ರಾಮನಗರ: ತಾಲೂಕಿನ ತಿಮ್ಮಸಂದ್ರ ಹಾಲು ಉತ್ಪಾದಕರು ಆಡಳಿತ ಮಂಡಳಿ ಅನರ್ಹ ಮಾಡಿರುವುದನ್ನು ಆಕ್ಷೇಪಿಸಿ ಮತ್ತು ನಿಗದಿತ ಸಮಯದಲ್ಲಿ ಬಟವಾಡೆ ಮಾಡಬೇಕೆಂದು ಒತ್ತಾಯಿಸಿ ನಗರದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಎದುರು ಬುಧವಾರ ಹೈನುಗಾರರು ಪ್ರತಿಭಟನೆ ನಡೆಸಿದರು.
ಪ್ರತಿ 15 ದಿನಗಳಿಗೊಮ್ಮೆ ಡೇರಿಯಲ್ಲಿ ರೈತರ ಹಾಲಿನ ಬಟವಾಡೆ ನಡೆಯುತ್ತದೆ. ಆಡಳಿತ ಮಂಡಳಿ ಅನರ್ಹ ಮಾಡಿರುವ ಕಾರಣ 1ನೇ ತಾರೀಖು ನೀಡಬೇಕಾದ ಬಟವಾಡೆ ಏಳು ದಿನವಾದರೂ ರೈತರ ಕೈ ಸೇರಿಲ್ಲ. ಇದರಿಂದ ಹಾಲು ಉತ್ಪಾದಕರಿಗೆ ತೀವ್ರ ಆರ್ಥಿಕ ಸಮಸ್ಯೆ ಎದುರಾಗಿದೆ. ರಾಸುಗಳಿಗೆ ಮೇವು, ಸಂಘಗಳಲ್ಲಿ ಪಡೆದ ಸಾಲ ಕಟ್ಟಲು ಮನೆ ನಿರ್ವಹಣೆಗೆ ಹಣಕಾಸಿನ ತೊಂದರೆ ಉಂಟಾಗಿದೆ.
ಮೂರು ದಿನಗಳಿಂದಲೂ ಕಚೇರಿಗೆ ಬರುತ್ತಿದ್ದರೂ ನಿಬಂಧಕರು ಕಚೇರಿಯಲ್ಲಿ ಸಿಗುತ್ತಿಲ್ಲ. ಸಂಘದಲ್ಲಿ ಕಾರ್ಯದರ್ಶಿಯಾಗಿದ್ದ ರೇಣುಕಾರಾಧ್ಯ ಸಂಘದಲ್ಲಿ ಉತ್ತಮ ನಿರ್ವಹಣೆ ಉತ್ಪಾದಕರೊಂದಿಗೆ ಉತ್ತಮ ಬಾಂಧವ್ಯದಿಂದ ಕೆಲಸ ನಿರ್ವಹಿಸುತ್ತಿದ್ದರು. ಅವರನ್ನು ಉದ್ದೇಶಪೂರ್ವಕವಾಗಿ ಕೆಲಸದಿಂದ ತೆಗೆಯುವ ಹುನ್ನಾರದಿಂದ ತೊಂದರೆ ನೀಡುವುದು ಸರಿಯಲ್ಲ ಎಂದರು.ರೇಣುಕಾರಾಧ್ಯ ಅವರ ಮೇಲೆ ರೈತರಿಂದ ಯಾವುದೇ ದೂರು ಇಲ್ಲ. ಈ ಕೂಡಲೇ ಅವರನ್ನು ಕಾರ್ಯದರ್ಶಿಯಾಗಿ ಮುಂದುವರೆಸಲು ಹಣಕಾಸಿನ ವಹಿವಾಟು ನಡೆಸಲು ಅನುಮತಿ ನೀಡಬೇಕು. ಸ್ಥಳಕ್ಕೆ ಸಹಾಯಕ ನಿಬಂಧಕರು ಬಂದು ರೈತರ ಮನವಿ ಪಡೆಯಬೇಕು. ಕೂಡಲೇ ತೊಂದರೆ ಸರಿಪಡಿಸಬೇಕು. ಆಡಳಿತ ಮಂಡಳಿ ಅನರ್ಹಗೊಳಿಸಿರುವ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ರೈತರು ಪ್ರತಿಭಟಿಸಿ ನಿಬಂಧಕರ ಮೇಲೆ ಕಿಡಿಕಾರಿದರು.
ರಾಮನಗರದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಎದರು ತಿಮ್ಮಸಂದ್ರ ಹಾಲು ಉತ್ಪಾದಕ ರೈತರು ಪ್ರತಿಭಟನೆ ನಡೆಸಿದರು.