ನ್ಯಾಮತಿ ಎಸ್‌ಬಿಐ ಬ್ಯಾಂಕ್‌ ಕೊಳ್ಳೆ ಹೊಡೆದ ಕಳ್ಳರು!

KannadaprabhaNewsNetwork |  
Published : Oct 29, 2024, 12:48 AM IST
28ಕೆಡಿವಿಜಿ3-ದಾವಣಗೆರೆ ಜಿಲ್ಲೆ ನ್ಯಾಮತಿ ಪಟ್ಟಣದ ನೆಹರು ರಸ್ತೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕಳ್ಳತನವಾದ ಹಿನ್ನೆಲೆಯಲ್ಲಿ ಎಸ್ಪಿ ಉಮಾ ಪ್ರಶಾಂತ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು. ಸ್ಥಳಕ್ಕೆ ಪೊಲೀಸ್ ಶ್ವಾನದಳ ಕರೆಸಲಾಗಿತ್ತು. .................28ಕೆಡಿವಿಜಿ4-ದಾವಣಗೆರೆ ಜಿಲ್ಲೆ ನ್ಯಾಮತಿ ಪಟ್ಟಣದ ನೆಹರು ರಸ್ತೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕಳ್ಳತನವಾಗಿದ್ದು, ಹೀಗೆ ಕಿಟಕಿ ಸರಳುಗಳನ್ನು ಕತ್ತರಿಸಿ, ಕಳ್ಳರು ಒಳಗೆ ಪ್ರವೇಶಿಸಿದ್ದಾರೆ. .................28ಕೆಡಿವಿಜಿ5, 6-ದಾವಣಗೆರೆ ಜಿಲ್ಲೆ ನ್ಯಾಮತಿ ಪಟ್ಟಣದ ನೆಹರು ರಸ್ತೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕಳ್ಳತನವಾಗಿದ್ದು, ಜನರು ಕುತೂಹಲದಿಂದ ಅಲ್ಲಿ ಸೇರಿರುವುದು. | Kannada Prabha

ಸಾರಾಂಶ

ರಾತ್ರೋರಾತ್ರಿ ಬ್ಯಾಂಕ್‌ಗೆ ಕಳ್ಳರು ನುಗ್ಗಿ, ಲಾಕರ್‌ನಲ್ಲಿದ್ದ ನಗದು, ಚಿನ್ನಾಭರಣ ಕಳವು ಮಾಡಿದ್ದು, ಸಿಸಿ ಟಿವಿ ಕ್ಯಾಮೆರಾದ ಡಿವಿಆರ್ ಸಹ ಹೊತ್ತೊಯ್ದ ಘಟನೆ ಜಿಲ್ಲೆಯ ನ್ಯಾಮತಿ ಪಟ್ಟಣದಲ್ಲಿ ಸೋಮವಾರ ಬೆಳಕಿಗೆ ಬಂದಿದೆ. ಪಟ್ಟಣದ ನೆಹರು ರಸ್ತೆಯ ಎಸ್‌ಬಿಐ ಬ್ಯಾಂಕ್‌ನಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ.

- ಗ್ಯಾಸ್‌ ಕಟರ್‌ನಿಂದ ಕಿಟಕಿ ಸರಳುಗಳು, ಭದ್ರವಾದ ತಿಜೋರಿ ತುಂಡರಿಸಿ ಹಣ, ಆಭರಣ ಕಳವು

- ಬ್ಯಾಂಕ್‌ನಲ್ಲಿ ಕಾರದ ಪುಡಿ ಹರಡಿದ್ದು ಪತ್ತೆ, ಸಿಸಿ ಕ್ಯಾಮೆರಾ ಡಿವಿಆರ್‌ ಹೊತ್ತೊಯ್ದ ಚಾಲಾಕಿಗಳು

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ರಾತ್ರೋರಾತ್ರಿ ಬ್ಯಾಂಕ್‌ಗೆ ಕಳ್ಳರು ನುಗ್ಗಿ, ಲಾಕರ್‌ನಲ್ಲಿದ್ದ ನಗದು, ಚಿನ್ನಾಭರಣ ಕಳವು ಮಾಡಿದ್ದು, ಸಿಸಿ ಟಿವಿ ಕ್ಯಾಮೆರಾದ ಡಿವಿಆರ್ ಸಹ ಹೊತ್ತೊಯ್ದ ಘಟನೆ ಜಿಲ್ಲೆಯ ನ್ಯಾಮತಿ ಪಟ್ಟಣದಲ್ಲಿ ಸೋಮವಾರ ಬೆಳಕಿಗೆ ಬಂದಿದೆ.

ಪಟ್ಟಣದ ನೆಹರು ರಸ್ತೆಯ ಎಸ್‌ಬಿಐ ಬ್ಯಾಂಕ್‌ನಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ. ಶನಿವಾರ, ಭಾನುವಾರ ಎರಡು ದಿನ ಬ್ಯಾಂಕ್‌ಗೆ ರಜೆ ಇತ್ತು. ಈ ಅವಕಾಶವನ್ನೇ ಚಾಣಾಕ್ಷ ಕಳ್ಳರು ಹಣ-ಆಭರಣ ಕದಿಯಲು ಬಳಸಿಕೊಂಡಿದ್ದಾರೆ. ಶುಕ್ರವಾರ ರಾತ್ರಿಯೇ ಬ್ಯಾಂಕ್‌ನಲ್ಲಿ ಕಳವು ಮಾಡಿರುವ ಅನುಮಾನವಿದೆ. ಕಳವಾದ ನಗದು, ಚಿನ್ನಾಭರಣಗಳ ಮೌಲ್ಯ ಎಷ್ಟೆಂಬುದರ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ.

ಎರಡು ದಿನಗಳ ಹಿಂದೆಯೇ ಬ್ಯಾಂಕ್‌ನಲ್ಲಿ ಕಳವು ನಡೆದಿರುವ ಶಂಕೆಯೂ ವ್ಯಕ್ತವಾಗಿದೆ. ಕಳ್ಳರು ಎಸ್‌ಬಿಐ ಬ್ಯಾಂಕ್‌ ಕಟ್ಟಡದ ಒಂದು ಬದಿಯ ಕಿಟಕಿ ಸರಳಗಳನ್ನು ಎರಡು ದಿನಗಳ ಹಿಂದೆಯೇ ಗ್ಯಾಸ್ ಕಟರ್‌ನ ಸಹಾಯದಿಂದ ತುಂಡರಿಸಿದ್ದಾರೆ. ಒಂದು ಸಲಕ್ಕೆ ಒಬ್ಬ ವ್ಯಕ್ತಿ ಸುಲಭವಾಗಿ ಒಳ ನುಗ್ಗುವಂತೆ ವ್ಯವಸ್ಥೆ ಮಾಡಿಕೊಂಡು, ಬ್ಯಾಂಕ್ ಒಳಗೆ ಪ್ರವೇಶಿಸಿದ್ದಾರೆ. ಭದ್ರವಾದ ತಿಜೋರಿಯಲ್ಲಿದ್ದ ನಗದು, ಚಿನ್ನಾಭರಣ ಕಳವು ಮಾಡಿದ್ದಾರೆ. ಅಲ್ಲಿಯೇ ಇದ್ದ ಸಿಸಿ ಕ್ಯಾಮೆರಾದ ವೈಯರ್‌ಗಳನ್ನು ಕಿತ್ತು, ಅದರ ಡಿವಿಆರ್‌ ಎತ್ತಿಕೊಂಡು ಕಾಲ್ಕಿತ್ತಿದ್ದಾರೆ.

ಸೋಮವಾರ ಬೆಳಗ್ಗೆ ಬ್ಯಾಂಕ್‌ ಕೆಲಸಕ್ಕೆ ಆಗಮಿಸಿದ ಸಿಬ್ಬಂದಿ, ಬ್ಯಾಂಕಿನಲ್ಲಿ ಸರಳು ಮುರಿದಿರುವುದು, ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದನ್ನು ಗಮನಿಸಿದ ಕೂಡಲೇ ವ್ಯವಸ್ಥಾಪಕರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ವ್ಯವಸ್ಥಾಪಕರು, ಸಿಬ್ಬಂದಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಕೂಡಲೇ ಬೆರಳಚ್ಚು ತಜ್ಞರು, ಶ್ವಾನದಳದ ತಂಡಗಳು ಬ್ಯಾಂಕ್‌ಗೆ ಧಾವಿಸಿ, ಪರಿಶೀಲನೆ ನಡೆಸಿದವು. ಸ್ಥಳ ಪರಿಶೀಲನೆಯಲ್ಲಿ ಪಾಲ್ಗೊಂಡ ಪೊಲೀಸ್ ಶ್ವಾನಗಳು ಸುಮಾರು 2 ಕಿಮೀ ದೂರವರೆಗೆ ಹೋಗಿನಿಂತಿವೆ.

ಮೂಲವೊಂದರ ಪ್ರಕಾರ ಕಳ್ಳರು ಬ್ಯಾಂಕ್‌ನಲ್ಲಿ ತಮ್ಮ ಗುರುತು, ಚಹರೆ ಸುಳಿವು ಸಿಗಬಾರದೆಂಬ ಕಾರಣಕ್ಕೆ ಸಿಸಿ ಟಿವಿ ಕ್ಯಾಮೆರಾದ ಡಿವಿಆರ್ ಸಹ ಎತ್ತಿಕೊಂಡು ಹೋಗಿದ್ದಾರೆ. ಬ್ಯಾಂಕ್‌ನಲ್ಲಿ, ಕಿಟಕಿ ಸರಳು ಇತರೆ ಕಡೆಗೆಲ್ಲಾ ಖಾರದ ಪುಡಿ ಚೆಲ್ಲಿದ್ದಾರೆ. ಶ್ವಾನದಳಕ್ಕೂ ಯಾಮಾರಿಸುವ ಕೆಲಸ ಮಾಡಿದ್ದಾರೆ. ಇದನ್ನು ಗಮನಿಸಿದರೆ ಇಡೀ ತಂಡ ಅತ್ಯಂತ ವೃತ್ತಿಪರವಾಗಿದೆ ಎಂಬ ಅನುಮಾನ ಮೂಡಿದೆ.

ಘಟನೆಯಿಂದಾಗಿ ನ್ಯಾಮತಿ ಪಟ್ಟಣ ನಿವಾಸಿಗಳು, ಠೇವಣಿದಾರರು ಹಾಗೂ ಗ್ರಾಹಕರು ತೀವ್ರ ಭೀತಿಗೊಂಡಿದ್ದಾರೆ. ಮೂಲವೊಂದರ ಪ್ರಕಾರ ಕಳ್ಳರು ಲಾಕರ್ ಒಡೆದು, ಅಲ್ಲಿದ್ದ ಹಣ, ಚಿನ್ನಾಭರಣ ದೋಚಿದ್ದಾರೆ ಎನ್ನಲಾಗಿದೆ. ಮತ್ತೊಂದು ಮಾಹಿತಿ ಪ್ರಕಾರ ಬ್ಯಾಂಕ್ ಲಾಕರ್‌ನಲ್ಲಿ ಗ್ರಾಹಕರು ಇಟ್ಟಿದ್ದ ಚಿನ್ನಾಭರಣವನ್ನಷ್ಟೇ ಕಳ್ಳರು ದೋಚಿದ್ದಾರೆ ಎಂದೂ ಹೇಳಲಾಗಿದೆ.

ಘಟನೆ ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಭೇಟಿ ನೀಡಿ, ಪರಿಶೀಲಿಸಿದರು. ನ್ಯಾಮತಿ ಪೊಲೀಸ್ ಇನ್‌ಸ್ಪೆಕ್ಟರ್‌ ಎನ್.ಎಸ್‌.ರವಿ, ಪಿಎಸ್ಐ ಜಯಪ್ಪ ನಾಯ್ಕ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದರು. ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

- - -

ಬಾಕ್ಸ್‌ * ಹಣಕ್ಕಿಂತ ಚಿನ್ನಾಭರಣ ಮೇಲೆ ಕಳ್ಳರ ಕಣ್ಣು ನ್ಯಾಮತಿ ಪಟ್ಟಣದ ನೆಹರು ರಸ್ತೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕಳವು ನಡೆಸಿರುವ ಕಳ್ಳರಿಗೆ ಬ್ಯಾಂಕಿನ ಬಗ್ಗೆ ಸಂಪೂರ್ಣ ಮಾಹಿತಿ ಇದ್ದಂತಿದೆ. ನಾಲ್ಕನೇ ಶನಿವಾರ, ಭಾನುವಾರ ರಜೆ ಇದ್ದ ಕಾರಣಕ್ಕೆ ಶುಕ್ರವಾರ ರಾತ್ರಿಯೇ ಕಳ್ಳರು ಕೃತ್ಯ ಎಸಗಿರುವ ಸಾಧ್ಯತೆ ಇದೆ.

ಸಾಮಾನ್ಯವಾಗಿ ನ್ಯಾಮತಿ ಪಟ್ಟಣದಲ್ಲಿ ಕೋಟ್ಯಂತರ ರು.ಗಳಿದ್ದರೆ ಅದನ್ನು ಹೊನ್ನಾಳಿ ಪಟ್ಟಣದ ಎಸ್‌ಬಿಐ ಮುಖ್ಯ ಕಚೇರಿಯ ಭದ್ರತಾ ಕೊಠಡಿಯಲ್ಲಿ ಇಡಲಾಗುತ್ತದೆ ಎನ್ನಲಾಗಿದೆ. ಹಾಗಾಗಿ, ನ್ಯಾಮತಿ ಪಟ್ಟಣದ ಎಸ್‌ಬಿಐ ಶಾಖೆಯಲ್ಲಿ ಹೆಚ್ಚು ಹಣ ಇರುವುದಿಲ್ಲ. ನ್ಯಾಮತಿ ಬ್ಯಾಂಕ್ ಶಾಖೆಯಲ್ಲಿ ಕಳ್ಳರು ಹಣಕ್ಕಿಂತಲೂ ಚಿನ್ನಾಭರಣಗಳನ್ನೇ ಕಳವು ಮಾಡಿದ್ದಾರೆಂಬ ಮಾತುಗಳೂ ಕೇಳಿಬರುತ್ತಿವೆ.

ಎಸ್‌ಬಿಐ ಬ್ಯಾಂಕ್ ಬಗ್ಗೆ ಮಾಹಿತಿ ಇದ್ದವರಿಗೆ, ಕಡಿಮೆ ಹಣ ಇದ್ದರೆ, ಹೆಚ್ಚು ಹಣ ಬಂದರೆ ಏನು ಮಾಡಲಾಗುತ್ತದೆ, ಯಾವ ಕಡೆಯಿಂದ ಬ್ಯಾಂಕ್‌ಗೆ ಪ್ರವೇಶಿಸುವುದು ಸುಲಭ, ಸಿಸಿ ಕ್ಯಾಮೆರಾದ ಡಿವಿಆರ್‌ ವಿಚಾರ, ನ್ಯಾಮತಿ ಪಟ್ಟಣದ ನೆಹರು ರಸ್ತೆ ವ್ಯಾಪಾರ-ವಹಿವಾಟು, ಚಲನವಲನ ಬಗ್ಗೆ ಎಲ್ಲ ತಿಳಿದುಕೊಂಡೇ ಕಳ್ಳರು ಬ್ಯಾಂಕ್‌ಗೆ ಕನ್ನ ಹಾಕಿರುವ ಸಾಧ್ಯತೆ ಇದೆ. ಆದರೆ, ಬ್ಯಾಂಕಿನಲ್ಲಿ ಕಳವಾದ ನಗದು ಎಷ್ಟು, ಚಿನ್ನಾಭರಣ ಎಷ್ಟು, ಎಷ್ಟು ಮೌಲ್ಯದ್ದು ಎಂಬ ಮಾಹಿತಿಗಳು ಇನ್ನೂ ಲಭ್ಯವಾಗಿಲ್ಲ.

- - - -28ಕೆಡಿವಿಜಿ3: ದಾವಣಗೆರೆ ಜಿಲ್ಲೆ ನ್ಯಾಮತಿ ಪಟ್ಟಣದ ನೆಹರು ರಸ್ತೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಕಳವು ನಡೆದಿದ್ದು, ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು. ಪೊಲೀಸ್ ಶ್ವಾನದಳದಿಂದಲೂ ಪರಿಶೀಲನೆ ನಡೆಯಿತು.-28ಕೆಡಿವಿಜಿ4: ನ್ಯಾಮತಿ ಪಟ್ಟಣದ ನೆಹರು ರಸ್ತೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಕಳವು ನಡೆಸಲು ಕಿಟಕಿ ಸರಳುಗಳನ್ನು ಕತ್ತರಿಸಿರುವುದು. -28ಕೆಡಿವಿಜಿ5, 6: ದಾವಣಗೆರೆ ಜಿಲ್ಲೆ ನ್ಯಾಮತಿ ಪಟ್ಟಣದ ನೆಹರು ರಸ್ತೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕಳವು ನಡೆದ ಹಿನ್ನೆಲೆ ಜಮಾಯಿಸಿದ್ದ ಗ್ರಾಹಕರು, ಸಾರ್ವಜನಿಕರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ