- ಹೊನ್ನಾಳಿಯಲ್ಲಿ ತಾಲೂಕು ಅಹಿಂದ ಅಧ್ಯಕ್ಷ ಡಾ.ಈಶ್ವರ ನಾಯ್ಕ ಹೇಳಿಕೆ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ರಾಜ್ಯದಲ್ಲಿ ಜಾತಿ ಜನಗಣತಿ ಕುರಿತು ಪ್ರಬಲ ಕೋಮಿನವರು ಜನರಲ್ಲಿ ಗೊಂದಲ ಸೃಷ್ಠಿಸುವ ಕೆಲಸ ಮಾಡಬಾರದು. ವರದಿ ಬಗ್ಗೆ ವಿಸ್ತೃತ ಚರ್ಚೆ, ಮಾರ್ಪಾಡಿಗೆ ಅವಕಾಶವಿದೆ ಎಂದು ತಾಲೂಕು ಅಹಿಂದ ಅಧ್ಯಕ್ಷ ಡಾ.ಈಶ್ವರ ನಾಯ್ಕ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಅಹಿಂದ ನಾಯಕರ ಸಭೆಯಲ್ಲಿ ಅವರು ಮಾತನಾಡಿ, ಜಾತಿ ಗಣತಿ ವರದಿ ಕುರಿತು ರಾಜ್ಯದಲ್ಲಿನ ರಾಜಕೀಯ, ಶೈಕ್ಷಣಿಕ, ಹಾಗೂ ಸಾಮಾಜಿಕವಾಗಿ ಪ್ರಬಲವಿರುವ ಕೆಲ ಕೋಮಿನವರಿಂದ ಅನಗತ್ಯ ಗೊಂದಲ ಸೃಷ್ಠಿ ಖಂಡನೀಯ ಎಂದರು.
ಭಾರತ ವಿಶ್ವದಲ್ಲೇ ಮಾದರಿ ಸಂವಿಧಾನ ಹೊಂದಿದೆ. ಸಂವಿಧಾನ ಆಶಯಕ್ಕೆ ವಿರುದ್ಧವಾಗಿ ಹಿಂದುಳಿದ ಹಾಗೂ ಶೋಷಿತ ವರ್ಗದವರನ್ನು ತುಳಿಯವ ಹಾಗೂ ಸೌಲಭ್ಯಗಳನ್ನು ಕಸಿದುಕೊಳ್ಳುವ ಪ್ರಯತ್ನಗಳು ಮುಂದುವರಿದ ಜನಾಂಗದವರು ನಡೆಸಬಾರದು ಎಂದು ಹೇಳಿದರು.
ಸಭೆಯಲ್ಲಿ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಎಚ್.ಎ. ಉಮಾಪತಿ ಮಾತನಾಡಿ, ಕಾಂತರಾಜ್ ವರದಿಯನ್ನು ಜವಾಬ್ದಾರಿಯುತ ಶಿಕ್ಷಕರು ಮನೆ ಮನೆಗೆ ಹೋಗಿ ಸರ್ವೆ ಮಾಡಿರುವುದಾಗಿದೆ. ಈ ಕಾರ್ಯಕ್ಕಾಗಿ ಸರ್ಕಾರ ₹160 ಕೋಟಿ ಖರ್ಚು ಮಾಡಿದೆ. ಇದೀಗ ಈ ವರದಿ ಬಗ್ಗೆ ಅನಗತ್ಯ ಚರ್ಚೆ, ಗೊಂದಲ ಮಾಡುವುದು ಸರಿಯಲ್ಲ ಎಂದು ಹೇಳಿದರು.ದಲಿತ ಸಮುದಾಯದ ಮುಖಂಡರಾದ ದಿಡಗೂರು ತಮ್ಮಣ್ಣ, ಮಾರಿಕೊಪ್ಪದ ಮಂಜಪ್ಪ, ಕುರುವ ಮಂಜಪ್ಪ, ತಾಲೂಕು ಕುರುಬ ಸಂಘದ ಅಧ್ಯಕ್ಷ ಎಂ.ಎಸ್. ಫಾಲಾಕ್ಷಪ್ಪ, ಬಾಬು ಹೋಬಳದಾರ್, ಸಣ್ಣಸಿದ್ದಪ್ಪ, ಅಲ್ಪಸಂಖ್ಯಾತ ಸಮುದಾಯದ ಸುಲೇಮಾನ್ ಖಾನ್, ಎಸ್.ಶ್ರೀನಿವಾಸ್, ಸಿಂಪಿ ಸಮಾಜದ ನಟರಾಜ್, ಹಿಂದುಳಿದ ಸಮುದಾಯದ ಹಾಗೂ ದಲಿತ ಸಮುದಾಯದ ಹಲವಾರು ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.
- - -(ಬಾಕ್ಸ್) * ಕಾಂತರಾಜ ವರದಿ ಜಾರಿಗೊಳಿಸಿ: ಸಿದ್ದಪ್ಪ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಅಹಿಂದ ನಾಯಕ ಬಿ.ಸಿದ್ದಪ್ಪ ಮಾತನಾಡಿ, ಎಲ್ಲ ಜನಸಮುದಾಯವನ್ನು ಜೊತೆಗೆ ಕರೆದುಕೊಂಡು ಹೋಗುವುದು ಸಂವಿಧಾನ ಉದ್ದೇಶವಾಗಿದೆ. ಸಮಬಾಳು, ಸಮಪಾಲು ಸಿದ್ಧಾಂತವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಆಡಳಿತದಲ್ಲಿ ಅಳವಡಿಸಿಕೊಂಡಿದ್ದಾರೆ. ಇದು ಅತ್ಯಂತ ಶ್ಲಾಘನೀಯ. ಸ್ವತಃ ಸಿಎಂ ಅವರೇ ಜಾತಿಗಣತಿಯಿಂದ ಯಾರಿಗೂ ಅನ್ಯಾಯ ಆಗಲು ಬಿಡಲ್ಲ ಎಂದು ಭರವಸೆ ನೀಡಿದ್ದಾರೆ. ಕಾಂತರಾಜ್ ವರದಿ ಕೂಡಲೇ ಜಾರಿಗೊಳಿಸಬೇಕು ಎಂದರು.
- - --17ಎಚ್.ಎಲ್.ಐ1:
ಹೊನ್ನಾಳಿ ಪ್ರವಾಸಿ ಮಂದಿರದಲ್ಲಿ ತಾಲೂಕು ಅಹಿಂದ ವತಿಯಿಂದ ಜಾತಿಗಣತಿ ವರದಿ ಕುರಿತು ತಾಲೂಕು ಅಧ್ಯಕ್ಷ ಡಾ.ಈಶ್ವರಪ್ಪ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.