ಕನ್ನಡಪ್ರಭ ವಾರ್ತೆ ಮಂಗಳೂರುಪ್ರಧಾನಿ ನರೇಂದ್ರ ಮೋದಿ ಅವರ ಅಭಿಮಾನಿಗಳು ತಮ್ಮ ಅಭಿಮಾನವನ್ನು ಬೇರೆ ಬೇರೆ ರೀತಿಯಲ್ಲಿ ವ್ಯಕ್ತಪಡಿಸುವುದನ್ನು ಸಾಮಾನ್ಯ. ಕಾಸರಗೋಡು ತಾಲೂಕಿನ ಮೋದಿ ಅಭಿಮಾನಿಯೊಬ್ಬರು ತಮ್ಮ ಕ್ಯಾಂಟೀನಿನಲ್ಲಿ ಗ್ರಾಹಕರು ತಿನ್ನುವ ಆಹಾರಕ್ಕೆ ಯಾವುದೇ ದರ ವಿಧಿಸದೆ, ನೀಡಿದ ದುಡ್ಡು ಸ್ವೀಕರಿಸಿ ಉದ್ದಿಮೆ ನಡೆಸಿ ಗಮನ ಸೆಳೆದಿದ್ದಾರೆ.
ಕುಟ್ಯಣ್ಣ ಪ್ರಧಾನಿ ನರೇಂದ್ರ ಮೋದಿ ಅಭಿಮಾನಿ. ಹತ್ತು ವರ್ಷಗಳ ಹಿಂದೆ ಮೋದಿ ಅಧಿಕಾರಕ್ಕೆ ಬಂದಾಗಿನಿಂದ ಅವರು ಈ ಮಾದರಿಯ ಕ್ಯಾಂಟೀನ್ ನಡೆಸುತ್ತಿದ್ದು, ಅವರ ಕ್ಯಾಂಟೀನಿಗೂ ಈಗ ಹತ್ತರ ಹರೆಯ.
ಹೊಸ ಪ್ರಯೋಗ: ಕ್ಯಾಂಟೀನ್ ಆರಂಭಿಸಿದ ಉಪ್ಪಂಗಳ ಕುಟ್ಯಣ್ಣ ಜನರಲ್ಲಿ ಪರಸ್ಪರ ವಿಶ್ವಾಸ ಮೂಡಿಸುವ, ನಂಬಿಕೆಯ ಕಲ್ಪನೆಯನ್ನು ಕ್ಯಾಂಟೀನ್ ನಡೆಸುವುದರ ಮೂಲಕ ತಂದಿದ್ದಾರೆ.ತಾವು ತಿಂಡಿ ತಿಂದ ಅಥವಾ ಕಾಫಿ ಕುಡಿದ ನಂತರ ಸಂತೋಷವಾದರೆ ಮಾತ್ರ ಅಲ್ಲಿಟ್ಟಿರುವ ಒಂದು ಪಾತ್ರೆಯಲ್ಲಿ ಹಣವನ್ನು ಹಾಕಬಹುದು. ಕುಟ್ಯಣ್ಣ ಬಿಲ್ ನೀಡುವುದಿಲ್ಲ. ಅಲ್ಲಿ ದರ ಪಟ್ಟಿಯೂ ಹಾಕಲ್ಪಟ್ಟಿಲ್ಲ. ಕ್ಯಾಂಟೀನಿನಲ್ಲಿ ಎಷ್ಟು ಬೇಕಾದರೂ ತಿನ್ನಬಹುದು. ನಂತರ ಅಲ್ಲಿಟ್ಟಿರುವ ಪಾತ್ರೆಗೆ ದುಡ್ಡು ಹಾಕಿದರಾಯಿತು. ದುಡ್ಡು ಹಾಕಬಹುದು ಅಥವಾ ಹಾಕದೆಯೂ ಇರಬಹುದು.ನಷ್ಟ ಆಗಿಲ್ಲ: ‘ದೇವಿಯ ದಯೆಯಿಂದ ಕ್ಯಾಂಟೀನ್ ಚೆನ್ನಾಗಿ ನಡೆಯುತ್ತದೆ. ನನಗಂತೂ ಇದರಿಂದ ನಷ್ಟವಾಗಿಲ್ಲ’ ಎನ್ನುತ್ತಾರೆ ಈ ನಮೋ ಕ್ಯಾಂಟೀನ್ನ ವೆಂಕಟರಮಣ ಭಟ್ ಅವರು.
ಅಂದ ಹಾಗೆ ಕುಟ್ಯಣ್ಣ ಅಯೋಧ್ಯೆಯ ಕರಸೇವಕರೂ ಹೌದು. ಫೆ.22ರಂದು ಅವರು ಅಯೋಧ್ಯೆಗೆ ತೆರಳಿ ರಾಮಲಲ್ಲಾನ ದರ್ಶನ ಪಡೆಯಲಿದ್ದಾರೆ.