ಕಾರವಾರ: ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರ 101ನೇ ಜಯಂತಿಯ ಶತಮಾನೋತ್ಸವ ಆಚರಣೆ ಅಂಗವಾಗಿ, ಶ್ರೀ ಸತ್ಯಸಾಯಿ ಸೇವಾ ಸಂಸ್ಥೆ ಹಾಗೂ ‘ಫಿಟ್ ಇಂಡಿಯಾ’ ಸಹಯೋಗದಲ್ಲಿ ಮಾ. 15ರಂದು ಕಾರವಾರದಲ್ಲಿ ಬೃಹತ್ ‘ಯುನಿಟಿ ರನ್ ಆ್ಯಂಡ್ ರೈಡ್’ ಮ್ಯಾರಥಾನ್ ಹಾಗೂ ಸೈಕ್ಲಿಂಗ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕ್ರೀಡಾಕೂಟದ ಮೂಲಕ ಯುವಜನತೆಯಲ್ಲಿ ಏಕತೆ, ಶಿಸ್ತು ಮತ್ತು ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶ ಹೊಂದಲಾಗಿದೆ ಎಂದು ಸಂಸ್ಥೆಯ ಜಿಲ್ಲಾ ಅಧ್ಯಕ್ಷ ರಾಮದಾಸ್ ಆಚಾರಿ ತಿಳಿಸಿದ್ದಾರೆ.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಆಯ್ದ 60 ನಗರಗಳಲ್ಲಿ ಈ ಅಭಿಯಾನ ನಡೆಯುತ್ತಿದ್ದು, ಕಾರವಾರದ ಮಾಲಾದೇವಿ ಮೈದಾನದಲ್ಲಿ ಮಾ. 15ರಂದು ಮುಂಜಾನೆ 5.30ಕ್ಕೆ ಚಾಲನೆ ದೊರೆಯಲಿದೆ. ಈ ಓಟದಲ್ಲಿ 3 ಕಿಮೀ, 5 ಕಿಮೀ ಹಾಗೂ 10 ಕಿಮೀ ಎಂಬ ಮೂರು ವಿಭಾಗಗಳಿರಲಿವೆ. ಸೈಕ್ಲಿಂಗ್ ವಿಭಾಗದಲ್ಲಿ ಮಹಿಳೆಯರಿಗೆ 16 ಕಿಮೀ ಹಾಗೂ ಪುರುಷರಿಗೆ 22 ಕಿಮೀ ಗುರಿ ನಿಗದಿಪಡಿಸಲಾಗಿದೆ. 3 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ವಿವರಿಸಿದರು.ಇದೇ ಸಂದರ್ಭ ಪುಟ್ಟಪರ್ತಿಯ ಪ್ರಶಾಂತಿ ನಿಲಯಂನಿಂದ ಹೊರಟಿರುವ ಐದು ದೈವಿಕ ರಥಗಳಲ್ಲಿ ಒಂದಾದ ‘ಪ್ರೇಮ ಪ್ರವಾಹಿನಿ’ ರಥವು ಮಾ. 16ರಂದು ಭಟ್ಕಳ ತಾಲೂಕಿನ ಗಡಿಯ ಮೂಲಕ ಉತ್ತರ ಕನ್ನಡ ಜಿಲ್ಲೆ ಪ್ರವೇಶಿಸಲಿದೆ ಎಂದು ಜಿಲ್ಲಾ ಸಂಯೋಜಕ ಜಿ.ಡಿ. ಮನೋಜ್ ಮಾಹಿತಿ ನೀಡಿದರು. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ 19 ದಿನಗಳ ಕಾಲ ಸಂಚರಿಸಲಿರುವ ಈ ರಥವು, ಮಾ. 25ರಿಂದ ನಾಲ್ಕು ದಿನಗಳ ಕಾಲ ಕಾರವಾರದಲ್ಲಿ ಇರಲಿದೆ. ಏ. 4ರಂದು ಹಳಿಯಾಳದ ಪಾಳದ ಮೂಲಕ ರಥವು ಬೆಳಗಾವಿ ಜಿಲ್ಲೆಗೆ ನಿರ್ಗಮಿಸಲಿದೆ.ಕಾರವಾರದಲ್ಲಿ ರಥ ವಾಸ್ತವ್ಯ ಹೂಡುವ ಕೊನೆಯ ದಿನದಂದು ಪ್ರಸಿದ್ಧ ಠಾಗೋರ್ ಕಡಲತೀರದಲ್ಲಿ ಅದ್ಧೂರಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಸಮಾರಂಭದಲ್ಲಿ ‘ಇಂಡಿಯನ್ ಐಡಲ್-14’ ಖ್ಯಾತಿಯ ಗಾಯಕಿ ಸೇರಿದಂತೆ ದೇಶದ ಹಲವು ಪ್ರಸಿದ್ಧ ಕಲಾವಿದರು ತಮ್ಮ ಕಲೆ ಪ್ರದರ್ಶಿಸಲಿದ್ದಾರೆ. ಜಿಲ್ಲಾಧಿಕಾರಿ, ಜಿಪಂ ಸಿಇಒ ಸೇರಿದಂತೆ ಹಲವು ಗಣ್ಯರು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಸಂಸ್ಥೆಯ ಮುಖಂಡರಾದ ತಿಮ್ಮಯ್ಯ ಮಿರಾಶಿ, ಸುನೀಲ್ ಅಣ್ವೇಕರ್ ಹಾಗೂ ದಯಾನಂದ ನಾಯ್ಕ ಉಪಸ್ಥಿತರಿದ್ದರು.