ಹುಬ್ಬಳ್ಳಿ: ಕರಸೇವೆ ಮುಗಿಸಿಕೊಂಡು ಜೀವಂತವಾಗಿ ಮರಳಿ ಬರುತ್ತೇವೆ ಎಂಬ ಗ್ಯಾರಂಟಿಯೇ ನನಗಿರಲಿಲ್ಲ. ಕರಸೇವೆಗೆ ಹೋಗುವಾಗಲೇ ಮರಳಿ ಬಂದರೆ ಖುಷಿ ಪಡಿ; ಅಲ್ಲೇ ಸತ್ತರೆ ದುಃಖಿಸಬೇಡಿ ಎಂದು ಮನೆಯಲ್ಲಿ ಹೇಳಿಯೇ ಹೋಗಿದ್ದೆ. ಶ್ರೀರಾಮನ ಕೃಪೆಯಿಂದ ಸುರಕ್ಷಿತವಾಗಿ ಮರಳಿ ಬಂದೆ..!
ಕರಸೇವೆಗೆ ಕರೆ ಬಂದ ವೇಳೆ ಹುಬ್ಬಳ್ಳಿಯಿಂದ ಯಾರ ನೇತೃತ್ವದಲ್ಲಿ ಸೇವಕರನ್ನು ಕರೆದುಕೊಂಡು ಹೋಗಬೇಕೆಂಬ ಯೋಚನೆ ಹಿರಿಯರಲ್ಲಿ ಉಂಟಾಗುತ್ತದೆ. ಆಗ ಅಶೋಕ ಕಾಟವೆ ಹೆಗಲಿಗೆ ನೇತೃತ್ವದ ಜವಾಬ್ದಾರಿ ವಹಿಸುತ್ತಾರೆ. ಹೀಗಾಗಿ, 50ಕ್ಕೂ ಹೆಚ್ಚು ಜನರು ಅಶೋಕ ಕಾಟವೆ ಹಾಗೂ ರಂಗಾಬದ್ದಿ ನೇತೃತ್ವದಲ್ಲಿ ಕರಸೇವೆಗೆಂದು ಹೋಗುತ್ತಾರೆ.
ಬರೀ ತಾವಷ್ಟೇ ಕರಸೇವೆಗೆ ಹೋಗುವುದಲ್ಲ. ತಾವು ಕರೆದುಕೊಂಡು ಹೋದ ಎಲ್ಲರನ್ನು ಸಂಭಾಳಿಸಿಕೊಂಡು ಮರಳಿ ಕರೆತರುವವರೆಗೂ ಇವರದೇ ಜವಾಬ್ದಾರಿ ಇತ್ತು.ರೈಲಿನಲ್ಲಿ ಕುಳಿತುಕೊಳ್ಳಲು ಸರಿಯಾದ ಜಾಗೆ ಇರಲಿಲ್ಲ. ಹಾಗೋ ಹೀಗೋ ಮಾಡಿಕೊಂಡು ಅಯೋಧ್ಯೆಗೆ ತೆರಳಿದ್ದೆವು. ಅಲ್ಲಿ ನಮಗಾಗಿ ಪ್ರತ್ಯೇಕ ಟೆಂಟ್ ಇತ್ತು. ಅಲ್ಲೇ ಎಲ್ಲರನ್ನು ಕರೆದುಕೊಂಡು ಎಲ್ಲರಿಗೂ ಹಿರಿಯರು ತಿಳಿಸಿದಂತೆ ತರಬೇತಿ ನೀಡುತ್ತಿದ್ದೆವು. ಎಂಟು ದಿನ ಮುಂಚಿತವಾಗಿಯೇ ಹೋಗಿದ್ದೆವು. ಊಟ, ಉಪಚಾರದ ಸಮಸ್ಯೆಯಾಗಲಿಲ್ಲ. ಮುಂದೆ ಡಿ. 6ರಂದು ಬಾಬರಿ ಮಸೀದಿ ಕೆಡವಲಾಯಿತು. ಗುಮ್ಮಟದ ಮೇಲೆ ಮೊದಲಿಗೆ ಹಾರಾಡಿದ್ದು ನಮ್ಮ ಹುಬ್ಬಳ್ಳಿಯ ಭಗವಾದ್ವಜ. ನಮ್ಮೊಂದಿಗೆ ಬಂದಿದ್ದ ಗುರುಸಿದ್ದಪ್ಪ ಶೆಲ್ಲಿಕೇರಿ ಆ ದ್ವಜವನ್ನು ಹಾರಿಸಿದ್ದ. ಮುಂದೆ ಮರುದಿನ ರಾಮಲಲ್ಲಾನ ಪೂಜೆ ಮುಗಿಯಿತು. ವಿಪರೀತ ನೂಕು ನುಗ್ಗಾಟ, ತಳ್ಳಾಟ ಇತ್ತು. ಹಾಗೋ ಹೀಗೋ ಮಾಡಿಕೊಂಡು ಕರಸೇವೆ ಯಶಸ್ವಿಯಾಗಿತ್ತು.
ಮರುದಿನ ಅಲ್ಲಿಂದ ಎಲ್ಲರೂ ಹೊರಟೆವು. ರೈಲಿನಲ್ಲಿ ಕುಳಿತುಕೊಳ್ಳುವುದು ಒತ್ತಟ್ಟಿಗಿರಲಿ. ನಿಂತುಕೊಳ್ಳಲು ಜಾಗೆ ಇರಲಿಲ್ಲ. ಎಷ್ಟೋ ಜನ ರೈಲಿನ ಮೇಲೆಯೇ ಕುಳಿತು ಪ್ರಯಾಣಿಸಿದ್ದುಂಟು.
ನಿಜ ಹೇಳಬೇಕೆಂದರೆ ಜೀವಂತ ನಮ್ಮ ಮನೆ ಮುಟ್ಟುತ್ತೇವೆ ಎಂದುಕೊಂಡಿರಲಿಲ್ಲ. ಹೀಗಾಗಿ, ಮನೆಯಲ್ಲಿ ನಾನು ಜೀವಂತ ಬಂದರೆ ಖುಷಿ ಪಡಿ; ಆದರೆ ಒಂದು ವೇಳೆ ಬರದಿದ್ದರೆ ದುಃಖಿಸಬೇಡಿ. ರಾಮನ ಸೇವೆಯಲ್ಲಿ ಹುತಾತ್ಮನಾದೆ ಎಂದು ತಿಳಿದುಕೊಳ್ಳಿ ಎಂದು ಹೇಳಿದ್ದೆ. ಮೊದಲಿಗೆ ತಂದೆ ತಾಯಿ ಇಬ್ಬರು ಕಣ್ಣೀರು ಸುರಿಸಿದ್ದರು.