ಗ್ಯಾರಂಟಿಯಿಂದ ಜನರಿಗೆ ಮಂಕುಬೂದಿ ಎರಚುತ್ತಿದ್ದಾರೆ: ಶಾಸಕ ಮಂಜುನಾಥ್‌

KannadaprabhaNewsNetwork | Updated : Apr 19 2024, 11:31 AM IST

ಸಾರಾಂಶ

  ಕಾಂಗ್ರೆಸ್ ಸರ್ಕಾರದಲ್ಲಿರುವ ಎಲ್ಲರೂ ಹಣ ಹೊಡೆದು ಜೇಬು ತುಂಬಿಸಿಕೊಳ್ಳುವುದು ಬಿಟ್ಟರೆ ಜನಸಾಮಾನ್ಯರ ಪರಿಸ್ಥಿತಿ ಬಗ್ಗೆ ಯೋಚಿಸುವವರು ಯಾರೂ ಇಲ್ಲದಂತಾಗಿದ್ದಾರೆ ಎಂದು ಶಾಸಕ ಸಮೃದ್ಧಿ ಮಂಜುನಾಥ್ ಆತಂಕ ವ್ಯಕ್ತಪಡಿಸಿದರು.

ಮುಳಬಾಗಿಲು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಕಾಸು ಇಲ್ಲದೆ ಯಾವುದೇ ಬಡವರ ಕೆಲಸಗಳು ಆಗುತ್ತಿಲ್ಲ, ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ, ಈ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಹೀಗೆ ಮುಂದುವರೆದರೆ ಜನಸಾಮಾನ್ಯರ ಪರಿಸ್ಥಿತಿ ಹೇಗೆ ಎಂದು ಊಹಿಸಿದರೆ ಭಯ ಆಗುತ್ತಿದೆ, ಅಧಿಕಾರದಲ್ಲಿರುವ ಎಲ್ಲರೂ ಹಣ ಹೊಡೆದು ಜೇಬು ತುಂಬಿಸಿಕೊಳ್ಳುವುದು ಬಿಟ್ಟರೆ ಜನಸಾಮಾನ್ಯರ ಪರಿಸ್ಥಿತಿ ಬಗ್ಗೆ ಯೋಚಿಸುವವರು ಯಾರೂ ಇಲ್ಲದಂತಾಗಿದ್ದಾರೆ ಎಂದು ಶಾಸಕ ಸಮೃದ್ಧಿ ಮಂಜುನಾಥ್ ಆತಂಕ ವ್ಯಕ್ತಪಡಿಸಿದರು.

ತಾಲೂಕಿನ ಚಿಂತಲಪಲ್ಲಿ ಮತ್ತು ಆವಣಿ ಗ್ರಾಮಗಳಲ್ಲಿ ಹಮ್ಮಿಕೊಳ್ಳಲಾಗಿದ್ದ ಕೋಲಾರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಪ್ರಚಾರ ಸಭೆಯ ನೇತೃತ್ವ ವಹಿಸಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದೇ ಬರ ಆವರಿಸಿಕೊಂಡಿತು, ಜನ ಕುಡಿಯುವ ನೀರಿಗೂ ಆಹಾಕಾರ ಪಡುವಂತಹ ಪರಿಸ್ಥಿತಿ ಬಂದೊದಗಿದೆ, ಆದರೆ ರಾಜ್ಯದಲ್ಲಿರುವ ಗಟ್ಟಿ ಚರ್ಮದ ಸರ್ಕಾರ ಜನರ ಸಮಸ್ಯೆಗಳ ಬಗ್ಗೆ ಒಂದಿಷ್ಟು ತಲೆಕೆಡಿಸಿಕೊಳ್ಳುತ್ತಿಲ್ಲ ಕೇವಲ ಗ್ಯಾರಂಟಿ ಯೋಜನೆಗಳೆಂಬ ಮಂಕು ಬೂದಿ ಜನರ ಮುಖಕ್ಕೆ ಎರಚಿ ರಾಜಕೀಯ ಮಾಡಿಕೊಂಡು ಹೊರಟಿದ್ದಾರೆ.

ಕೋಚಿಮುಲ್ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್ ಮಾತನಾಡಿ, ಕಾಂಗ್ರೆಸ್‌ನವರು ರಾಹುಲ್ ಗಾಂಧಿಯನ್ನು ಕೋಲಾರಕ್ಕೆ ಕರೆಸಿ ಪ್ರಚಾರ ಮಾಡಿಸಿದರೆ ಲೋಕಸಭಾ ಕ್ಷೇತ್ರವನ್ನು ಗೆಲ್ಲುತ್ತೇವೆ ಅನ್ನೋ ಭ್ರಮೆಯಲ್ಲಿದ್ದಾರೆ, ಆದರೆ ರಾಹುಲ್ ಗಾಂಧಿಯವರ ವರ್ತನೆಗಳೇ ಕಾಂಗ್ರೆಸ್ ಪಕ್ಷಕ್ಕೆ ಮುಳುವಾಗಲಿವೆ, ಹಿಂದೂ ಸಂಪ್ರದಾಯದಲ್ಲಿ ಕಾರ್ಯಕ್ರಮಗಳಲ್ಲಿ ದೀಪ ಬೆಳಗಿಸಿ ಶುಭಾರಂಭ ಮಾಡುವುದು ಸಂಪ್ರದಾಯ ಆ ದೀಪವನ್ನು ಎಡಗೈಯಲ್ಲಿ ಬೆಳಗಿಸಲು ಮುಂದಾಗುತ್ತಾರೆ ಎಂದರೆ ಅವರಿಗೆ ನಮ್ಮ ಸಂಪ್ರದಾಯಗಳ ಬಗ್ಗೆ ಎಷ್ಟು ಅಸಡ್ಡೆಯಿರಬೇಕು ಅಂತಹವರನ್ನು ದೇಶದ ಪ್ರಧಾನಮಂತ್ರಿ ಮಾಡಿದರೆ ದೇಶದ ಪರಿಸ್ಥಿತಿ ಏನಾಗಬಹುದು ಎಂಬುದನ್ನು ಊಹಿಸಿ ಎಂದರು.

 ರಾಹುಲ್ ಗಾಂಧಿಯವರಿಗಿಂತ ದೇಶವನ್ನು ಅಭಿವೃದ್ಧಿಪತದತ್ತ ಕೊಂಡೊಯ್ಯುತ್ತಿರುವ ನರೇಂದ್ರ ಮೋದಿ ಸಾವಿರ ಪಟ್ಟು ಉತ್ತಮ ಅದಕ್ಕಾಗಿ ದೇಶದಲ್ಲಿ ಮೂರನೇ ಭಾರಿಗೆ ನರೇಂದ್ರ ಮೋದಿಯವರನ್ನು ಪ್ರಧಾನ ಮಂತ್ರಿ ಮಾಡಲು ಕೋಲಾರ ಲೋಕಸಭಾ ಕ್ಷೇತ್ರದಿಂದ ಎನ್‌ಡಿಎ ಅಭ್ಯರ್ಥಿಯನ್ನು ಗೆಲ್ಲಿಸಿಕೊಡೋಣ ಎಂದು ಮನವಿ ಮಾಡಿದರು. 

ಅಭ್ಯರ್ಥಿ ಮಲ್ಲೇಶ್ ಬಾಬು ಮಾತನಾಡಿ, ನಾನು ಕೋಲಾರ ತಾಲೂಕಿನ ಕುಂಬಾರಹಳ್ಳಿ ಗ್ರಾಮದ ಸ್ಥಳೀಯ ಅಭ್ಯರ್ಥಿಯಾಗಿದ್ದು ತಮ್ಮ ಸ್ವಗ್ರಾಮದಲ್ಲಿ ನಮ್ಮ ತಂದೆ ನಿರ್ಮಿಸಿಕೊಟ್ಟಿರುವ ಶಾಲೆಯನ್ನು ನಡೆಸಿಕೊಂಡು ಬರುತ್ತಿದ್ದು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಕೊಟ್ಟು ಸಮಾಜದಲ್ಲಿ ಸತ್ಪ್ರಜೆಗಳನ್ನು ಮಾಡುತ್ತಿದ್ದೇವೆ, ಜೊತೆಗೆ ನಮ್ಮದೇ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಬದುಕುತ್ತಿದ್ದೇನೆ, ನಾನು ಸ್ಥಳೀಯನಾಗಿದ್ದು ಸ್ವಾಭಿಮಾನದಿಂದ ಬದುಕುತ್ತಿದ್ದೇನೆ ನನ್ನ ಮೇಲೆ ಯಾವುದೇ ಕ್ರಿಮಿನಲ್ ಆರೋಪಗಳಿಲ್ಲ, ನಾನು ಯಾವುದೇ ಹೊರಗಿನ ರಾಜ್ಯದವನಲ್ಲ ಮತ ಹಾಕುವಾಗ ಹಿನ್ನಲೆಯನ್ನು ತಿಳಿದು ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮೂಲಕ ನನಗೆ ಹೆಚ್ಚಿನ ಸಂಖ್ಯೆಯಲ್ಲಿ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು. 

ಬಿಜೆಪಿ ತಾಲೂಕು ಅಧ್ಯಕ್ಷ ಕಾಪರ್ತಿ ಅಮರ್, ಜಿಪಂ ಮಾಜಿ ಸದಸ್ಯ ಶಾಮೇಗೌಡ, ಮುಖಂಡ ಮುನೇಗೌಡ, ಶ್ರೀನಿವಾಸ್, ರವಿಚಂದ್ರ, ಮುನೇಗೌಡ, ಸುರೇಶ್, ಅಶ್ವತ್ಥರೆಡ್ಡಿ, ಸುರೇಂದ್ರ ಗೌಡ, ವಾಸು ಇದ್ದರು.

Share this article