ತಾಯಿ ಇಲ್ಲದೇ ಜಗತ್ತಿಲ್ಲ, ಎಂದಿಗೂ ದುಃಖ ಕೊಡಬೇಡಿ: ಬ್ರಹ್ಮಕುಮಾರಿ ಶಾರದಾಜೀ ಸಲಹೆ

KannadaprabhaNewsNetwork |  
Published : May 13, 2026, 12:45 AM IST
12ಜಿಪಿಟಿ1ಗುಂಡ್ಲುಪೇಟೆಯಲ್ಲಿ ನಡೆದ ವಿಶ್ವ ತಾಯಂದಿರ ದಿನಾಚರಣೆಯನ್ನು ಮಂಡ್ಯ ಈಶ್ವರೀಯ ವಿಶ್ವ ವಿದ್ಯಾಲಯಗಳ ಜಿಲ್ಲಾ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ಶಾರದಾಜೀ ಉದ್ಘಾಟಿಸಿದರು. | Kannada Prabha

ಸಾರಾಂಶ

ಭಾರತದ ಸನಾತನ ಸಂಸ್ಕೃತಿ ಮೂಲ ಬೇರು ಮಾತೆಯಾಗಿದ್ದಾರೆ. ಮಾತೆಯರು ಏನು ಬೇಕಾದರೂ ಮಾಡಲು ಸಾಧ್ಯವಿದೆ. ಆದರೆ ಇಂದು ರಸ್ತೆ, ಮನೆ, ಕಾಂಪೌಂಡ್ ದೊಡ್ಡದಾಗುತ್ತಿವೆ, ಆದರೆ ಮನಸ್ಸು ಮಾತ್ರ ಸಂಕುಚಿತವಾಗುತ್ತಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತಾಯಿ ಇಲ್ಲದೆ ಜಗತ್ತಿಲ್ಲ, ತಾಯಂದಿರಿಗೆ ಎಂದೂ ದುಃಖ ಕೊಡಬೇಡಿ ಎಂದು ಮಂಡ್ಯ ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವವಿದ್ಯಾಲಯಗಳ ಜಿಲ್ಲಾ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ಶಾರದಾಜೀ ಸಲಹೆ ನೀಡಿದರು.

ಪಟ್ಟಣದ ಶ್ವೇತಾದ್ರಿ ಬಡಾವಣೆಯ ಜ್ಞಾನ ಸೂರ್ಯ ಭವನದಲ್ಲಿ ನಡೆದ ವಿಶ್ವ ತಾಯಂದಿರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ತಾಯಂದಿರಿಗೆ ದುಃಖ ಕೊಟ್ಟವರು ಸಹ ದುಃಖದಿಂದ ಸಾಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ಒಂದೇ ಮಾತರಂ ಗಾಯನ ಮಾತೆಯರಿಗೆ ಇದೆಯೇ ಹೊರತು, ಪುರುಷರಿಗಲ್ಲ. ಭಗವಂತನು ಸಹ ಮಾತೆಯರಿಗೆ ಜ್ಞಾನದ ಕಳಶ ಕೊಟ್ಟು, ನಾಲ್ಕು ಗೋಡೆ ಮಧ್ಯೆ ನಲುಗುತ್ತಿದ್ದ ಮಾತೆಯರನ್ನು ವಿಶ್ವದ ಮಾತೆಯರನ್ನಾಗಿ ಮಾಡಿದ್ದಾನೆ ಎಂದು ಅಭಿಪ್ರಾಯಪಟ್ಟರು.

ಮನೋಬಲ ತರಬೇತುದಾರೆ, ರಾಜ ಯೋಗಿನಿ ಬ್ರಹ್ಮಕುಮಾರಿ ದಾನೇಶ್ವರೀಜೀ ಮಾತನಾಡಿ, ಭಾರತದ ಸನಾತನ ಸಂಸ್ಕೃತಿ ಮೂಲ ಬೇರು ಮಾತೆಯಾಗಿದ್ದಾರೆ. ಮಾತೆಯರು ಏನು ಬೇಕಾದರೂ ಮಾಡಲು ಸಾಧ್ಯವಿದೆ. ಆದರೆ ಇಂದು ರಸ್ತೆ, ಮನೆ, ಕಾಂಪೌಂಡ್ ದೊಡ್ಡದಾಗುತ್ತಿವೆ, ಆದರೆ ಮನಸ್ಸು ಮಾತ್ರ ಸಂಕುಚಿತವಾಗುತ್ತಿದೆ ಎಂದರು.

ಮನೆಯಲ್ಲಿ ತಂದೆ- ತಾಯಿ ಕಂಡರೆ ಮಕ್ಕಳಿಗೆ ಆಗುತ್ತಿಲ್ಲ, ಮಕ್ಕಳನ್ನು ಕಂಡರೆ ತಂದೆ- ತಾಯಿಗೆ ಆಗುತ್ತಿಲ್ಲ. ಕಾರಣ ಮಾತೆಯರು ಆಧ್ಯಾತ್ಮಿಕವಾಗಿ ಸಶಕ್ತೀಕರಣಗೊಳ್ಳುತ್ತಿಲ್ಲ. ಮನಸ್ಸಿನಲ್ಲಿ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ, ಅಹಂಕಾರಗಳು ತಾಂಡವಾಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಮನಸ್ಸೆಂಬ ಹೂದೋಟವು ದಿವ್ಯ ಗುಣಗಳೆಂಬ ಹೂಗಳಿಂದ ಸುಶೋಭಿತವಾಗುವುದರ ಬದಲು ಮರಳಿ ದುಃಖ ಕೊಡುವ ಮುಳ್ಳಿನ ಕಾಡೇ ಆವರಿಸಿಕೊಂಡಿದೆ ಎಂದು ವಿಷಾದಿಸಿದರು.

ಪತ್ರಕರ್ತೆ ತಾರಾ ನಾಗೇಂದ್ರ ಮಾತನಾಡಿ, ಕುಟುಂಬವೆಂಬುದು ವಿಶ್ವವಿದ್ಯಾಲಯವಿದ್ದಂತೆ. ಅದು ಬಹಳ ಒತ್ತಡದಲ್ಲಿರುವುದರಿಂದ ತಾಯಂದಿರಿಗೂ ಸರಿದೂಗಿಸುವುದು ಕಷ್ಟವಾಗುತ್ತಿದೆ. ಅದನ್ನು ಸರಳೀಕರಣ ಮಾಡಿಕೊಳ್ಳುವ ವಿಧಿ ವಿಧಾನ ತಿಳಿಸಿ ಕೊಡುತ್ತಿರುವ ಈಶ್ವರೀಯ ವಿಶ್ವವಿದ್ಯಾಲಯದ ಕಾರ್ಯ ಶ್ಲಾಘನೀಯವಾದದ್ದು ಎಂದರು.

ಆ್ಯಡ್ ಶಾಪ್ ಕಂಪನಿ ತರಬೇತುದಾರೆ ಸಂಧ್ಯಾ ಮಾತನಾಡಿ, ಆಯುರ್ವೇದದಿಂದ ಆರೋಗ್ಯಕರ ಜೀವನವನ್ನು ನಡೆಸಬಹುದು, ಮಾತೆಯರು ನ್ಯಾಪ್‌ ಕೀನ್‌ ಗಳನ್ನು ಹೇಗೆ ಬಳಸಬೇಕು ಎಂಬುವುದರ ಮಾಹಿತಿಯನ್ನು ನೀಡಿದರು.ಬಿ.ಕೆ.ಆರಾಧ್ಯ ಸ್ವಾಗತಿಸಿದರು. ರಾಜಯೋಗಿನಿ ಬ್ರಹ್ಮಕುಮಾರಿ ವೀಣಾಜೀ ವಂದಿಸಿದರು. ಕಾರ್ಯಕ್ರಮದಲ್ಲಿ ಹೊಳೇನರಸೀಪುರದ ಸರೋಜಾಜೀ, ಶಾಂಭವೀಜೀ, ವಿಜಿಯಾಜೀ, ಗೌರಿ, ಗಿರಿಜಾ, ರೇಖಾ, ಭಾಗ್ಯ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಂದುವರೆದ ಚಿರತೆ ಉಪಟಳ: ಗ್ರಾಮಸ್ಥರಲ್ಲಿ ಮನೆಮಾಡಿದ ಆತಂಕ
ಸರ್ಕಾರಿ ಕಚರಿಗಳಲ್ಲಿ ಕಡತಗಳ ಪರಿಶೀಲನೆ, ಸಮಗ್ರ ತನಿಖೆ ನಡೆಯಲಿ: ಕಿರಂಗೂರು ಪಾಪು