- ಕೃಷಿ ಅಧಿಕಾರಿಗಳಿಗೆ ಶಾಸಕ ಕೆ.ಎಸ್.ಬಸವಂತಪ್ಪ ಸೂಚನೆ । ಮುಂಗಾರು ಹಂಗಾಮು ಪೂರ್ವಭಾವಿ ಸಭೆ - - -
ಕನ್ನಡಪ್ರಭ ವಾರ್ತೆ ದಾವಣಗೆರೆ ಮುಂಗಾರು ಹಂಗಾಮಿನ ಪೂರ್ವದಲ್ಲಿಯೇ ರೈತರಿಗೆ ಅಗತ್ಯವಾಗಿ ಬೇಕಾಗಿರುವ ಬಿತ್ತನೆ ಬೀಜ, ರಸಗೊಬ್ಬರವನ್ನು ಸಮರ್ಪಕವಾಗಿ ಪೂರೈಸಲು ಕೃಷಿ ಇಲಾಖೆ ಅಧಿಕಾರಿಗಳು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಮಾಯಕೊಂಡ ಕ್ಷೇತ್ರ ಶಾಸಕ ಕೆ.ಎಸ್. ಬಸವಂತಪ್ಪ ಸೂಚಿಸಿದರು.ನಗರದ ಕೃಷಿ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ 2025-26ನೇ ಸಾಲಿನ ಮುಂಗಾರು ಹಂಗಾಮಿನ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಈಗಾಗಲೇ ಮುಂಗಾರು ಆರಂಭದ ಪೂರ್ವದಲ್ಲೇ ಉತ್ತಮ ಮಳೆ ಶುರುವಾಗಿದೆ. ರೈತರು ಸಹ ಬಿತ್ತನೆಗೆ ಭೂಮಿ ಹದ ಮಾಡಿಕೊಳ್ಳುತ್ತಿದ್ದಾರೆ ಎಂದರು.
ರೈತರಿಗೆ ಯಾವುದೇ ರೀತಿಯಲ್ಲೂ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೃಷಿ ಪರಿಕರಗಳ ಕೃತಕ ಅಭಾವ ಉಂಟಾಗಬಾರದು. ಈ ನಿಟ್ಟಿನಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಬೀಜ, ಗೊಬ್ಬರದ ಕೃತಕ ಅಭಾವ ಸೃಷ್ಠಿಸುವವರು ಯಾರೇ ಆಗಿದ್ದರೂ ಮುಲಾಜಿಲ್ಲದೇ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.ಕಳಪೆ ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆ ಆಗದಂತೆ ಜಾಗ್ರತೆ ವಹಿಸಬೇಕು. ಪ್ರತಿ ವರ್ಷ ರೈತರಿಂದ ಬಿತ್ತನೆ ಬೀಜ, ರಸಗೊಬ್ಬರ ಕಳಪೆಯಾಗಿವೆ ಎಂಬ ಆರೋಪಗಳು ಕೇಳಿಬರುತ್ತವೆ. ಇನ್ನು ಅಂಥ ಆರೋಪಗಳಿಗೆಲ್ಲಾ ಅವಕಾಶ ಕೊಡಬೇಡಿ. ಬಿತ್ತನೆಬೀಜ, ರಸಗೊಬ್ಬರ ರೈತರಿಗೆ ಪೂರೈಸುವ ಪೂರ್ವದಲ್ಲಿ ಪರೀಕ್ಷೆಗೆ ಒಳಪಡಿಸಿ, ಗುಣಮಟ್ಟ ಖಾತ್ರಿಪಡಿಸಿಕೊಂಡು ರೈತರಿಗೆ ಬೀಜ, ರಸಗೊಬ್ಬರ ಪೂರೈಸಬೇಕು ಎಂದು ಹೇಳಿದರು.
ಕಳಪೆ ಎಂಬ ಆರೋಪಗಳು ಬಾರದಿರಲಿ:ಒಂದುವೇಳೆ ಕಳಪೆ ಬೀಜ, ರಸಗೊಬ್ಬರ ಪೂರೈಕೆ ಮಾಡಿರುವ ಬಗ್ಗೆ ಆರೋಪಗಳು ಕೇಳಿಬಂದರೆ ಅಂಥವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. ಕಳಪೆ ಬಿತ್ತನೆಬೀಜ, ಗೊಬ್ಬರ ಪೂರೈಕೆ ಆಗುತ್ತಿದ್ದರೂ ಕಣ್ಣುಮುಚ್ಚಿ ಕುಳಿತುಕೊಳ್ಳುವ ಕೃಷಿ ಅಧಿಕಾರಿಗಳು, ಸಿಬ್ಬಂದಿ ವಿರುದ್ಧವೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಾದೀತು. ಯಾವುದೇ ಕಾರಣಕ್ಕೂ ನಮ್ಮ ರೈತರಿಗೆ ಕಳಪೆ ಬಿತ್ತನೆಬೀಜ, ರಸಗೊಬ್ಬರ ಮಾರಾಟ ಆಗದಂತೆ ನೋಡಿಕೊಳ್ಳಬೇಕು ಎಂದು ಖಡಕ್ ಎಚ್ಚರಿಕೆ ನೀಡಿದರು.
ಮುಂಗಾರು ಪೂರ್ವದಲ್ಲೇ, ರೈತ ಸಂಪರ್ಕ ಕೇಂದ್ರ, ಸೊಸೈಟಿಗಳ ಮೂಲಕ ರೈತರಿಗೆ ಬೇಕಾದ ಸಜ್ಜೆ, ಮೆಕ್ಕೆಜೋಳ, ಜೋಳ ಸೇರಿದಂತೆ ವಿವಿಧ ಬೆಳೆಯ ಬೀಜಗಳನ್ನು ದಾಸ್ತಾನು ಮಾಡಿ ಒದಗಿಸಬೇಕು. ಅಲ್ಲದೇ, ಗುಣಮಟ್ಟದ ಬಿತ್ತನೆ ಬೀಜ ನೀಡುವಲ್ಲಿ ಇಲಾಖೆ ಹೆಚ್ಚು ಗಮನ ಹರಿಸಬೇಕು. ರೈತ ಸಂಪರ್ಕ ಕೇಂದ್ರದ ಎದುರು ರೈತರು ದಿನವಿಡೀ ಬಿತ್ತನೆಬೀಜ ಸೇರಿದಂತೆ ಕೃಷಿ ಉಪಕರಣಗಳಿಗಾಗಿ ಕಾದು ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣ ಆಗಬಾರದು. ಅಧಿಕಾರಿಗಳು ಇಂತಹ ಪರಿಸ್ಥಿತಿ ದೂರ ಮಾಡಬೇಕು ಎಂದು ತಾಕೀತು ಮಾಡಿದರು.ಸರ್ಕಾರಿ ದರದಲ್ಲೇ ಮಾರಾಟ ಮಾಡಿ:
ಸರ್ಕಾರ ನಿಗದಿಪಡಿಸಿದ ದರದಲ್ಲೇ ಬೀಜ, ರಸಗೊಬ್ಬರ, ಕೀಟನಾಶಕ ಮಾರಾಟ ಮಾಡಿ, ಅದಕ್ಕೆ ಪೂರಕವಾಗಿ ರಸೀದಿ ನೀಡಬೇಕು. ಪರಿಕರಗಳನ್ನು ಹೆಚ್ಚಿನ ಬೆಲೆಗೆ ಮತ್ತು ಅವದಿ ಮೀರಿದ ಪರಿಕರಗಳನ್ನು ಮಾರಾಟ ಮಾಡುವುದು ಕಂಡುಬಂದಲ್ಲಿ ಮುಲಾಜಿಲ್ಲದೇ ಕ್ರಮ ಜರುಗಿಸಲಾಗುವುದು. ಕೆಲ ಸೊಸೈಟಿಗಳಲ್ಲಿ ರಸೀದಿ ಹರಿಯದೇ ಹೆಚ್ಚಿನ ಬೆಲೆಯಡಿ ರಸಗೊಬ್ಬರ ಮಾರಾಟ ಮಾಡಿದ ಬಳಿಕ ಕಡಿಮೆ ದರದಲ್ಲಿ ರಸೀದಿ ಹರಿಯುವುದು ಕಂಡುಬರುತ್ತಿದೆ. ಇದನ್ನು ತಪ್ಪಿಸಬೇಕು. ರೈತರಿಗೆ ಹೆಚ್ಚಿನ ಹೊರೆ ಮಾಡದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಕೆ.ಎಸ್.ಬಸವಂತಪ್ಪ ಸೂಚಿಸಿದರು.ಸಭೆಯಲ್ಲಿ ಶಾಸಕರು ಮುಂಗಾರು ಬೆಳೆಗಳ ಮಾಹಿತಿ ಪತ್ರ ಬಿಡುಗಡೆ ಬಿಡುಗಡೆಗೊಳಿಸಿದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ ಚಿಂತಾಲ್, ಸಹಾಯಕ ಕೃಷಿ ನಿರ್ದೇಶಕ ಶ್ರೀಧರಮೂರ್ತಿ, ಕೃಷಿ ಅಧಿಕಾರಿಗಳಾದ ಬೀರಪ್ಪ, ಚಂದ್ರಪ್ಪ, ಸಂಜೀವ, ಶ್ರೀನಿವಾಸ ಮತ್ತಿತರರು ಇದ್ದರು.
- - -(ಬಾಕ್ಸ್) ಹಾವೇರಿ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳಿಂದ ಬಂದು ಬ್ರ್ಯಾಂಡ್ ಇಲ್ಲದ ಬಿತ್ತನೆ ಬೀಜಗಳನ್ನು ನಮ್ಮ ರೈತರಿಗೆ ಮಾರಾಟ ಮಾಡುತ್ತಾರೆ. ಅಮಾಯಕ ರೈತರು ಕಡಿಮೆ ದರದಲ್ಲಿ ಅಂತಹ ಕಳಪೆ ಬೀಜಗಳೆಂಬ ಅರಿವಿಲ್ಲದೇ ಖರೀದಿಸಿ, ಬಿತ್ತನೆ ಮಾಡುತ್ತಾರೆ. ಕೊನೆಗೆ ಬೆಳೆ, ಇಳುವರಿ ಕೈ ಕೊಟ್ಟಾಗ ಪರಿತಪ್ಪಿಸುತ್ತಾರೆ. ಮೊದಲು ಹೊರಗಡೆಯಿಂದ ನಕಲಿ ಬಿತ್ತನೆ ಬೀಜಗಳನ್ನು ತಂದು ಮಾರಾಟ ಮಾಡುವುದನ್ನು ತಡೆಯಬೇಕು. ಅನಧಿಕೃತ ಮಾರಾಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
- ಕೆ.ಎಸ್.ಬಸವಂತಪ್ಪ, ಶಾಸಕ, ಮಾಯಕೊಂಡ ಕ್ಷೇತ್ರ.- - -
-20ಕೆಡಿವಿಜಿ1.ಜೆಪಿಜಿ:ದಾವಣಗೆರೆ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಮುಂಗಾರು ಹಂಗಾಮಿನ ಪೂರ್ವಭಾವಿ ಸಭೆಯಲ್ಲಿ ಶಾಸಕ ಕೆ.ಎಸ್. ಬಸವಂತಪ್ಪ ಮುಂಗಾರು ಬೆಳೆಗಳ ಮಾಹಿತಿ ಪತ್ರ ಬಿಡುಗಡೆ ಮಾಡಿದರು.