ಅರಸೀಕೆರೆ ಠಾಣೆಯ ಮಿಂಚಿನ ಕಾರ್ಯಾಚರಣೆ
ಕಳ್ಳತನವಾದ ಎರಡು ಗಂಟೆಯಲ್ಲಿ ಕಳ್ಳರನ್ನು ಬಂಧಿಸಿದ ಘಟನೆ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಉಚ್ಚಂಗಿದುರ್ಗ ಗ್ರಾಮದ ಅಂಜಿನಪ್ಪನವರ ಮನೆಯಲ್ಲಿ ನಗದು ಮತ್ತು ಬಂಗಾರದ ಆಭರಣ ಮಂಗಳವಾರ ಕಳ್ಳತನವಾಗಿದ್ದು, ಈ ಬಗ್ಗೆ ಅಂಜಿನಪ್ಪ ನೀಡಿದ ದೂರಿನ ಮೇರೆಗೆ ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ಕೇವಲ ಎರಡು ಗಂಟೆಯಲ್ಲಿಯೇ ಮಿಂಚಿನ ಕಾರ್ಯಾಚರಣೆ ನಡೆಸಿ ಕಳ್ಳರನ್ನು ಬಂಧಿಸಿದ್ದಾರೆ.ಅರಸೀಕೆರೆ ಗ್ರಾಮದ ಹೊರ ವಲಯದ ತೌಡೂರು ಕ್ರಾಸ್ ಬಳಿ ಆರೋಪಿತರಾದ ಮಾನ್ಯರ ಮಸಲವಾಡದ ಬಿ.ಶಿವಕುಮಾರ್ (25) ಹಗರಿಬೊಮ್ಮನಹಳ್ಳಿಯ ಜಹಾಂಗೀರ್ ಬಾಷಾ (33) ಬಂಧಿತ ಆರೋಪಿಗಳು
ಈ ಪ್ರಕರಣದಲ್ಲಿ ಕಳ್ಳತನವಾಗಿದ್ದ ₹26,600ನಗದು ಹಣ ₹40 ಸಾವಿರ ಬೆಲೆ ಬಾಳುವ ಒಂದು ಜೊತೆ ಬಂಗಾರದ ಜುಮುಕಿ ಅಂದಾಜು ₹1 ಲಕ್ಷ ಬೆಲೆ ಬಾಳುವ ಒಂದು ಮೋಟಾರ್ ಸೈಕಲ್ ಸೇರಿದಂತೆ ಒಟ್ಟು ₹166600 ಬೆಲೆ ಬಾಳುವ ವಸ್ತು ವಶಪಡಿಸಿಕೊಳ್ಳಲಾಗಿದೆ.ಪ್ರಕರಣದಲ್ಲಿನ ಕಳ್ಳರನ್ನು ಮತ್ತು ಮಾಲನ್ನು ಪತ್ತೆ ಮಾಡಲು ವಿಜಯನಗರ ಜಿಲ್ಲೆಯ ಎಸ್.ಪಿ. ಬಿ.ಎಲ್. ಹರಿಬಾಬು ನಿರ್ದೆಶನದಂತೆ ಡಿವೈಎಸ್ಪಿ ವೆಂಕಟಪ್ಪ ನಾಯಕ್, ಮಾರ್ಗದರ್ಶನದಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ಮಹಾಂತೇಶ್ ಸಜ್ಜನ್ ಹಾಗೂ ಅರಸೀಕೆರೆ ಪಿಎಸ್ಐ ಕೆ. ರಂಗಯ್ಯ ಮತ್ತು ಸಿಬ್ಬಂದಿ ಯು.ದಾದಾಪೀರ್, ಕೆ. ಗುರುರಾಜ್, ವಸಂತ್ ಕುಮಾರ್, ಗರ್ಯಾ ನಾಯ್ಕ್, ಕೆ.ಜಿ. ರವಿಕುಮಾರ್, ಕೆ. ನಾರಪ್ಪ ವಿಶೇಷ ತಂಡದಲ್ಲಿದ್ದರು. ಅರಸೀಕೆರೆ ಪೋಲೀಸರ ಕಾರ್ಯಕ್ಕೆ ವಿಜಯನಗರ ಜಿಲ್ಲೆಯ ಎಸ್ಪಿ ಬಿ.ಎಲ್.ಹರಿಬಾಬು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.