ಆರ್‌ಎಸ್‌ಎಸ್‌ನಲ್ಲಿ ಜಾತಿ, ವರ್ಗ ಭೇದವಿಲ್ಲ: ಗುರುಪ್ರಸಾದ್‌

KannadaprabhaNewsNetwork |  
Published : Sep 22, 2025, 01:00 AM IST
ಕ್ಯಾಪ್ಷನ21ಕೆಡಿವಿಜಿ36, 37 ದಾವಣಗೆರೆಯಲ್ಲಿಂದು ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ವರ್ಷದ ಪ್ರಯುಕ್ತ ಹಮ್ಮಿಕೊಂಡಿದ್ದ ಭಾಷಣ ಕಾರ್ಯಕ್ರಮದಲ್ಲಿ ಗುರುಪ್ರಸಾದ್ ಮಾತನಾಡಿದರು. | Kannada Prabha

ಸಾರಾಂಶ

ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಯಾವುದೇ ಜಾತಿ, ವರ್ಗ ಭೇದಗಳಿಗೆ ಅವಕಾಶವಿಲ್ಲ. ದಿನಂಪ್ರತಿ ಒಂದು ಗಂಟೆಯ ಶಾಖೆಯಲ್ಲಿ ಎಲ್ಲ ಬೇಧಭಾವ ತೊರೆದು, ನಾವೆಲ್ಲರೂ ಭಾರತಾಂಬೆ ಮಕ್ಕಳು ಎಂಬ ಮನೋಭಾವ ತಂತಾನೇ ರೂಪುಗೊಳ್ಳುತ್ತದೆ ಎಂದು ಆರ್‌ಎಸ್‌ಎಸ್‌ ಕರ್ನಾಟಕ ದಕ್ಷಿಣ ಪ್ರಾಂತ್ಯ ಪ್ರಚಾರಕ ಗುರುಪ್ರಸಾದ್ ಹೇಳಿದ್ದಾರೆ.

- ದಾವಣಗೆರೆಯಲ್ಲಿ "ಶಾಖಾ ಏಕತ್ರೀಕರಣ- ಶತಕದಂಚಿನ ಸಂಘ ಕಾರ್ಯವೇ ನಾಡಿನೇಳಿಗೆಗೆ ಪೂರಕ " ಕಾರ್ಯಕ್ರಮ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಯಾವುದೇ ಜಾತಿ, ವರ್ಗ ಭೇದಗಳಿಗೆ ಅವಕಾಶವಿಲ್ಲ. ದಿನಂಪ್ರತಿ ಒಂದು ಗಂಟೆಯ ಶಾಖೆಯಲ್ಲಿ ಎಲ್ಲ ಬೇಧಭಾವ ತೊರೆದು, ನಾವೆಲ್ಲರೂ ಭಾರತಾಂಬೆ ಮಕ್ಕಳು ಎಂಬ ಮನೋಭಾವ ತಂತಾನೇ ರೂಪುಗೊಳ್ಳುತ್ತದೆ ಎಂದು ಆರ್‌ಎಸ್‌ಎಸ್‌ ಕರ್ನಾಟಕ ದಕ್ಷಿಣ ಪ್ರಾಂತ್ಯ ಪ್ರಚಾರಕ ಗುರುಪ್ರಸಾದ್ ಹೇಳಿದರು.

ನಗರದ ದೇವರಾಜ ಅರಸು ಬಡಾವಣೆಯ ಮೈದಾನದಲ್ಲಿ ಭಾನುವಾರ ಸಂಜೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ವರ್ಷದ ಪ್ರಯುಕ್ತ ಹಮ್ಮಿಕೊಂಡಿದ್ದ "ಶಾಖಾ ಏಕತ್ರೀಕರಣ- ಶತಕದಂಚಿನ ಸಂಘ ಕಾರ್ಯವೇ ನಾಡಿನೇಳಿಗೆಗೆ ಪೂರಕ " ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.

ಮಹಾತ್ಮ ಗಾಂಧೀಜಿಯವರ ರಾಮರಾಜ್ಯದ ಕಲ್ಪನೆಯಂತೆ ಎಲ್ಲರನ್ನೂ ಸೇರಿಸಿಕೊಂಡು ಹಿಂದೂ ಸಮಾಜದ ಸಂಘಟನೆ ಕೆಲಸ ನಡೆಯುತ್ತಿದೆ. ಸಂಘದ ಶಾಖೆಗೆ ಬರುವವರ ಮನಸ್ಸು, ಬುದ್ಧಿ, ಶರೀರವು ರಾಷ್ಟ್ರಕಾರ್ಯಕ್ಕೆ ಸಮರ್ಪಿತವಾಗುತ್ತದೆ. ಕಳೆದೊಂದು ಶತಮಾನದಿಂದಲೂ ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣ, ಹಿಂದೂ ಸಂಘಟನೆಯಂತಹ ಈಶ್ವರೀಯ ಕಾರ್ಯವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಮಾಡಿಕೊಂಡು ಬರುತ್ತಿದೆ ಎಂದರು.

ದೌರ್ಬಲ್ಯ, ವಿಶ್ವಾಸದ ಕೊರತೆಯಿಂದ ನಾವು ಪರಕೀಯರ ಗುಲಾಮರಾಗಬೇಕಾಯಿತು. ಇದನ್ನು ಮನಗಂಡ ಡಾ.ಕೇಶವ ಬಲಿರಾಮ ಹೆಡಗೇವಾರರು ಹಿಂದೂ ಸಂಘಟನೆಗಾಗಿ ಯೋಜನೆ ರೂಪಿಸಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಹುಟ್ಟುಹಾಕಿದರು. 1925ರಲ್ಲಿ ಪ್ರಾರಂಭಗೊಂಡ ಸಂಘ ವಿಜಯದಶಮಿಗೆ 100 ವರ್ಷಗಳನ್ನು ಪೂರೈಸಿ, 101ನೇ ವರ್ಷಕ್ಕೆ ಕಾಲಿಡುತ್ತಿದೆ. ಒಂದು ಶತಮಾನದ ಕಾಲ ಒಂದೇ ಉದ್ದೇಶವನ್ನು ಇಟ್ಟುಕೊಂಡು ಕೆಲಸ ಮಾಡುತ್ತಿರುವ ಜಗತ್ತಿನ ಅತಿದೊಡ್ಡ ಮಾನವ ಸಂಘಟನೆ ಆರ್‌ಎಸ್ಎಸ್‌ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಆರ್‌ಎಸ್‌ಎಸ್‌ ಶಿವಮೊಗ್ಗ ವಿಭಾಗದ ಸಂಘಚಾಲಕ ಉಮಾಪತಿ, ದಾವಣಗೆರೆ ಜಿಲ್ಲಾ ಸಂಘ ಚಾಲಕ ಟಿ.ಎಸ್. ಜಯರುದ್ರೇಶ, ನಗರ ಸಂಘ ಚಾಲಕ ಅಜಿತ್ ಓಸ್ವಾಲ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

- - -

(ಬಾಕ್ಸ್‌) * ಸ್ಥಾನೀಯ ತಂಡ ಬಲಗೊಳ್ಳಲಿ ಜಿಹಾದ್, ಮತಾಂತರ ತಡೆಗೆ ಸ್ಥಾನೀಯ ತಂಡವನ್ನು ಬಲಿಷ್ಠಗೊಳಿಸಬೇಕು. ಇದಕ್ಕಾಗಿ ಎಲ್ಲರೂ ಸಂಘದ ಶಾಖೆಯಲ್ಲಿ ತೊಡಗಿಸಿಕೊಳ್ಳಬೇಕು. ಅಕ್ಟೋಬರ್ 2ರಂದು ವಸತಿಶಃ ಉತ್ಸವ ನಡೆಯಲಿದೆ. ಇದು ಸಮಾಜದ ಉತ್ಸವವಾಗಬೇಕು ಗುರುಪ್ರಸಾದ್ ಹೇಳಿದರು. ಅ.11ರಂದು ನಗರಮಟ್ಟದಲ್ಲಿ ಪಥ ಸಂಚಲನ ಜರುಗಲಿದೆ. ಡಿಸೆಂಬರ್ ತಿಂಗಳಲ್ಲಿ ಮನೆ-ಮನೆ ಸಂಪರ್ಕ ನಡೆಸಲಾಗುವುದು. ಜನವರಿಯಲ್ಲಿ ಹಿಂದೂ ಸಮ್ಮೇಳನ ಆಯೋಜನೆಯಾಗಲಿದ್ದು, ಎಲ್ಲ ಮನೆಗಳಿಂದ ಜನರು ಸಮಾಜೋತ್ಸವದಲ್ಲಿ ಭಾಗಿಯಾಗಬೇಕು. ಸಂಘದ ಶಾಖೆಗಳು ನಿರಂತರವಾಗಿ ನಡೆಯಬೇಕು ಎಂದು ಸಲಹೆ ನೀಡಿದರು.

- - -

-21ಕೆಡಿವಿಜಿ36, 37:

ದಾವಣಗೆರೆಯಲ್ಲಿಂದು ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ವರ್ಷದ ಪ್ರಯುಕ್ತ ಹಮ್ಮಿಕೊಂಡಿದ್ದ ಭಾಷಣ ಕಾರ್ಯಕ್ರಮದಲ್ಲಿ ಗುರುಪ್ರಸಾದ್ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ 5 ದಿನವೂ ಮುಂದುವರಿಕೆ
ಕೈಗಾರಿಕೆಗೆ ಪರಿಸರ ಅನುಮತಿ: ಬಗೆಹರಿಸಿ