ರಾಷ್ಟ್ರಮಟ್ಟದ ಚಿಣ್ಣರ ಚಿತ್ರ ಚಿತ್ತಾರ ಚಿತ್ರಕಲೋತ್ಸವದ ಪರಿಚಯ ಪತ್ರಿಕೆ ಬಿಡುಗಡೆಗದಗ: ಪ್ರತಿಯೊಬ್ಬನಲ್ಲಿ ಒಬ್ಬ ಕಲಾವಿದನಿರುತ್ತಾನೆ. ಆ ಕಲಾವಿದ ಚಿತ್ರಕಲಾವಿದನೇ ಆಗಿರಬಹುದು ಅಥವಾ ವೈದ್ಯ, ಎಂಜಿನಿಯರ್, ರೈತ ಹೀಗೆ ಯಾವುದೇ ವೃತ್ತಿಯಲ್ಲಿದ್ದರು ಆ ವೃತ್ತಿಯ ನಿರ್ವಹಣೆಗೆ ಪ್ರತಿಯೊಬ್ಬನಲ್ಲಿ ಒಬ್ಬ ಕಲಾವಿದನಿರಲೇಬೇಕು ಎಂದು ವಿಪ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.
ನಗರದ ಬಣ್ಣದ ಮನೆ ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಚಿಣ್ಣರ ಚಿತ್ತಾರ ೨೦೨೩-೨೪ನೇ ಸಾಲಿನ ರಾಷ್ಟ್ರಮಟ್ಟದ ಚಿಣ್ಣರ ಚಿತ್ರ ಚಿತ್ತಾರ ಚಿತ್ರಕಲೋತ್ಸವದ ಪರಿಚಯ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.ಕಳೆದ ವರ್ಷ ಈಗಾಗಲೇ ರಾಜ್ಯ ಮಟ್ಟದ ಚಿಣ್ಣರ ಚಿತ್ರ ಚಿತ್ತಾರ ಚಿತ್ರಕಲೋತ್ಸವ ಯಶಸ್ವಿಯಾಗಿ ನಡೆದಿದ್ದು, ಈ ಬಾರಿ ರಾಷ್ಟ್ರಮಟ್ಟದ ಚಿತ್ರಕಲೋತ್ಸವ ಗದಗಿನಲ್ಲಿ ನಡೆಯುತ್ತಿರುವುದು ಪ್ರತಿಯೊಬ್ಬರು ಹೆಮ್ಮೆ ಪಡಬೇಕಾದ ಸಂಗತಿಯಾಗಿದೆ. ಚಿಣ್ಣರ ಚಿತ್ರ ಚಿತ್ತಾರ ಚಿತ್ರಕಲೋತ್ಸವಕ್ಕೆ ಸಂಪೂರ್ಣವಾಗಿ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಸಾನಿಧ್ಯ ವಹಿಸಿದ್ದ ಬ್ರಹ್ಮಕುಮಾರಿ ಈಶ್ವರಿ ವಿಶ್ವ ವಿದ್ಯಾಲಯದ ಜಯಂತಿ ಅಕ್ಕನವರು ಮಾತನಾಡಿ, ಇಂದಿನ ದಿನಮಾನಗಳಲ್ಲಿ ಮಕ್ಕಳಲ್ಲಿ ಸೃಜನಶೀಲತೆ ಬೆಳೆಸಬೇಕಾದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ನಾವೆಲ್ಲ ಮಕ್ಕಳಲ್ಲಿ ನೈತಿಕತೆಯ ಜೊತೆಗೆ ಸೃಜನಶೀಲತೆ ಬೆಳೆಸಬೇಕಾದ ಅವಶ್ಯಕತೆ ಇದೆ. ಬಣ್ಣದ ಮನೆ ಸಾಂಸ್ಕೃತಿಕ ವೇದಿಕೆಯಿಂದ ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾಗಿ ಸಾಕಷ್ಟು ರಚನಾತ್ಮಕ ಕಾರ್ಯಗಳು ನಡೆಯುತ್ತಿರುವುದು ಸಂತಸದ ಸಂಗತಿ ಎಂದರು.ಈ ವೇಳೆ ಬಣ್ಣದ ಮನೆ ಸಾಂಸ್ಕೃತಿಕ ವೇದಿಕೆಯ ವಿಜಯ ಕಿರೇಸೂರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜೆ.ಎನ್. ಜಿತ್ರಕಲಾ ಮಹಾವಿದ್ಯಾಲಯದ ಪ್ರಾ. ಡಾ.ಬಿ.ಎಲ್. ಚವಾಣ, ವಿಜಯ ಕಲಾ ಮಂದಿರದ ಪ್ರಾ. ಕೃಷ್ಣ ಕೆ.ಎಂ., ಬಿಇಒ ಆರ್.ಎಸ್. ಬುರಡಿ, ಮಹಾಂತೇಶ ಹೂಗಾರ, ನೀಲೂ ರಾಠೋಡ್, ಪ್ರವೀಣ ಕಿರೇಸೂರ, ರಿಯಾಜ್ ನಮಾಜಿ ಸೇರಿದಂತೆ ಇತರರು ಇದ್ದರು.