ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಮಹಾವೀರ ವೃತ್ತದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್ ವತಿಯಿಂದ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ನೇತೃತ್ವದಲ್ಲಿ ಆಯೋಜಿಸಿದ್ದ ನಾಲ್ವಡಿ ಅವರ ಪುಣ್ಯಸ್ಮರಣೆಯಲ್ಲಿ ಗಣ್ಯರು ನಾಲ್ವಡಿ ಭಾವಚಿತ್ರಕ್ಕೆ ಪೂಜೆ ಮಾಡಿ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಮಂಡ್ಯ ಜಿಲ್ಲೆಯ ಶಾಲೆಗಳಲ್ಲಿ ಮಕ್ಕಳನ್ನು ಕೇಳಿದ್ದರೆ ವಿಶ್ವೇಶ್ವರಯ್ಯ ಹೆಸರು ಹೇಳುತ್ತಾರೆ. ಆದ್ದರಿಂದ ಶಾಲೆ ವಿದ್ಯಾರ್ಥಿಗಳಿಗೆ ಹಾಗೂ ಪ್ರತಿ ಮನೆ-ಮನಗಳಲ್ಲಿ ನಾಲ್ವಡಿ ಬಗ್ಗೆ, ಸೇವೆಗಳ ಕುರಿತು ತಿಳಿಸಬೇಕು ಎಂದರು.ನಾಲ್ವಡಿ ಜಿಲ್ಲೆಗೆ ಮಾಡಿರುವ ಸಾಧನೆಯನ್ನು ಯಾರು ಮಾಡಲು ಸಾಧ್ಯವಿಲ್ಲ. ನಾಲ್ವಡಿಯವರಿಗೆ ನಾಲ್ವಡಿಯವರೆ ಸಾಟಿ. ಅದನ್ನು ನಾವು ಘಂಟಾ ಘೋಷವಾಗಿ ಹೇಳಬಹುದು. ಆದ್ದರಿಂದ ಜಿಲ್ಲೆಯ ಜನರು ಪ್ರತಿದಿನ ನಾಲ್ವಡಿ ಅವರನ್ನು ಸ್ಮರಿಸಬೇಕಾದುದು ನಮ್ಮ ಕರ್ತವ್ಯ ಎಂದರು.
ಬಹುಮುಖ್ಯವಾಗಿ ಅವರ ಆಡಳಿತಾವಧಿಯಲ್ಲಿ ಕೆ.ಆರ್.ಎಸ್.ಅಣೆಕಟ್ಟೆ ಕಟ್ಟಬೇಕಾದರೆ ಹಣದ ಸಮಸ್ಯೆ ಎದುರಾದಾಗ ಅವರ ತಾಯಿ, ಮಡದಿಯವರ ಒಡವೆಗಳನ್ನು ಮಾರಿ ಅಣೆಕಟ್ಟು ಪೂರ್ಣ ಮಾಡಿದರು. ಮಂಡ್ಯ ಜಿಲ್ಲೆ ಬರುಡು ಭೂಮಿಯಾಗಿತ್ತು. ಅಚ್ಚ ಹಸಿರಿನ ಭೂಮಿಯಾಗಿ ನಾವೆಲ್ಲ ನೆಮ್ಮದಿಯಾಗಿ ಜೀವನ ಮಾಡುವುದಕ್ಕೆ ನೆಲೆ ಕಲ್ಪಿಸಿದ ಅವರನ್ನು ಜನ್ಮ ಪೂರ್ತಿ ನೆನಯಬೇಕಾಗಿದೆ ಎಂದರು.
ರಾಜ್ಯದ ಅನೇಕ ಕಡೆ ಕೆರೆಗಳು, ನಾಲೆಗಳು, ಜಲಾಶಯಗಳನ್ನು ನಿರ್ಮಾಣ ಮಾಡಿ ಕುಡಿಯುವ ನೀರಿನ ಸೌಲಭ್ಯ, ಬೆಳೆ ಬೆಳೆಯುವುದಕ್ಕೆ ಅನುಕೂಲ ಮಾಡಿಕೊಟ್ಟು ಇಡೀ ನಾಡಿನ ಜನರ ನೆಮ್ಮದಿ ನಾಲ್ವಡಿಯವರ ಕೊಡುಗೆ ಸದಾ ಸ್ಮರಿಸಬೇಕಾಗಿದೆ ಎಂದರು.ಪ್ರತಿ ಹಳ್ಳಿಗಳಲ್ಲಿ ಶಾಲೆ, ಪದವಿಪೂರ್ವ ಕಾಲೇಜು, ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಕಾಲೇಜು, ದೀನ ದಲಿತರಿದೆ ಶಿಕ್ಷಣ ದೊರಕಿಸಿ ಕೊಟ್ಟು ಹಾಗೂ ರಾಜ್ಯದಲ್ಲಿ ರೋಗ ರುಜಿನಗಳು ಕಂಡು ಬಾರದಂತೆ ಆಸ್ಪತ್ರೆಗಳನ್ನು ನಿರ್ಮಾಣ ಮಾಡಿ ಜನರ ಆರೋಗ್ಯ ರಕ್ಷಣೆ ಮಾಡಿದ್ದಾರೆ ಎಂದರು.
ಶಿಕ್ಷಣ, ಆರೋಗ್ಯ ನೀರಾವರಿ, ಕೃಷಿ, ಕೈಗಾರಿಕೆ, ಕಲೆ, ಸಾಹಿತ್ಯ, ಸಂಸ್ಕೃತಿ, ಮೀಸಲಾತಿ ಗೀದೆ ಹೇಳುತ್ತಾ ಹೋದರೆ ಸಾಕಷ್ಟು ಸಾಧನೆಗಳಿವೆ. ಆಡು ಮುಟ್ಟದ ಸೊಪ್ಪಿಲ್ಲ ಅವರು ಕೈ ಹಾಕದ ಕ್ಷೇತ್ರವಿಲ್ಲ. ಅಂತಹ ಪುಣ್ಯಾತ್ಮರ ಸ್ಮರಣೆ ಮಾಡುವುದು ನಮ್ಮಗಳ ಆದ್ಯ ಕರ್ತವ್ಯವೆಂದು ಹೇಳಿದರು.ಕಾರ್ಯಕ್ರಮದಲ್ಲಿ ಬೇಲೂರು ಸೋಮಶೇಖರ್, ಬೋರ್ ವೇಲ್ ನಾರಾಯಣ್, ಅಪ್ಪಾಜಪ್ಪ, ಸಾತನೂರು ಜಯರಾಂ, ಚಂದಗಾಲು ಲೋಕೇಶ್, ಶಕುಂತಲಾ, ತಗ್ಗಹಳ್ಳಿ ಮಂಜು ಸೇರಿದಂತೆ ಟ್ರಸ್ಟ್ ಪದಾಧಿಕಾರಿಗಳು, ಸದಸ್ಯರು ಮತ್ತಿತರು ಹಾಜರಿದ್ದರು.