ಗುಂಡ್ಲುಪೇಟೆಪಟ್ಟಣದ ಜನನಿಬಿಡ ರಸ್ತೆ (ಪಟ್ಟಣದ ಮಡಹಳ್ಳಿ ವೃತ್ತದಿಂದ ಜೆಎಸ್ಎಸ್ ಅನುಭವ ಮಂಟಪ) ತನಕ ಗುಂಡಿಗಳ ಕಾರು ಬಾರು ಮತ್ತು ದೂಳಿನ ಉಚಿತ ಸಿಂಚನ ಜನರಿಗೆ ಆಗುತ್ತಿದೆ. ಪಟ್ಟಣದ ಮಡಹಳ್ಳಿ ವೃತ್ತದಿಂದ ಜೆಎಸ್ಎಸ್ ಅನುಭವ ಮಂಟಪದ ತನಕ ಬಾಲಕಿಯರ ಪ್ರೌಢಶಾಲೆ, ಅರಣ್ಯ ಕಚೇರಿ, ಪೊಲೀಸ್ ಠಾಣೆ, ನ್ಯಾಯಾಲಯ, ಜೆಎಸ್ಎಸ್ ಕಲಾ ಮತ್ತು ವಾಣಿಜ್ಯ ಕಾಲೇಜು, ಜೆಎಸ್ಎಸ್ ಅನುಭವ ಮಂಟಪ, ಸಿಎಂಎಸ್ ಕಲಾಮಂದಿರ ಹಾಗೂ ಪಟ್ಟಣದ ಹೊಸ ಬಡಾವಣೆಗೆ ತೆರಳುವ ಪ್ರಮುಖ ರಸ್ತೆಯ ಸ್ಥಿತಿ ಕಂಡು ಸವಾರರು ಹಾಗೂ ಜನರು ತಾಲೂಕು ಆಡಳಿತಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ವಾಹನಗಳು ಸಂಚರಿಸುವಾಗ ರಸ್ತೆಯೆಲ್ಲಾ ಧೂಳು । ದುರಸ್ಥಿ ಸರಿಪಡಿಸಲು ಲೋಕೋಪಯೋಗಿ ಇಲಾಖೆ ನಿರ್ಲಕ್ಷ್ಯ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಪಟ್ಟಣದ ಜನನಿಬಿಡ ರಸ್ತೆ(ಪಟ್ಟಣದ ಮಡಹಳ್ಳಿ ವೃತ್ತದಿಂದ ಜೆಎಸ್ಎಸ್ ಅನುಭವ ಮಂಟಪ) ತನಕ ಗುಂಡಿಗಳ ಕಾರು ಬಾರು ಮತ್ತು ದೂಳಿನ ಉಚಿತ ಸಿಂಚನ ಜನರಿಗೆ ಆಗುತ್ತಿದೆ. ಪಟ್ಟಣದ ಮಡಹಳ್ಳಿ ವೃತ್ತದಿಂದ ಜೆಎಸ್ಎಸ್ ಅನುಭವ ಮಂಟಪದ ತನಕ ಬಾಲಕಿಯರ ಪ್ರೌಢಶಾಲೆ, ಅರಣ್ಯ ಕಚೇರಿ, ಪೊಲೀಸ್ ಠಾಣೆ, ನ್ಯಾಯಾಲಯ, ಜೆಎಸ್ಎಸ್ ಕಲಾ ಮತ್ತು ವಾಣಿಜ್ಯ ಕಾಲೇಜು, ಜೆಎಸ್ಎಸ್ ಅನುಭವ ಮಂಟಪ, ಸಿಎಂಎಸ್ ಕಲಾಮಂದಿರ ಹಾಗೂ ಪಟ್ಟಣದ ಹೊಸ ಬಡಾವಣೆಗೆ ತೆರಳುವ ಪ್ರಮುಖ ರಸ್ತೆಯ ಸ್ಥಿತಿ ಕಂಡು ಸವಾರರು ಹಾಗೂ ಜನರು ತಾಲೂಕು ಆಡಳಿತಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.ಅಲ್ಲದೆ ಗುಂಡ್ಲುಪೇಟೆ-ಬರಗಿ ರಸ್ತೆಯಾಗಿದೆ. ಈ ರಸ್ತೆಯಲ್ಲಿ ಮಡಹಳ್ಳಿ, ಮೂಖಹಳ್ಳಿ, ತೆಂಕಲಹುಂಡಿ, ಹೊನ್ನಶೆಟ್ಟರಹುಂಡಿ, ಹೊಂಗಹಳ್ಳಿ, ಮೂಖಹಳ್ಳಿ ಕಾಲೋನಿ, ಬರಗಿ, ದೇಶಿಪುರದ ಜನರು ಪ್ರಯಾಣಿಸುವ ಪ್ರಮುಖ ರಸ್ತೆ ಕೂಡ ಎಂಬುದು ವಿಶೇಷ. ಮಡಹಳ್ಳಿ ವೃತ್ತದಿಂದ ೮೦೦ ಮೀಟರ್ ನಷ್ಟು ದೂರ ತಾರ್ ರಸ್ತೆಯಾಗಿದ್ದರೂ ಮಣ್ಣಿನ ರಸ್ತೆಯಂತೆ ಕಾಣುತ್ತಿದೆ. ಮಳೆಗೆ ಗುಂಡಿ ಬಿದ್ದಿವೆ ಅಲ್ಲದೆ ಮಳೆಗೆ ಕಾಗೆಹಳ್ಳದ ಒತ್ತುವರಿಯಾಗಿರುವ ಕಾರಣ ಕಾಗೇಹಳ್ಳದಿಂದ ಬರುವ ನೀರಿನೊಂದಿಗೆ ಮಣ್ಣು ಮಡಹಳ್ಳಿ ರಸ್ತೆಯ ಬದಿಯಲ್ಲಿ ತುಂಬಿದೆ. ಬಸ್, ಟಿಪ್ಪರ್, ಲಾರಿ, ಟೆಂಪೋದಂತೆ ದೊಡ್ಡ ವಾಹನಗಳು ಸಂಚರಿಸುವ ಸಮಯದಲ್ಲಿ ರಸ್ತೆಯಲ್ಲಿನ ದೂಳು ಪಾದಚಾರಿಗಳಿಗೆ ತುಂಬುತ್ತದೆ ಅಲ್ಲದೆ ರಸ್ತೆಯ ಬದಿಯ ವ್ಯಾಪಾರ ಮಾಡುವ ಕ್ಯಾಂಟೀನ್ಗೂ ತುಂಬುತ್ತಿದೆ ಆದರೂ ಲೋಕೋಪಯೋಗಿ ಇಲಾಖೆ ಪಟ್ಟಣದಲ್ಲಿ ಇದ್ದು ಇಲ್ಲದಂತಿದೆ ಎಂದು ಪಟ್ಟಣದ ನಿವಾಸಿ ರಾಜು ವ್ಯಂಗವಾಡಿದ್ದಾರೆ.
ಮಳೆಗಾಲದಲ್ಲಿ ಚಿಕ್ಕ ಕೆರೆಯಾಗುವ ಮಡಹಳ್ಳಿ ವೃತ್ತ:
ಮಳೆಗಾಲದಲ್ಲಂತೂ ಮಡಹಳ್ಳಿ ವೃತ್ತ ಚಿಕ್ಕ ಕೆರೆಯಂತಾಗಿ ನೀರು ನಿಲ್ಲುತ್ತದೆ. ಮಳೆಯ ನೀರಿನೊಂದಿಗೆ ಬರುವ ಮಣ್ಣು ವೃತ್ತ ಹಾಗು ರಸ್ತೆಯ ಎಡ,ಬಲ ಬಿದ್ದು ಕೆಸರು ಗದ್ದೆಯಂತಾಗಿ ಪಾದಚಾರಿಗಳು ಹಾಗು ಬೈಕ್, ಸೈಕಲ್ ಸವಾರರ ಪಾಡು ಹೇಳತೀರದಾಗಿದೆ ಎಂದು ಸವಾರರು ಅವಲತ್ತುಕೊಂಡಿದ್ದಾರೆ. ೮೦೦ ಮೀಟರ್ ರಸ್ತೆ ಅಭಿವೃದ್ಧಿ ಪಡಿಸಲಾಗದಷ್ಟು ಲೋಕೋಪಯೋಗಿ ಇಲಾಖೆ ಬರಗೆಟ್ಟಿದೆಯಾ? ೮೦೦ ಮೀಟರ್ ರಸ್ತೆ ಅಭಿವೃದ್ಧಿ ಪಡಿಸಲು ಆಗಲಿಲ್ಲ ಎಂದ ಮೇಲೆ ಲೋಕೋಪಯೋಗಿ ಇಲಾಖೆ ಮುಚ್ಚಲಿ ಇಲ್ಲಾ ರಸ್ತೆ ಅಭಿವೃದ್ಧಿ ಪಡಿಸಲಿ ಎಂದು ರಾಜು ಹೇಳಿದ್ದಾರೆ. ಪ್ರಸ್ತಾವನೆ ಸಲ್ಲಿಕೆ:
ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯ ಪಾಲಕ ರವಿಕುಮಾರ್ ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿ ಮಡಹಳ್ಳಿ ವೃತ್ತದಿಂದ ಜೆಎಸ್ಎಸ್ ಅನುಭವ ಮಂಟಪದ ತನಕ ಜೊತೆಗೆ ಗುಂಡ್ಲುಪೇಟೆ-ಬರಗಿ ರಸ್ತೆಯಲ್ಲಿ ಹಾಳಾದ ರಸ್ತೆ ಅಭಿವೃದ್ಧಿಗೆ ಮೂರು ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಮಡಹಳ್ಳಿ ವೃತ್ತದಿಂದ ಜೆಎಸ್ಎಸ್ ಅನುಭವ ಮಂಟಪದ ತನಕ ವಾಹನಗಳು ಸಂಚರಿಸುವಾಗ ಧೂಳಿನಿಂದ ಜನರ ಆರೋಗ್ಯ ಕೆಡುತ್ತದೆ. ರಸ್ತೆ ಬದಿಯ ತಿಂಡಿ ತಿನಿಸುಗಳಿಗೂ ಧೂಳು ಬರುತ್ತದೆ. ಈ ರಸ್ತೆಯಲ್ಲಿ ಸಂಚರಿಸುವ ಜನರು ನರಕ ಯಾತನೆ ಅನುಭವಿಸುತ್ತಿದ್ದಾರೆ. ಶಾಸಕರು ರಸ್ತೆ ಅಭಿವೃದ್ಧಿ ಪಡಿಸಲಿ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.