ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗ್ಯಾಸ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ. ನಮ್ಮ ಜಿಲ್ಲೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಸಾರ್ವಜನಿಕರು ಅನಗತ್ಯವಾಗಿ ಸಿಲಿಂಡರ್ ಬುಕ್ ಮಾಡಬಾರದು ಎಂದರು.
ಪ್ರತಿದಿನ 9427 ಎಲ್ಪಿಜಿಗಳು ಜಿಲ್ಲೆಯಲ್ಲಿ ವಿತರಣೆಯಾಗುತ್ತಿವೆ. ವಾರಕ್ಕೆ ಮೊದಲು ಬುಕ್ಕಿಂಗ್ ಸಂಖ್ಯೆ ಸಾಮಾನ್ಯವಾಗಿದ್ದರೂ, ವದಂತಿಗಳ ನಂತರ ಇದು ಐದು ಪಟ್ಟು ಹೆಚ್ಚಾಗಿ, 46,335ಕ್ಕೆ ಏರಿಕೆಯಾಗಿದೆ. ಇದು ಕೇವಲ ಜನರ ಆತಂಕದಿಂದ ಉಂಟಾಗಿರುವ ಸಮಸ್ಯೆಯೇ ಹೊರತು, ಇದು ಗ್ಯಾಸ್ ಕೊರತೆಯಿಂದ ಆಗಿದ್ದಲ್ಲ ಎಂದು ಸ್ಪಷ್ಟಪಡಿಸಿದರು.ಇನ್ನು ನಾಲ್ಕೈದು ದಿನಗಳಲ್ಲಿ ಎಲ್ಲಾ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ಗಳನ್ನು ಪೂರೈಸಲಾಗುವುದು. ಗ್ಯಾಸ್ ಏಜೆನ್ಸಿಗಳ ಮುಂದೆ ಅನಗತ್ಯವಾಗಿ ಸಾಲುಗಟ್ಟು ನಿಲ್ಲುವ ಅವಶ್ಯಕತೆ ಇಲ್ಲ. ಒಂದು ವೇಳೆ ಯಾರಾದರೂ ಗ್ಯಾಸ್ ಏಜೆನ್ಸಿಗಳ ಮುಂದೆ ಸರದಿ ಸಾಲು ನಿಂತು, ಜನರಲ್ಲಿ ಆತಂಕ ಸೃಷ್ಟಿಸುವುದು, ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಸುಳ್ಳು ಸುದ್ದಿ ಹಬ್ಬಿಸುವುದನ್ನು ಮಾಡಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಐದು ಕೆಜಿ ಗೃಹ ಬಳಕೆ ಸಿಲಿಂಗಡ್ ಹೊಂದಿರುವ ನಗರ ಪ್ರದೇಶದ ವಾಸಿಗಳು 9 ದಿನಕ್ಕೊಮ್ಮೆ ಹಾಗೂ ಗ್ರಾಮೀಣ ಪ್ರದೇಶದವರು 16 ದಿನಕ್ಕೊಮ್ಮೆ ಬುಕ್ಕಿಂಗ್ ಮಾಡಲು ಅವಕಾಶ ಕಲ್ಪಿಸಿದೆ. 10 ಕೆಜಿ ಕಂಪೋಸಿಟ್ ಸಿಲಿಂಡರ್ ಹೊಂದಿರುವ ನಗರ ಪ್ರದೇಶದ ಜನರು 18 ದಿನಕ್ಕೆ ಹಾಗೂ ಗ್ರಾಮೀಣ ಭಾಗದವರು 32 ದಿನಕ್ಕೊಮ್ಮೆ ಬುಕ್ ಮಾಡಬಹುದು. ಗ್ಯಾಸ್ ಸಿಲಿಂಡರ್ ಬಗ್ಗೆ ಯಾವುದೇ ಭಯ, ಆತಂಕವೂ ಬೇಡ ಎಂದರು.
ಜಿಲ್ಲಾ ಪೊಲೀಸ್ ವರಿಷ್ಟ ಡಾ.ಎಚ್.ಟಿ.ಶೇಖರ, ಜಿಪಂ ಸಿಇಓ ಗಿತ್ತೆ ಮಾಧಲ ವಿಠ್ಠಲರಾವ್, ಆಹಾರ ಮತ್ತು ನಾಗರೀಕ ಸರಬರಾಜು ಜಂಟಿ ನಿರ್ದೇಶಕ ಮಧುಸೂಧನ್, ಇಂಧನ ಪೂರೈಕೆ ಕಂಪನಿಗಳ ನೋಡೆಲ್ ಅಧಿಕಾರಿಗಳು ಇತರರು ಇದ್ದರು.
ಸುಳ್ಳು ಸುದ್ದಿ ಹರಡುವವರ ವಿರುದ್ಧ ಎಫ್ಐಆರ್ಸಮಾಜದಲ್ಲಿ ಅಶಾಂತಿ ಮತ್ತು ಅಭದ್ರತೆ ಮೂಡಿಸಲು ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಜಿಲ್ಲಾ ಪೊಲೀಸ್ ಇಲಾಖೆ ತೀವ್ರ ನಿಗಾ ವಹಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹಬ್ಬಿಸುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಎಫ್ಐಆರ್ ದಾಖಲಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಎಚ್ಚರಿಸಿದರು.
ಕೇಂದ್ರ, ರಾಜ್ಯ ಸರ್ಕಾರಗಳು, ಪ್ರಧಾನ ಮಂತ್ರಿಗಳೂ ಈ ಬಗ್ಗೆ ಭರವಸೆ ನೀಡಿದ್ದಾರೆ. ಯಾವುದೇ ಪೆಟ್ರೋಲ್ ಬಂಕ್ಗಳಲ್ಲಿ ಕ್ಯಾನ್ ಅಥವಾ ಟ್ಯಾಂಕ್ಗಳ ಮೂಲಕ ಅನಗತ್ಯವಾಗಿ ಇಂಧನ ಮಾರಾಟ ಮಾಡದಂತೆ ನಿರ್ದೇಶನ ನೀಡಲಾಗಿದೆ. ಜನರು ಆತಂಕದಿಂದ ಇಂಧನ ತುಂಬಿಸಿಕೊಳ್ಳುವ ಅಗತ್ಯವಿಲ್ಲ. ಅಂತಹ ಪರಿಸ್ಥಿತಿಯೂ ಬಂದಿಲ್ಲ ಎಂದು ಹೇಳಿದರು.