ಶಿಕಾರಿಪುರ : ಈ ಚುನಾವಣೆಯು ದೇಶದ ಭವಿಷ್ಯವನ್ನು ನಿರ್ಧರಿಸುವ ಚುನಾವಣೆ ಯಾಗಿದ್ದು ಪ್ರತಿಯೊಬ್ಬ ಮತದಾರರಿಗೂ ಇದನ್ನು ಅರ್ಥ ಮಾಡಿಸುವ ಕೆಲಸವನ್ನು ಪಕ್ಷದ ಕಾರ್ಯಕರ್ತರು ಮಾಡಬೇಕಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕರಾದ ಬಿ.ವೈ.ವಿಜಯೇಂದ್ರ ಹೇಳಿದರು.
ಅವರು ಪಟ್ಟಣದ ಮಾಳೆರಕೇರಿಯಲ್ಲಿನ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ದೇಶದ ಹಿತಕ್ಕಾಗಿ ನಾನು ಮತವನ್ನು ಚಲಾಯಿಸುತ್ತಿದ್ದೇನೆ ಎಂದು ಮತದಾರರಿಗೆ ಮನದಟ್ಟು ಮಾಡಿಕೊಡಿ. ಇದು ಜಿಲ್ಲಾ ಪಂಚಾಯಿತಿ ಪುರಸಭೆ ಗ್ರಾಮ ಪಂಚಾಯಿತಿ ಚುನಾವಣೆ ಅಲ್ಲ ಪ್ರತಿ ಮತದಾರನು ದೇಶದ ಭವಿಷ್ಯವನ್ನು ನಿರ್ಣಯಿಸುವ ಮತ ಎಂದು ಅರ್ಥೈಸಿ ಎಂದರು.
ಪ್ರತಿ ಮತದಾರರು ಕೇಂದ್ರ ಸರ್ಕಾರದ ಒಂದಲ್ಲ ಒಂದು ಯೋಜನೆ ಫಲಾನುಭವಿಗಳಾಗಿದ್ದಾರೆ. ಅವರಿಗೆ ಸರ್ಕಾರದ ಯೋಜನೆ ವಿವರಿಸಿ ಎಂದರು. ಆರ್ಥಿಕವಾಗಿ ದೇಶವು 50ನೇ ಸ್ಥಾನದಲ್ಲಿ ಇತ್ತು ಕಳೆದ ಹತ್ತು ವರ್ಷದ ಈಚೆಗೆ ಮೋದಿ ಅವರ ಶ್ರಮದಿಂದಾಗಿ ಆರ್ಥಿಕ ಪ್ರಗತಿಯಲ್ಲಿ ಐದನೇ ಸ್ವಾವಲಂಬಿ ದೇಶವಾಗಿದೆ ಎಂದರು.
ಶಿಕಾರಿಪುರ ತಾಲೂಕಿನ ಹಾಗೂ ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿ ಹಿಂದೆ ಬಿ ಎಸ್ ಯಡಿಯೂರಪ್ಪ ಹಾಗೂ ಸಂಸದರಾದ ಬಿ ವೈ ರಾಘವೇಂದ್ರರ ಶ್ರಮವಿದೆ. ರಾಜ್ಯದಲ್ಲಿ ಹಿಂದೆಂದೂ ಕಾಣದಂತಹ ತೀವ್ರ ಬರ ಪರಿಸ್ಥಿತಿ ಇದ್ದರೂ ರಾಜ್ಯ ಸರ್ಕಾರ ಪರಿಹಾರ ಧನವನ್ನು ಬಿಡುಗಡೆ ಮಾಡದೆ ಕೇಂದ್ರದ ಕಡೆ ಬೊಟ್ಟು ಮಾಡಿ ತೋರಿಸುತ್ತಿದೆ. ತನ್ನ ಆರ್ಥಿಕ ದಿವಾಳಿತನವನ್ನು ಮುಚ್ಚಿಕೊಳ್ಳಲು ಕೇಂದ್ರದ ವಿರುದ್ಧ ಮಾತನಾಡುತ್ತಾ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಲಹರಣ ಮಾಡುತ್ತಿದ್ದಾರೆ. ಈ ಹಿಂದೆ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು ಆಗ ಮಂತ್ರಿಮಂಡಲ ವಿಸ್ತರಣೆಯು ಆಗಿರಲಿಲ್ಲ. ಇಡೀ ರಾಜ್ಯವನ್ನು ಒಬ್ಬಂಟಿಯಾಗಿ ಸುತ್ತಿ ಪರಿಹಾರ ಧನವನ್ನು ಕೂಡಲೇ ಒದಗಿಸಿ ನೊಂದವರಿಗೆ ಸಾಂತ್ವಾನವನ್ನು ಹೇಳಿದರು.
ಈ ಸರ್ಕಾರದಲ್ಲಿ ಮುಂದೆ ಎರಡು ತಿಂಗಳ ನಂತರ ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಹಣ ಇರುವುದಿಲ್ಲ. ಮತ್ತೆ ಲಕ್ಷ ಕೋಟಿಗಳಷ್ಟು ಸಾಲ ತೆಗೆಯಲು ಸನ್ನದ್ಧರಾಗಿದ್ದಾರೆ. ರಾಜ್ಯವನ್ನು ಸಾಲದ ದವಡೆಗೆ ನೂಕುತಿದ್ದಾರೆ ಎಂದರು.
ಪಕ್ಷದ ಕಾರ್ಯಕರ್ತರು ಬೇರೆ ಬೂತ್ಗಳ ಕಡೆ ಗಮನ ಕೊಡದೆ ತಮ್ಮ ತಮ್ಮ ಬೂತ್ ಗಳಲ್ಲಿ ಸಂಪೂರ್ಣ ಜವಾಬ್ದಾರಿಯಿಂದ ಕಳೆದ ಬಾರಿಗಿಂತ 100 ಮತಗಳ ಲೀಡ್ ಕೊಡಿಸಿದರೆ ಸಂಸದ ರಾಘವೇಂದ್ರ ಮತ್ತೆ ಅತಿ ಹೆಚ್ಚು ಮತಗಳ ಅಂತರದಿಂದ ಸಂಸದರಾಗುತ್ತಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಬಿಜೆಪಿ ಅಧ್ಯಕ್ಷ ಸಂಕ್ಲಾಪುರದ ಹನುಮಂತಪ್ಪ ವಹಿಸಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಹಾಲುಮತ ಮಹಾಸಭಾ ಸಂಚಾಲಕರಾದ ಡಿ ಡಿ ಶಿವಕುಮಾರ್ ,ಹೊಲಗಾವಲು ತೇಜಸ್ ಮುಂತಾದವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಕಾರ್ಯಕ್ರಮದಲ್ಲಿ ಎಂ ಎ ಡಿ ಬಿ ಮಾಜಿ ಅಧ್ಯಕ್ಷ ಕೆ ಎಸ್ ಗುರುಮೂರ್ತಿ , ಪುರಸಭಾ ಮಾಜಿ ಅಧ್ಯಕ್ಷ ಟಿ.ಎಸ್. ಮೋಹನ್ , ಕೆ.ಜಿ ವಸಂತಗೌಡ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೆ.ಹಾಲಪ್ಪ, ರಾಜ್ಯ ಉಗ್ರಾಣ ನಿಗಮದ ಮಾಜಿ ಅಧ್ಯಕ್ಷ ಎಚ್ ಟಿ ಬಳಿಗಾರ್,ಸಿದ್ದಲಿಂಗಪ್ಪ,ಟಿ ಎ ಪಿ ಸಿ ಎಮ್ ಎಸ್ ಅಧ್ಯಕ್ಷ ಸುಧೀರ್ ,ನಗರ ಬಿಜೆಪಿ ಅಧ್ಯಕ್ಷ ರಾಘು,ಕೆ ಪಾಲಾಕ್ಷಪ್ಪ ಗುರುರಾಜ ಜಗತಾಪ್ ಮುಂತಾದವರು ಪಾಲ್ಗೊಂಡಿದ್ದರು.