ಕನ್ನಡಪ್ರಭ ವಾರ್ತೆ ನಾಗಮಂಗಲ
ನೂರಾರು ವರ್ಷಗಳ ಇತಿಹಾಸ ಹೊಂದಿರುವ ತಾಲೂಕಿನ ದೇವಲಾಪುರ ಹೋಬಳಿ ದೇವರಹಳ್ಳಿ ಶ್ರೀತಪಸೀರಾಯಸ್ವಾಮಿ ದೇವಸ್ಥಾನದ ಅರ್ಚಕ ಶ್ರೀನಿವಾಸಮೂರ್ತಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ವೀಡಿಯೋದಲ್ಲಿ ಯಾವುದೇ ಸತ್ಯಾಂಶವಿಲ್ಲ. ಇವರ ಪೂರ್ವಜರು ತಲತಲಾಂತರದಿಂದ ಮಾಡಿಕೊಂಡು ಬಂದಿರುವ ಅರ್ಚಕ ವೃತ್ತಿಯನ್ನು ಅತ್ಯಂತ ಶ್ರದ್ಧೆ ಭಕ್ತಿಯಿಂದ ಪ್ರಾಮಾಣಿಕವಾಗಿ ಮುಂದುವರಿಸಿಕೊಂಡು ಬರುತ್ತಿದ್ದಾರೆ ಎಂದು ಗ್ರಾಮಸ್ಥರು ಹೇಳಿದರು.ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಗ್ರಾಮಸ್ಥರು, ಅರ್ಚಕ ಶ್ರೀನಿವಾಸಮೂರ್ತಿ ಅವರಿಂದ ದೇವಸ್ಥಾನದ ಪೂಜೆಗೆ ಬರುವ ಭಕ್ತರಿಗಾಗಲಿ ಅಥವಾ ಗ್ರಾಮಸ್ಥರಿಗಾಗಲಿ ಯಾವುದೇ ತೊಂದರೆಯಾಗಿಲ್ಲ ಎಂದರು.
ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದ್ದರೂ ಕೂಡ ಇಲಾಖೆ ಅನುಮತಿ ಪಡೆಯದೇ ಜೀರ್ಣೋದ್ಧಾರ ಸಮಿತಿ ಮಾಡಿಕೊಂಡಿರುವ ಕೆಲವರು ಅರ್ಚಕ ಶ್ರೀನಿವಾಸಮೂರ್ತಿ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಗ್ರಾಮದಲ್ಲಿ 40ಕ್ಕೂ ಹೆಚ್ಚು ಮನೆಗಳಿದ್ದು ಎಲ್ಲ ಸಮುದಾಯದ ಜನರಿದ್ದೇವೆ. ಅರ್ಚಕರೂ ಸೇರಿದಂತೆ ಗ್ರಾಮಸ್ಥರನ್ನು ಹೊರತುಪಡಿಸಿ ಕಾನೂನು ಬಾಹಿರವಾಗಿ ಕೆಲವರು ಸಮಿತಿ ರಚಿಸಿಕೊಂಡಿದ್ದಾರೆ ಎಂದು ದೂರಿದರು.ದೇಗುಲದಲ್ಲಿ ಅರ್ಚಕರ ಮನೆಗೆಲಸದ ಮಹಿಳೆ ಪೂಜೆ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಗ್ರಾಮಸ್ಥರು, ದೇವಸ್ಥಾನದ ಪ್ರಧಾನ ಅರ್ಚಕರು ಬೇರೊಂದು ಗ್ರಾಮದ ದೇವಸ್ಥಾನಕ್ಕೆ ಪೂಜೆಗೆಂದು ಹೋಗಿದ್ದರು. ಮತ್ತೊಬ್ಬ ಅರ್ಚಕರಿಗೆ ಆರೋಗ್ಯ ಸಮಸ್ಯೆಯಿದ್ದರೂ ಸಹ ಪೂಜೆ, ಅಭಿಷೇಕ ಎಲ್ಲವನ್ನೂ ಮುಗಿಸಿ ಆಸ್ಪತ್ರೆಗೆ ತೆರಳಿದ್ದರು. ಈ ಸಮಯದಲ್ಲಿ ಆಗಮಿಸಿದ್ದ ಭಕ್ತರು ನೀವೇ ಪೂಜೆ ಮಾಡಿಕೊಡಿ ಎಂದು ಅವರ ಮನೆಗೆಲಸದ ಮಹಿಳೆಯನ್ನು ಕೋರಿಕೊಂಡ ಹಿನ್ನೆಲೆಯಲ್ಲಿ ದೂರದಿಂದ ಭಕ್ತರಿಗೆ ತೊಂದರೆಯಾಗಬಾರದೆಂಬ ಕಾರಣಕ್ಕೆ ಆ ಮಹಿಳೆ ಪೂಜೆ ಮಾಡಿಕೊಟ್ಟಿದ್ದಾರೆ ಅಷ್ಟೆ ಎಂದರು.
ಅರ್ಚಕರ ಮನೆಯಲ್ಲಿ ಕೆಲಸ ಮಾಡುವ ಮಹಿಳೆಯೂ ಕೂಡ ಅದೇ ಸಮುದಾಯವರು. ಅರ್ಚಕರಿಲ್ಲದ ಸಮಯದಲ್ಲಿ ಪೂಜೆಗೆ ಬರುವ ಭಕ್ತರ ಅನುಕೂಲಕ್ಕಾಗಿ ಅವರ ಮನೆಗೆಲಸದ ಮಹಿಳೆ ಪೂಜೆ ಮಾಡಿಕೊಡುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ ಇದು ಹೊಸತೇನಲ್ಲ. ಮಹಿಳೆಯರು ದೇಗುಲದಲ್ಲಿ ಪೂಜೆ ಮಾಡಬಾರೆಂಬ ನಿಯಮವಿದೆಯೇ ಎಂದು ಪ್ರಶ್ನಿಸಿದರು.ಸಮಿತಿಯವರು ಯಾರ ಅನುಮತಿಯನ್ನೂ ಪಡೆಯದೆ ಗ್ರಾಮಸ್ಥರ ಗಮನಕ್ಕೂ ತರದೆ ಗ್ರಾಮದ ಶ್ರೀಆಂಜನೇಯಸ್ವಾಮಿ ದೇಗುಲವನ್ನು ತೆರವುಗೊಳಿಸಿ ದೇವರಿಗೆ ಪೂಜೆ ಇಲ್ಲದಂತೆ ಮಾಡಿದ್ದಾರೆ. ಸಾರ್ವಜನಿಕವಾಗಿ ವಂತಿಕೆ ಸಂಗ್ರಹಿಸಿರುವ ಬಗ್ಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಂದ ದಾಖಲೆ ಸಂಗ್ರಹಿಸಿದ ನಂತರ ಕಾನೂನು ಹೋರಾಟಕ್ಕೆ ಮುಂದಾಗುತ್ತೇವೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಗ್ರಾಮದ ಶ್ರೀನಿವಾಸ್, ರಾಮಣ್ಣ, ಮಧು, ವಿನೋದ್, ಶ್ರೀನಿವಾಸ್, ಕೀರ್ತಿರಾಜ್, ರಮೇಶ್, ಪುಟ್ಟರಾಜು, ಸಂತೋಷ್ಕುಮಾರ್, ಸತೀಶ, ಲಲಿತ ಮತ್ತು ಚಿಕ್ಕರಾಯಿ ಇದ್ದರು.