ಹಿರಿಯೂರು ನಗರವಾಸಿಗಳಿಗೆ ನೀರಿನ ಅಭಾವವಿಲ್ಲ

KannadaprabhaNewsNetwork | Published : Mar 19, 2025 12:30 AM

ಹಿರಿಯೂರು ನಗರದ ಹೊರ ಭಾಗದಲ್ಲಿರುವ ಲಕ್ಕವ್ವನಹಳ್ಳಿಯ ಜಲ ಶುದ್ಧೀಕರಣ ಘಟಕ.

ನಗರದ 31 ವಾರ್ಡ್‌ಗಳಲ್ಲೂ ಸಕಲ ಸಿದ್ಧತೆ । ನಗರದ 136 ಕೊಳವೆ ಬಾವಿಗಳು ಕಾರ್ಯ ನಿರ್ವಹಣೆರಮೇಶ್ ಬಿದರಕೆರೆ

ಕನ್ನಡಪ್ರಭ ವಾರ್ತೆ ಹಿರಿಯೂರು

ಬಿಸಿಲು ಜ್ವರ ಏರಿದಂತೆ ಏರುತ್ತಿರುವ ಈ ಹೊತ್ತಲ್ಲಿ 76 ಸಾವಿರ ಜನಸಂಖ್ಯೆ ಇರುವ ಹಿರಿಯೂರು ನಗರದಲ್ಲಿ ಕುಡಿಯುವ ನೀರಿನ ಬವಣೆ ಆಗದಂತೆ ನಗರಸಭೆ ಆಡಳಿತ ಮುನ್ನೆಚ್ಚರಿಕೆ ವಹಿಸಿದೆ. ನಗರದ 31 ವಾರ್ಡ್‌ಗಳಲ್ಲೂ ಸದಸ್ಯರ ಸಹಕಾರ ಪಡೆದು ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರವಾಗದಂತೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ಇಡೀ ಜಿಲ್ಲೆಯಲ್ಲಿಯೇ ಹಿರಿಯೂರು ತಾಲೂಕಿನಲ್ಲಿ ಕುಡಿಯುವ ನೀರಿನ ತೊಂದರೆ ಇಲ್ಲ ಎನ್ನಲಾಗಿದೆ.

ವಿವಿ ಸಾಗರದಿಂದ ಪ್ರತಿ ದಿನವೂ 11 ಎಂಎಲ್‌ಡಿ ನೀರು ಲಕ್ಕವ್ವನಹಳ್ಳಿ ಬಳಿಯ ಜಲ ಶುದ್ಧೀಕರಣ ಘಟಕಕ್ಕೆ ಬರುತ್ತದೆ. ಅಲ್ಲಿಂದ ನೀರು ಶುದ್ಧೀಕರಣಗೊಂಡು ವಾರ್ಡ್‌ಗಳಿಗೆ ತಲುಪುತ್ತಿದೆ. ಮೊದಲೆಲ್ಲಾ 3 ದಿನಕ್ಕೊಮ್ಮೆ ನೀರು ಬಿಡುತ್ತಿದ್ದು ಇದೀಗ ಸಾಕಷ್ಟು ನೀರಿನ ಅನುಕೂಲ ಇರುವುದರಿಂದ ಪ್ರತಿ ದಿನವೂ ಕುಡಿಯುವ ನೀರು ಒದಗಿಸಲಾಗುತ್ತಿದೆ.

ವಿವಿ ಸಾಗರ ಜಲಾಷಯ ಭರ್ತಿಯಾದ ಮೇಲೆ ಅಂತರ್ಜಲ ವೃದ್ಧಿಯಾಗಿದ್ದು ನಗರ ಭಾಗದ ಎಲ್ಲಾ 136 ಕೊಳವೆ ಬಾವಿಗಳು ಕಾರ್ಯ ನಿರ್ವಹಿಸುತ್ತಿವೆ. ಬೋರ್‌ವೆಲ್‌ಗಳೆಲ್ಲಾ ರೀ ಚಾರ್ಜ್ ಆಗಿರುವುದು ನೀರಿನ ಸಮಸ್ಯೆಯಾಗದ್ದಕ್ಕೆ ಮತ್ತೊಂದು ಕಾರಣವಾಗಿದೆ. ನೆಲದಡಿಯ ಪೈಪ್‌ಲೈನ್ ಗಳೆಲ್ಲಾ ಚನ್ನಾಗಿದ್ದು ಎಲ್ಲಾದರೂ ಪೈಪ್ ಒಡೆದರೆ, ಸೋರಿಕೆ ಕಂಡರೆ ಮಾತ್ರ ಆಗ ಒಂದು ದಿನ ನೀರಿನ ವ್ಯತ್ಯಾಸವಾಗುತ್ತದೆಯೇ ಹೊರತು ನಗರದ ಭಾಗದಲ್ಲಿ ಉಳಿದಂತೆ ನೀರಿನ ಕೊರತೆ ಆಗಿಲ್ಲ. ನಗರ ಭಾಗದಲ್ಲಿ 10ಲಕ್ಷ ಲೀಟರ್‌ನ 5 ಟ್ಯಾoಕ್ ಹಾಗೂ 5 ಲಕ್ಷ ಲೀಟರ್ 5 ಟ್ಯಾoಕ್ ಗಳಿವೆ. ಮೂರು ದಿನಕ್ಕೊಮ್ಮೆ ನೀರಿನ ಪರೀಕ್ಷೆ ಮಾಡಲಾಗುತ್ತಿದ್ದು ಶುದ್ಧ ನೀರು ನೀಡುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಜಲ ಶುದ್ಧೀಕರಣ ಘಟಕದಲ್ಲಿ ಜಲ ಶುದ್ಧೀಕರಣಕ್ಕೆ ಬೇಕಾದ ಎಲ್ಲಾ ರೀತಿಯ ಪೌಡರ್‌ಗಳು ಸ್ಟಾಕ್ ಇದ್ದು ಅಲ್ಲೂ ಯಾವುದೇ ರೀತಿಯ ಕೊರತೆ ಇಲ್ಲ. ಈಗಾಗಲೇ ನಗರ ಭಾಗದಲ್ಲಿ ಎಲ್ಲಾ ಕಡೆಯೂ ಕುಡಿಯುವ ನೀರಿನ ಪೈಪ್‌ಲೈನ್ ಇದ್ದು ಹೊಸದಾಗಿ ಬಡಾವಣೆಗಳು ಆಗುವ ಕಡೆಯೂ ನೀರಿನ ಪೈಪ್‌ಲೈನ್ ಮಾಡಲಾಗುತ್ತಿದೆ.

ನಗರ ವ್ಯಾಪ್ತಿಯಲ್ಲಿ 6,900 ಮನೆ ನಲ್ಲಿಗಳಿದ್ದು 60 ವಾಣಿಜ್ಯ ನಲ್ಲಿಗಳಿವೆ. ಅನಧಿಕೃತ ನಲ್ಲಿಗಳ ಸಂಪರ್ಕಕ್ಕೂ ಕಡಿವಾಣ ಹಾಕಲಾಗುತ್ತಿದ್ದು ಅವುಗಳನ್ನು ಗುರುತಿಸಿ ಸಂಪರ್ಕ ಕಡಿತಗೊಳಿಸಲಾಗುತ್ತಿದೆ. ಅನಧಿಕೃತ ನಲ್ಲಿಗಳ ಪತ್ತೆ ಗಾಗಿಯೇ ಒಂದು ತಂಡ ರಚಿಸಲಾಗಿದೆ. ವಾಟರ್ ಸಪ್ಲೈನ 17 ಮಂದಿ ಕಾರ್ಯ ನಿರ್ವಹಿಸುತ್ತಿದ್ದು ಇನ್ನಷ್ಟು ಮಂದಿಯನ್ನು ನೇಮಿಸಿಕೊಳ್ಳಲು ತಯಾರಿ ನಡೆಸಲಾಗಿದೆ. ಇದ್ದೆಲ್ಲದರ ಜೊತೆಗೆ ನಗರ ಭಾಗದಲ್ಲಿ ಖಾಸಗಿಯಾಗಿ ನೀರು ವಿತರಿಸುವವರಿಗೆ ಈಗಾಗಲೇ ನೋಟೀಸ್ ನೀಡಿದ್ದು ಜನತೆಗೆ ಶುದ್ಧ ಕುಡಿಯುವ ನೀರು ಮಾರಾಟ ಮಾಡಲು ಸೂಚಿಸಲಾಗಿದೆ. ಒಟ್ಟಿನಲ್ಲಿ ಬೇಸಿಗೆ ಬಂದರೂ ಸಹ ನಗರವಾಸಿಗಳಿಗೆ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗದಂತೆ ಎಲ್ಲಾ ರೀತಿಯ ಮುಂಜಾಗರೂಕತೆ ವಹಿಸಲಾಗಿದೆ.

ಕುಡಿಯುವ ನೀರಿನ ಅಭಾವ ಆಗಿಲ್ಲ. ಅಭಾವ ಆಗುವ ಆತಂಕವೂ ಇಲ್ಲ. ನಗರಸಭೆ ಸದಸ್ಯರ, ಅಧ್ಯಕ್ಷರ ಹಾಗೂ ಸಿಬ್ಬಂದಿ ಸಹಕಾರದಿಂದ ವಾರ್ಡ್‌ಗಳ ಜನರಿಗೆ ಸಮರ್ಪಕವಾಗಿ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ. ಬೋರ್‌ವೆಲ್‌ಗಳು ರೀ ಚಾರ್ಜ್ ಆಗಿದ್ದು ಬರುವ ದಿನಗಳಲ್ಲೂ ನೀರಿನ ಅಭಾವ ಆಗಲಾರದು ಎಂದರು.

-ಎ.ವಾಸಿಂ, ನಗರಸಭೆ ಪೌರಾಯುಕ್ತ