೆ. ಸರ್ಕಾರದಿಂದ ಕಳೆದ ವರ್ಷ 7.50 ಲಕ್ಷ ಸಸಿ ಬೆಳೆಸಿದ್ದೇವೆ. ಈ ವರ್ಷ 17ಲಕ್ಷ ಸಸಿ ಜಿಲ್ಲೆಯಲ್ಲಿ ಬೆಳೆಸುತ್ತಿದ್ದೇವೆ ಎಂದು ತಿಳಿಸಿದರು.ಬಿ.ಸಿ.ಶಿವಣ್ಣ ಫೌಂಡೇಷನ್ ಟ್ರಸ್ಟ್ ಅಧ್ಯಕ್ಷೆ ಡಾ.ಬಿ.ಎಸ್.ತ್ರಿವೇಣಿ ಮಾತನಾಡಿ, ಚಿತ್ರದುರ್ಗ ಜಿಲ್ಲೆಯಲ್ಲಿ 50 ಸಾವಿರ ಗಿಡಗಳನ್ನು ನೆಟ್ಟು ಪರಿಸರ ಉಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಚಂದ್ರವಳ್ಳಿಯಿಂದ ಗಿಡ ನೆಡುವ ಕಾರ್ಯಕ್ರಮ ಕೈಗೆತ್ತಿಕೊಳ್ಳಲಾಗಿದೆ. ಗಿಡ-ಮರಗಳು ನಾಶವಾಗುತ್ತಿರುವುದರಿಂದ ಪರಿಸರದಲ್ಲಿ ಏರುಪೇರಾಗಿ ಸಕಲ ಜೀವರಾಶಿಗಳು ತತ್ತರಿಸುವಂತಾಗಿದೆ. ಹಾಗಾಗಿ ಪ್ರತಿಯೊಬ್ಬರು ಒಂದೊಂದು ಗಿಡ-ನೆಟ್ಟು ಪೋಷಿಸಬೇಕು ಎಂದು ಹೇಳಿದರು.
ಎಂಜಿನಿಯರ್ ಪಿ.ಎಲ್.ಸುರೇಶ್ರಾಜು ಮಾತನಾಡಿ, ಪರಿಸರ ಬಳಸುವವರನ್ನು ಮರೆಯುವುದು ಸಹಜ. ಆದರೆ ಗಿಡ ನೆಟ್ಟು ಬೆಳೆಸುವವರನ್ನು ಯಾರು ಮರೆಯುವುದಿಲ್ಲ. ಮಕ್ಕಳಿಂದ ಬೀಜದ ಉಂಡೆಗಳನ್ನು ತಯಾರಿಸಿ ಎಲ್ಲಾ ಕಡೆ ಪಸರಿಸುವ ಕೆಲಸವಾಗಬೇಕು. ಮಕ್ಕಳು ಚಿಕ್ಕಂದಿನಲ್ಲಿಯೇ ಗಿಡ ನೆಟ್ಟು ಮುಂದಿನ ಪೀಳಿಗೆಗೆ ಹಸಿರು ಪರಿಸರ ನೀಡುವಂತಾಗಲಿ ಎಂದು ಹಾರೈಸಿದರು.
ನ್ಯಾಯವಾದಿ ಕೆ.ಎಸ್.ವಿಜಯ ಮಾತನಾಡಿ, ಸಾಲು ಮರದ ತಿಮ್ಮಕ್ಕ ಪ್ರಶಸ್ತಿ ಆಸೆಗಾಗಿ ಗಿಡ-ಮರಗಳನ್ನು ಬೆಳೆಸಲಿಲ್ಲ. ಬಿ.ಸಿ.ಶಿವಣ್ಣನವರು ಆದರ್ಶ ವ್ಯಕ್ತಿಯಾಗಿ ಬದುಕಿದವರು. ಅವರ ಆಸೆಯಂತೆ ಗಿಡ ನೆಟ್ಟು ದೊಡ್ಡ ಮರವನ್ನಾಗಿ ಬೆಳೆಸಬೇಕಿದೆ. ಬುದ್ದ, ಬಸವ, ಅಂಬೇಡ್ಕರ್ ಆದರ್ಶ ತತ್ವಗಳು ಹಾಗೂ ಪರಿಸರದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕೆಂದರು.ಈ ವೇಳೆ ಬಿ.ಶಿವಣ್ಣ ಫೌಂಡೇಶನ್ ಟ್ರಸ್ಟ್ ಬಿ.ಎಸ್.ಹೇಮಲತ, ನ್ಯಾಯವಾದಿ ಬಿ.ಎಸ್.ನಾಗರಾಜು, ಟಿ.ಪಾಂಡ್ಯಪ್ಪ, ವಕೀಲರ ಸಂಘದ ಉಪಾಧ್ಯಕ್ಷ ಬಿ.ಎಂ.ಅನಿಲ್ಕುಮಾರ್, ನಗರಸಭೆ ಮಾಜಿ ಅಧ್ಯಕ್ಷ ಮಂಜುನಾಥ್ ಗೊಪ್ಪೆ ಇದ್ದರು.
ಹತ್ತನೆ ತರಗತಿ ಪರೀಕ್ಷೆಯಲ್ಲಿ ಅತಿ ಹೆಚ್ಚಿನ ಅಂಕಗಳನ್ನು ಪಡೆದಿರುವ ಹಿರಿಯೂರಿನ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.