ಧಾರವಾಡ: ಆಡಳಿತ ಸರ್ಕಾರಗಳು ಅನೇಕ ರೀತಿಯ ಜನಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ, ಜನರ ಜೀವನಮಟ್ಟ, ಅರ್ಥಿಕ ಸ್ಥಿತಿ ಸುಧಾರಣೆಗೆ ನಿರಂತರ ಪ್ರಯತ್ನಿಸುತ್ತಿವೆ. ಇದರ ಪ್ರಯೋಜನ, ಯೋಜನೆಗಳ ಸೌಲಭ್ಯ ಸಮಾಜದ ಪ್ರತಿಯೊಬ್ಬರಿಗೂ ತಲುಪಬೇಕಾದರೆ ಅವುಗಳ ಅರಿವು ಮೂಡಿಸುವುದು ಮುಖ್ಯವಾಗಿದೆ ಎಂದು ಕೇಂದ್ರ ಸಂಸ್ಕೃತಿ ಮಂತ್ರಾಲಯದ ತಜ್ಞರ ಸಮಿತಿ ಸದಸ್ಯ ಡಾ. ಶಶಿಧರ ನರೇಂದ್ರ ಹೇಳಿದರು.
ಯೋಜನೆಗಳು ಜನರ ಬದುಕಿನಲ್ಲಿ ಬದಲಾವಣೆ ಪ್ರತಿಯೊಂದು ತಂಡವೂ ತನ್ನದೇ ಆದ ರೀತಿಯಲ್ಲಿ ವಿಶಿಷ್ಟವಾಗಿರಬೇಕು. ಕಲೆ ಕೇವಲ ಮನರಂಜನೆಯ ವಸ್ತುವಲ್ಲ. ಅದು ಸಮಾಜದ ಆತ್ಮಸಾಕ್ಷಿ. ಬೀದಿ ನಾಟಕ, ಜನಪದ ಸಂಗೀತ, ತತ್ವಪದಗಳು ಇವೆಲ್ಲವೂ ಜನರ ನಡುವಿನಿಂದಲೇ ಹುಟ್ಟಿಬಂದ ಕಲಾಪ್ರಕಾರಗಳು. ಇವುಗಳಿಗೆ ಯಾವುದೇ ವೇದಿಕೆ, ಟಿಕೆಟ್ ಅಥವಾ ಆಹ್ವಾನ ಪತ್ರಿಕೆಯ ಹಂಗಿಲ್ಲ. ಆದ್ದರಿಂದ ಜನರಿಗೆ ಬೀದಿ ನಾಟಕಗಳ ಮೂಲಕ ಸರ್ಕಾರದಿಂದ ಬಂದ ಯೋಜನೆಗಳ ಬಗ್ಗೆ ಮಾಹಿತಿ ಒದಗಿಸುವಲ್ಲಿ ಕಲಾತಂಡದ ಪಾತ್ರ ಮುಖ್ಯವಾಗಿದೆ ಎಂದು ಹೇಳಿದರು.
ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸುರೇಶ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ, ಅವರ ಮನಸ್ಸಿನಂಗಳಕ್ಕೆ ತಲುಪಿಸಲು ಪ್ರಯತ್ನಿಸಬೇಕು. ನಾವು ಕೇವಲ ಸಂದೇಶವನ್ನು ಸಾರುವ ತಂಡಗಳನ್ನು ಹುಡುಕುತ್ತಿಲ್ಲ. ಆ ಸಂದೇಶವನ್ನು ಅತ್ಯಂತ ಪರಿಣಾಮಕಾರಿಯಾಗಿ, ಕಲಾತ್ಮಕವಾಗಿ ಪ್ರಸ್ತುತಪಡಿಸುವ ತಂಡಗಳು ಬೇಕು. ಅಭಿನಯ, ಸಂಗೀತ, ಸಂಭಾಷಣೆಗಳಲ್ಲಿ ಜನರಿಗೆ ಅರ್ಥವಾಗುವ ಭಾಷೆಯಲ್ಲಿ ಇರಬೇಕು. ನೋಡುಗರನ್ನು ಹಿಡಿದಿಡುವ ಶಕ್ತಿ ನಿಮ್ಮ ಪ್ರದರ್ಶನದಲ್ಲಿರಬೇಕು ಎಂದು ತಿಳಿಸಿದರು.ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಪಿ. ಶುಭ, ಆರೋಗ್ಯ ಇಲಾಖೆಯ ಡಾ. ಸುಜಾತಾ ಹಸವೀಮಠ, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಜಯಶ್ರೀ ಹಿರೇಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಅವರು ಆಯ್ಕೆ ಸಮಿತಿಯ ಸದಸ್ಯರಾಗಿದ್ದರು.
ಹಿರಿಯ ಜಾನಪದ ಕಲಾವಿದರಾದ ಡಾ. ರಾಮು ಮೂಲಗಿ, ಶಂಭಯ್ಯ ಹಿರೇಮಠ, ಪ್ರಭು ಕುಂದರಗಿ, ಮಲ್ಲಪ್ಪ ಹೊಂಗಲ ಸೇರಿದಂತೆ ವಿವಿಧ ಕಲಾವಿದರು ಹಾಗೂ ಸಂಗೀತ ಕಲಾ ತಂಡಗಳಿದ್ದವು.