ಕನ್ನಡಪ್ರಭ ವಾರ್ತೆ ಮೈಸೂರು
ಪ್ರತಿಭೆ ವಿಕಸನವಾಗಿ ಉತ್ತಮ ಶಿಕ್ಷಣ ಪಡೆಯಲು ಖಾಸಗಿ ಸಂಸ್ಥೆಗಳ ಅವಶ್ಯಕತೆ ಬೇಕಿಲ್ಲ, ಅದರ ಬದಲಿಗೆ ಓದುವ ಛಲ ಮತ್ತು ಹಂಬಲ ಇರಬೇಕು ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿದೇಶಿ ಕೇಂದ್ರ ಸ್ವಾಮೀಜಿ ಹೇಳಿದರು.ಸಾಲಿಗ್ರಾಮ ತಾಲೂಕಿನ ಭೇರ್ಯ ಗ್ರಾಮದ ಚಾಮುಂಡೇಶ್ವರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಮೈಸೂರು-ಚಾಮರಾಜನಗರ ವೀರಶೈವ ಲಿಂಗಾಯಿತ ಮಠಾಧಿಪತಿಗಳ ಗೋಷ್ಠಿ, ಶ್ರೀ ಶಿವರಾತ್ರಿ ರಾಜೇಂದ್ರ ಶ್ರೀಗಳ 109ನೇ ಜಯಂತಿ, ಪ್ರತಿಭಾ ಪುರಸ್ಕಾರ ಮತ್ತು ಲಿಂಗದೀಕ್ಷಾ ಸಂಸ್ಕಾರ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ಓದಿದವರು ಉನ್ನತ ಸ್ಥಾನ ಅಲಂಕರಿಸಿದ್ದು ಅವರು ಎಲ್ಲರಿಗೂ ಮಾದರಿಯಾಗಿರುವುದರಿಂದ ವಿದ್ಯಾರ್ಥಿಗಳು ಇದನ್ನು ಅರಿತು ಕಠಿಣ ಪರಿಶ್ರಮದ ಮೂಲಕ ಕಲಿತು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಸಿದ್ದಗಂಗಾ ಮಠಾಧೀಶ ಶ್ರೀ ಶಿವಕುಮಾರ ಸ್ವಾಮೀಜಿ ಮತ್ತು ಸುತ್ತೂರು ಮಠದ ಶ್ರೀ ರಾಜೇಂದ್ರ ಸ್ವಾಮೀಜಿ ಒಂದೇ ಅತ್ಮ ಎರಡು ದೇಹಗಳಂತೆ ಇದ್ದು ಮಠಗಳ ಏಳಿಗೆ ಮತ್ತು ಸಮಾಜ ಮುಖಿ ಕೆಲಸ ಮಾಡಿದ ಮಹಾನ್ ಪುರುಷರು ಎಂದು ಬಣ್ಣಿಸಿದರು.
ರಾಜೇಂದ್ರ ಶ್ರೀಗಳು 60 ವರ್ಷದ ಹಿಂದೆ ಹಳ್ಳಿಗಳಿಗೆ ತೆರಳಿ ಧವಸ ಧಾನ್ಯ ಸಂಗ್ರಹಿಸಿ ಆ ಮೂಲಕ ಅನಾಥಾಲಯ ಮತ್ತು ವಿದ್ಯಾರ್ಥಿ ನಿಲಯಗಳನ್ನು ಆರಂಭಿಸಿ ಆರ್ಥಿಕವಾಗಿ ಹಿಂದುಳಿದವರು ಮತ್ತು ಬಡವರ ಪಾಲಿನ ದೈವವಾಗಿದ್ದರು ಎಂದು ತಿಳಿಸಿದರು.ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ, ಸಮಾಜ ಸೇವೆ ಮತ್ತು ಶೈಕ್ಷಣಿಕ ಕ್ರಾಂತಿ ದೇಶದ ಇತರ ಮಠಗಳಿಗೆ ಮಾದರಿಯಾಗಿದೆ. ಅವರ ಅಕ್ಷರ ಹಾಗೂ ಅನ್ನ ದಾಸೋಹ ಪರಂಪರೆ ಅನುಕರಣೀಯ ಎಂದರು.
ಶಾಸಕ ಡಿ. ರವಿಶಂಕರ್ ಮಾತನಾಡಿ, ನಾಡಿನ ಶೈಕ್ಷಣಿಕ ಮತ್ತು ಸಾಮಾಜಿಕ ಏಳಿಗೆಯಲ್ಲಿ ಸುತ್ತೂರು ಮಠದ ಕೊಡುಗೆ ಅಪಾರವಾಗಿದ್ದು ವಿಶ್ವದ ಭೂಪಟದಲ್ಲಿ ಆ ಸಾಧನೆ ಅಚ್ಚಳಿಯದೆ ಉಳಿಯಲಿದೆ ಎಂದು ಹೇಳಿದರು.ಈ ಮಠದಲ್ಲಿ ಕಲಿತವರು ದೇಶ ವಿದೇಶಗಳಲ್ಲಿ ಹೆಸರು ಮಾಡಿ ಆಭಿವೃದ್ಧಿಗೆ ಅಪಾರ ಕೊಡುಗೆ ನೀಡುತ್ತಿದ್ದು ಇಂತಹ ಉತ್ತಮ ಕೆಲಸ ಮಾಡುತ್ತಿರುವ ಸುತ್ತೂರು ಮಠ ನಮ್ಮ ಜಿಲ್ಲೆಯಲ್ಲಿ ಇರುವುದು ಎಲ್ಲರ ಹೆಮ್ಮೆ ಎಂದರು.
ಕೆ.ಆರ್.ನಗರ ಪಟ್ಟಣದಲ್ಲಿ ನಿರ್ಮಾಣ ಹಂತದಲ್ಲಿರುವ ಬಸವ ಭವನದ ಮುಂದುವರಿದ ಕಾಮಗಾರಿಗೆ ಅಗತ್ಯವಿರುವ ಅನುದಾನ ಸರ್ಕಾರದಿಂದ ಕೊಡಿಸುವ ಕೆಲಸ ಮಾಡುವುದರೊಂದಿಗೆ ವೈಯುಕ್ತಿಕವಾಗಿ ಸಹಕಾರ ನೀಡುವುದಾಗಿ ಭರವಸೆ ನೀಡಿದರು.ಬಸವೇಶ್ವರರ ತತ್ತ್ವ ಮತ್ತು ಸಿದ್ಧಾಂತ ಪಾಲಿಸಿದ ರಾಜೇಂದ್ರ ಸ್ವಾಮಿಗಳು ಮಠದ ಘನತೆಯನ್ನು ಮುಗಿಲೆತ್ತರಕ್ಕೆ ಏರಿಸಿದ್ದು ಶಿಕ್ಷಣ ಕ್ರಾಂತಿ ಮಾಡಿದ್ದರು. ಈಗ ಆ ಪರಂಪರೆಯನ್ನು ಮುಂದುವರಿಸುತ್ತಿರುವ ಶಿವರಾತ್ರಿ ದೇಶಿಕೇಂದ್ರ ಶ್ರೀಗಳು ನಮಗೆ ಆದರ್ಶಪ್ರಾಯ ಎಂದರು.
ಕೆ.ಆರ್. ನಗರ ತಾಲೂಕು ಕೇಂದ್ರದಿಂದ ಸಿದ್ದಗಂಗಾ ಮಠಕ್ಕೆ ನಿತ್ಯ ಮುಂಜಾನೆ ಸಾರಿಗೆ ಬಸ್ ಸಂಚಾರದ ವ್ಯವಸ್ಥೆ ಕಲ್ಪಿಸುವುದಾಗಿ ಪ್ರಕಟಿಸಿದರು.---ಬಾಕ್ಸ್ ಸುದ್ದಿಸಂಸ್ಕಾರ ಕಲಿಸುವಿಕೆ ಮಠದ ಹೆಗ್ಗಳಿಕೆ- ಎಚ್. ವಿಶ್ವನಾಥ್ಸುತ್ತೂರು ಮಠದಲ್ಲಿ ಕಲಿತವರು ಅಕ್ಷರದ ಜತೆಗೆ ಸಂಸ್ಕಾರ ಕಲಿಯಲಿದ್ದು ಇದು ಆ ಮಠದ ಹೆಗ್ಗಳಿಕೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿದರು.
ಸಾಲಿಗ್ರಾಮ ತಾಲೂಕಿನ ಭೇರ್ಯ ಗ್ರಾಮದಲ್ಲಿ ಭಾನುವಾರ ನಡೆದ ಮೈಸೂರು-ಚಾಮರಾಜನಗರ ವೀರಶೈವ ಲಿಂಗಾಯಿತ ಮಠಾಧಿಪತಿಗಳ ಗೋಷ್ಠಿ, ಶ್ರೀ ಶಿವರಾತ್ರಿ ರಾಜೇಂದ್ರ ಶ್ರೀಗಳ 109ನೇ ಜಯಂತಿ, ಪ್ರತಿಭಾ ಪುರಸ್ಕಾರ ಮತ್ತು ಲಿಂಗದೀಕ್ಷಾ ಸಂಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.ರಾಜ ಗುರು ತಿಲಕರಾಗಿದ್ದ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಜಾತ್ಯಾತೀತವಾಗಿ ಪ್ರತಿಯೊಬ್ಬರನ್ನು ಕಂಡು ಮಠದಲ್ಲಿ ಅಕ್ಷರ, ಆರೋಗ್ಯ ಮತ್ತು ದಾಸೋಹ ಪರಂಪರೆಯನ್ನು ಆರಂಭಿಸಿ ನಾಡಿಗೆ ಬೆಳಕಾದ ಮಹಾನ್ ಪುರುಷ ಎಂದರು.
ಮಠದಲ್ಲಿ ಕಲಿಯುವ ಮಕ್ಕಳ ಹಸಿವಿನಿಂದ ಇರಬಾರದು ಎಂದು ಸಂಕಷ್ಟದ ಕಾಲದಲ್ಲಿಯೂ ಜೋಳಿಗೆಯ ಮೂಲಕ ಬೇಡಿ ಅವರ ಹಸಿವು ನೀಗಿಸಿ ಅಕ್ಷರದ ಜತೆಗೆ ಅನ್ನವನ್ನು ನೀಡಿದ ಅವರು ದೈವಾಂಶ ಸಂಭೂತ ಎಂದು ಪ್ರಶಂಸೆ ವ್ಯಕ್ತಪಡಿಸಿದರು.ರಾಜೇಂದ್ರ ಶ್ರೀಗಳ ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಿರುವ ಶಿವರಾತ್ರಿ ದೇಶಿಕೇಂದ್ರ ಶ್ರೀಗಳು ಮಠದ ಘನತೆ ಮತ್ತು ಗೌರವವನ್ನು ಜಗದಗಲಕ್ಕೆ ವಿಸ್ತರಿಸುತ್ತಿದ್ದು, ಅವರ ಆಶೀರ್ವಚನ ಹಾಗೂ ಮಾರ್ಗದರ್ಶನ ನಮಗೆ ಅತ್ಯಂತ ಅಗತ್ಯ ಎಂದರು.
ಸಿದ್ದಗಂಗಾ ಮಠಾಧೀಶರಾಗಿದ್ದ ಡಾ. ಶಿವಕುಮಾರ ಶ್ರೀಗಳು, ಮಾನವ ಕುಲದ ಮೇರು ಪರ್ವತವಾಗಿದ್ದರಲ್ಲದೆ ತಮ್ಮ ಜೀವನವನ್ನು ಬಡವರು ಮತ್ತು ನೊಂದವರ ಏಳಿಗೆಗಾಗಿ ಸವೆಸಿದ ಅಭಿನವ ಬಸವಣ್ಣ ಎಂದು ಕೊಂಡಾಡಿದರು.ತುಮಕೂರು ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಶಿವಸಿದ್ದೇಶ್ವರ ಸ್ವಾಮೀಜಿ, ಸಿದ್ದಗಂಗಾ ಭಕ್ತರ ಬಳಗದ ಅಧ್ಯಕ್ಷ ಸಿ.ಪಿ. ರಮೇಶ್ ಕುಮಾರ್, ಮಾತನಾಡಿದರು. ಈ ಸಂದರ್ಭದಲ್ಲಿ 109 ಮಂದಿಗೆ ಲಿಂಗದೀಕ್ಷೆ ನೀಡಲಾಯಿತು. ವೀರಶೈವ ಲಿಂಗಾಯಿತ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿದರು.
ಬೆಟ್ಟದಪುರ ಸಲಿಲಾಖ್ಯ ಮಠದ ಶ್ರೀ ಚನ್ನಬಸವದೇಶಿಕೇಂದ್ರ ಸ್ವಾಮೀಜಿ, ಕರ್ಪೂರವಳ್ಳಿ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಅರಕೆರೆ ವಿರಕ್ತ ಮಠದ ಶ್ರೀ ಸಿದ್ದೇಶ್ವರಸ್ವಾಮೀಜಿ, ಹಾಡ್ಯ ಈಶಾನ್ಯೇಶ್ವರ ಮಠದ ಬಸವರಾಜಶ್ರೀಗಳು, ಉದ್ಯಮಿ ಪಂಚಾಕ್ಷರಿ, ಸಿದ್ದಗಂಗಾ ಭಕ್ತರ ಬಳಗದ ಪದಾಧಿಕಾರಿಗಳು, ಕುಂದೂರು ಮಠದ ಡಾ. ಶರತ್ ಚಂದ್ರ ಸ್ವಾಮೀಜಿ, ಕೊಳ್ಳೇಗಾಲ ಮುಡಿಗುಂಡ ಮಠದ ಶ್ರೀಕಂಠಸ್ವಾಮಿ, ಹರವೆ ಮಠದ ಸರ್ಪಭೂಷಣ ಶ್ರೀಗಳು, ನೀಲಕಂಠ ಸ್ವಾಮಿ ಮಠದ ಶ್ರೀ ಸಿದ್ದಮಲ್ಲಸ್ವಾಮೀಜಿ, ಚಿಲಕವಾಡಿ ಮಠದ ಶ್ರೀ ಬಾಲ ಷಡಕ್ಷರ ಸ್ವಾಮೀಜಿ, ಎಲೆಮುದ್ದನಹಳ್ಳಿ ಮಠದ ಮಲೇಶಸ್ವಾಮೀಜಿ, ತಣ್ಣೀರುಹಳ್ಳ ಮಠದ ಶ್ರೀ ವಿಜಯಕುಮಾರ ಸ್ವಾಮೀಜಿ ಸೇರಿದಂತೆ ಹಲವರು ಇದ್ದರು.