ಧರಣಿ ವೇಳೆ ವಾಲ್ಮೀಕಿ, ಅಂಬೇಡ್ಕರ್ ಭಾವಚಿತ್ರ ನಾಪತ್ತೆ!

KannadaprabhaNewsNetwork | Published : Jan 22, 2024 2:19 AM

ಸಾರಾಂಶ

ಸಂಗೊಳ್ಳಿ ರಾಯಣ್ಣ ಪ್ರತಿಮೆ ತೆರವಿಗೆ ಕಳೆದ 12 ದಿನದಿಂದಲೂ ನಾಯಕ ಸಮಾಜದವರು ಹಗಲು ರಾತ್ರಿ ಧರಣಿ ನಡೆಸಿದರು. ಅಧಿಕಾರಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗದೇ, ಮತ್ತೊಂದು ಸಮುದಾಯದವರ ಪರ ನಿಂತಿದ್ದಾರೆಂಬ ಅಸಮಾಧಾನ ಸಹಜವಾಗಿಯೇ ಇತ್ತು. ಗ್ರಾಪಂನಲ್ಲೂ ಅಧಿಕಾರಿ, ಸಿಬ್ಬಂದಿ ಮತ್ತೊಂದು ಸಮುದಾಯದವರಾಗಿದ್ದು, ಪುತ್ಥಳಿ ವಿಚಾರದಲ್ಲಿ ಗ್ರಾಮದ ಸಾಮರಸ್ಯ ಕದಡುತ್ತಿರುವ ಪಿಡಿಒ ಸೇರಿ ಅಧಿಕಾರಿ, ಸಿಬ್ಬಂದಿಗಳ ಬೇರೆಡೆಗೆ ವರ್ಗಾಯಿಸಬೇಕು.

ಭಾನುವಳ್ಳಿಯಲ್ಲಿ ಪುತ್ಥಳಿ ವಿಚಾರದಲ್ಲಿ ಬಿಗುವಿನ ಸ್ಥಿತಿ , ಪಿಡಿಒ ವರ್ಗಾವಣೆಗೆ ನಾಯಕ ಸಮಾಜ ಆಗ್ರಹ

ಕನ್ನಡಪ್ರಭ ವಾರ್ತೆ ಮಲೇಬೆನ್ನೂರು

ಪುತ್ಥಳಿ ವಿಚಾರಕ್ಕೆ ಎರಡು ಸಮುದಾಯಗಳ ಮಧ್ಯೆ ಕಳೆದ 12 ದಿನಗಳಿಂದ ಹರಿಹರ ತಾಲೂಕು ಭಾನುವಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಜಿದ್ದಾಜಿದ್ದಿ ಮಧ್ಯೆ ಭಾನುವಾರ ಬೆಳಗ್ಗೆ ಧರಣಿ ಸ್ಥಳದಲ್ಲಿ ಇಡಲಾಗಿದ್ದ ಮಹರ್ಷಿ ವಾಲ್ಮೀಕಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ನಾಪತ್ತೆಯಾಗಿರುವುದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.

ಹರಿಹರ ತಾಲೂಕು ಭಾನುವಳ್ಳಿ ಗ್ರಾಮದಲ್ಲಿ ವೀರ ಮದಕರಿ ನಾಯಕ ಮಹಾದ್ವಾರದ ಬಳಿಯೇ ಸಂಗೊಳ್ಳಿ ರಾಯಣ್ಣ ಪುತ್ಥಳಿ ರಾತ್ರೋರಾತ್ರಿ ಪ್ರತಿಷ್ಠಾಪಿಸಿದ ವಿಚಾರಕ್ಕೆ ಪರಿಶಿಷ್ಟ ಪಂಗಡದ ನಾಯಕ ಹಾಗೂ ಕುರುಬ ಸಮಾಜ ಬಾಂಧವರ ಮಧ್ಯೆ ವಾಗ್ವಾದ ನಡೆದು, ತಾಲೂಕು, ಜಿಲ್ಲಾಮಟ್ಟದ ಅಧಿಕಾರಿಗಳು, ಹಿರಿಯ ಪೊಲೀಸ ಅಧಿಕಾರಿಗಳು ಭೇಟಿ ನೀಡಿದ್ದರೂ ಪರಿಸ್ಥಿತಿ ತಿಳಿಗೊಂಡಿರಲಿಲ್ಲ.

ಸಂಗೊಳ್ಳಿ ರಾಯಣ್ಣ ಪ್ರತಿಮೆ ತೆರವಿಗೆ ಕಳೆದ 12 ದಿನದಿಂದಲೂ ನಾಯಕ ಸಮಾಜದವರು ಹಗಲು ರಾತ್ರಿ ಧರಣಿ ನಡೆಸಿದರು. ಅಧಿಕಾರಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗದೇ, ಮತ್ತೊಂದು ಸಮುದಾಯದವರ ಪರ ನಿಂತಿದ್ದಾರೆಂಬ ಅಸಮಾಧಾನ ಸಹಜವಾಗಿಯೇ ಇತ್ತು. ಗ್ರಾಪಂನಲ್ಲೂ ಅಧಿಕಾರಿ, ಸಿಬ್ಬಂದಿ ಮತ್ತೊಂದು ಸಮುದಾಯದವರಾಗಿದ್ದು, ಪುತ್ಥಳಿ ವಿಚಾರದಲ್ಲಿ ಗ್ರಾಮದ ಸಾಮರಸ್ಯ ಕದಡುತ್ತಿರುವ ಪಿಡಿಒ ಸೇರಿ ಅಧಿಕಾರಿ, ಸಿಬ್ಬಂದಿಗಳ ಬೇರೆಡೆಗೆ ವರ್ಗಾಯಿಸಬೇಕು ಎಂಬುದಾಗಿ ನಾಯಕ ಸಮಾಜದ ಮುಖಂಡರು ಧರಣಿ ಸ್ಥಳದಲ್ಲಿ ಘೋಷಣೆ ಕೂಗಿದರು.

ಜಿಲ್ಲಾಡಳಿತ, ತಾಲೂಕು ಆಡಳಿತ, ಗ್ರಾಪಂ ಆಡಳಿತ ಹಾಗೂ ಪೊಲೀಸ್ ಇಲಾಖೆಯು ಮತ್ತೊಂದು ಸಮುದಾಯದ ಹಿತ ಕಾಯಲು ಟೊಂಕ ಕಟ್ಟಿ ನಿಂತಿವೆಯೆಂದರೆ, ರಾಯಣ್ಣ ಪುತ್ಥಳಿ ಇರುವ ಭಾಗಕ್ಕೆ ಸಿಸಿ ಕ್ಯಾಮೆರಾ ಅಳವಡಿಸಿದ್ದು, ನಾಯಕ ಸಮಾಜದವರು ಧರಣಿ ಸ್ಥಳ, ಅಂಬೇಡ್ಕರ್‌, ವಾಲ್ಮೀಕಿ ಭಾವಚಿತ್ರವಿರುವಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿಲ್ಲ. ಈಗ ಅಂಬೇಡ್ಕರ್, ವಾಲ್ಮೀಕಿ ಭಾವಚಿತ್ರ ಕಣ್ಮರೆಯಾಗಿದ್ದು, ಇದಕ್ಕೆ ಯಾರು ಹೊಣೆ? ನಮ್ಮ ಮೇಲೆಯೇ ಗೂಬೆ ಕೂರಿಸುವ ಷಡ್ಯಂತ್ರ ನಡೆದಿದೆ ಎಂದು ನಾಯಕ ಸಮಾಜದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಹಕ್ಕು, ನ್ಯಾಯ ಕೇಳಲು ಹೋದವರ ಮೇಲೆಯೇ ಐಸಿಪಿ ಸೆಕ್ಷನ್ 107ನಡಿ ಪ್ರಕರಣ ದಾಖಲಿಸುವ ಬೆದರಿಕೆಯನ್ನು ಪೊಲೀಸ್ ಇಲಾಖೆ ಹಾಕುತ್ತದೆ. ನಾಯಕ ಸಮಾಜದ ಮಹಿಳೆಯರ ಬಗ್ಗೆ ಕೆಲವು ಗೂಂಡಾಗಳು ಅಸಭ್ಯವಾಗಿ, ಕೇವಲವಾಗಿ ಮಾತನಾಡಿ, ಗೇಲಿ ಮಾಡುತ್ತಿದ್ದಾರೆ. ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್, ಜಿಲ್ಲಾಡಳಿತಕ್ಕಾಗಲೀ ಧೈರ್ಯವಿಲ್ಲವೇ? ಒಂದು ಜಾತಿ ವಿರುದ್ಧ ಮತ್ತೊಂದು ಜಾತಿ ಎತ್ತಿ ಕಟ್ಟುವ ಕೆಲಸ ಮಾಡುವುದು ಶೋಭೆಯಲ್ಲ ಎಂದು ಎಚ್ಚರಿಸಿದರು.

ಸಮಾಜದ ಮುಖಂಡರಾದ ನಾರಾಯಣಪ್ಪ, ಗ್ರಾಪಂ ಸದಸ್ಯ ಧನ್ಯಕುಮಾರ, ಟಿ ಆರ್ ಮಹೇಶ್ವರಪ್ಪ, ಪ್ರಕಾಶ, ರಮೇಶ, ಚಂದ್ರಪ್ಪ, ಪಾರ್ವತಿ, ಕೆಂಚಪ್ಪ, ಮಲ್ಲಪ್ಪ, ಗದಿಗೆಪ್ಪ, ರಂಗಪ್ಪ, ಟಿ.ಪುಟ್ಟಪ್ಪ, ಹನುಮಂತಪ್ಪ ಮತ್ತಿತರರಿದ್ದರು. ಸ್ಥಳಕ್ಕೆ ಪಿಎಸ್‌ಐ ಪ್ರಭು ಭೇಟಿ ನೀಡಿದ್ದರು. ಸ್ಥಳದಲ್ಲಿ ಜಿಲ್ಲಾ ಮೀಸಲು ಪೊಲೀಸ್ ತುಕಡಿ ಮೊಕ್ಕಾಂ ಹೂಡಿದೆ.

ಭಾವಚಿತ್ರ ಕಣ್ಮರೆ ಬಗ್ಗೆ ದೂರು ನೀಡುವೆವು

ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿ, ಮಾಹಿತಿ, ದಾಖಲೆ ಕೋರಿದರೆ ತಮ್ಮಲ್ಲಿ ಯಾವುದೇ ದಾಖಲೆ ಇಲ್ಲವೆಂಬುದಾಗಿ ಗ್ರಾಪಂ ಪಿಡಿಓ ಪಂಚಾಯಿತಿಯಲ್ಲಿ ಯಾವುದೇ ದಾಖಲೆ ಇಲ್ಲವೆಂದು ಹೇಳಿದ್ದು, ಒಂದು ಸಮುದಾಯದ ಪರ ಕೆಲಸ ಮಾಡುತ್ತಿರುವ ಇಂತಹ ಪಿಡಿಒರಿಂದ ಯಾವ ನ್ಯಾಯವನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಮಹರ್ಷಿ ವಾಲ್ಮೀಕಿ, ಅಂಬೇಡ್ಕರ್ ಭಾವಚಿತ್ರ ಕಣ್ಮರೆಯಾದ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡುತ್ತೇವೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಿದ್ದರೆ ಮುಂದಿನ ಹೋರಾಟ ರೂಪಿಸುತ್ತೇವೆ ಎಂದು ಧರಣಿ ನಿರತ ಎಸ್ಟಿ ಸಮುದಾಯದ ಮುಖಂಡರು ಎಚ್ಚರಿಸಿದರು.

Share this article