ಕನ್ನಡಪ್ರಭ ವಾರ್ತೆ ವಿಜಯಪುರ
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಶೇ.70ರಷ್ಟು ಶಾಸಕರು ತಮ್ಮ ಬೆಂಬಲಿಗರಿಗೆ ಗುತ್ತಿಗೆ ಕೆಲಸ ಕೊಡಿಸುತ್ತಿದ್ದಾರೆ. ಇದರಿಂದಾಗಿ ರಾಜ್ಯಾದ್ಯಂತ ಗುತ್ತಿಗೆದಾರರು ಬಹಳ ಕಷ್ಟದಲ್ಲಿದ್ದು, ಇದನ್ನು ಸಿಎಂ ಡಿ.ಕೆ.ಶಿವಕುಮಾರ್ ಅವರ ಗಮನಕ್ಕೆ ತರಲಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಸರಿಪಡಿಸುವ ಭರವಸೆ ನೀಡಿದ್ದಾರೆ. ಶಾಸಕರು ಇದನ್ನು ನಿಲ್ಲಿಸಬೇಕು. ನಮ್ಮಿಂದ ಗುಣಮಟ್ಟದ ಕೆಲಸ ಕೇಳಬೇಕು. ಸ್ಥಳೀಯ ಮುಖಂಡರು ನಮ್ಮ ಕೆಲಸಕ್ಕೆ ಅಡ್ಡಿಪಡಿಸಬಾರದು. ಜಿಲ್ಲಾದ್ಯಂತ 9 ಇಲಾಖೆಗಳಲ್ಲಿ ಸೇರಿ 4 ಸಾವಿರ ಗುತ್ತಿಗೆದಾರರು ಇದ್ದೇವೆ. ರಾಜ್ಯಾದ್ಯಂತ ₹38 ಸಾವಿರ ಕೋಟಿ ಬಿಲ್ ಪೆಂಡಿಂಗ್ ಇದ್ದು, ಹಣ ಬಿಡುಗಡೆ ಮಾಡುವಂತೆ ಸಚಿವರಿಗೆ ಒತ್ತಾಯಿಸಲಾಗುವುದು. ಜೊತೆಗೆ ಗುತ್ತಿಗೆ ಮ್ಯಾನೇಜಮೆಂಟ್ ರದ್ದುಗೊಳಿಸಬೇಕು, 5 ವರ್ಷಕ್ಕಿರುವ ಗುತ್ತಿಗೆದಾರರ ಪರವಾನಗಿಯ ನವೀಕರಣ ಅವಧಿ 10 ವರ್ಷಕ್ಕೆ ವಿಸ್ತರಿಸಬೇಕು ಎಂದು ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಸಂಘದ ಬೆಳ್ಳಿ ಮಹೋತ್ಸವ:ಆಗಸ್ಟ್ 30ರಂದು ಬೆಳಗ್ಗೆ 11.55ಗಂಟೆಗೆ ನಗರದ ಸಿಂದಗಿ ಬೈಪಾಸ್ ಬಳಿ ವಿಜಯಪುರ ಜಿಲ್ಲಾ ಗುತ್ತಿಗೆದಾರರ ಸಂಘದ ನಿವೇಶನದಲ್ಲಿ ಸಂಘದ ಬೆಳ್ಳಿ ಮಹೋತ್ಸವ ಹಾಗೂ ವಿಜಯಪುರ ಜಿಲ್ಲಾ ಗುತ್ತಿಗೆದಾರರ ಭವನ ಕಟ್ಟಡದ ಭೂಮಿಪೂಜಾ ಹಾಗೂ ಅಡಿಗಲ್ಲು ಸಮಾರಂಭ ನಡೆಯಲಿದೆ. ಜ್ಞಾನಯೋಗಾಶ್ರಮದ ಶ್ರೀ ಸುಜ್ಞಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಸಚಿವ ಎಂ.ಬಿ.ಪಾಟೀಲರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಚಿವ ಸತೀಶ ಜಾರಕಿಹೊಳಿ ಭೂಮಿಪೂಜೆ ನೆರವೇರಿಸುವರು. ಸಂಘದ ರಾಜ್ಯಾಧ್ಯಕ್ಷ ಆರ್.ಮಂಜುನಾಥ ಜ್ಯೋತಿ ಬೆಳಗಿಸಲಿದ್ದು, ಜಿಲ್ಲಾಧ್ಯಕ್ಷ ಸಿ.ಆರ್.ರೂಡಗಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಸಿ.ಆರ್.ರೂಡಗಿ, ಪದಾಧಿಕಾರಿಗಳಾದ ಹೆಚ್.ಆರ್.ಚಿಂಚಲಿ, ಅರುಣ ಮಠ, ಡೊಣೂರ, ಹೇಮಂತ ಇದ್ದರು.