ಶಿವಾನಂದ ಪಿ. ಮಹಾಬಲಶೆಟ್ಟಿ
ರಬಕವಿ ನಗರದ ಕೃಷ್ಣಾ ನದಿ ರಸ್ತೆಯಲ್ಲಿನ ಬಸವರಾಜ ದಲಾಲ ಪರಿವಾರದವರ ಫಾರ್ಮಹೌಸ್ನಲ್ಲಿ ನಮ್ಮ ಪೂರ್ವಜರು ಬಳಸಿದ ಆಯಾ ಕಾಲಘಟ್ಟದ ಅನೇಕ ಅಪರೂಪದ ವಸ್ತುಗಳ ವಸ್ತು ಸಂಗ್ರಹಾಲಯ ನಿರ್ಮಿಸಲಾಗಿದೆ. ಈ ಅಪರೂಪದ ವಸ್ತುಗಳನ್ನು ನೋಡಲು ಪ್ರತಿನಿತ್ಯ ಪ್ರವಾಸಿಗರು ಬರುತ್ತಾರೆ. ಅದರಲ್ಲೂ ವಾರದ ಕೊನೆಯ ದಿನವಾದ ಶನಿವಾರ ಮತ್ತು ಭಾನುವಾರ ಜನರು ಕಿಕ್ಕಿರಿದು ಸೇರುತ್ತಾರೆ.
ವಸ್ತು ಸಂಗ್ರಹಾಲಯದಲ್ಲಿ ಯಾವ ವಸ್ತುಗಳಿವೆ?: ಈ ವಸ್ತು ಸಂಗ್ರಹಾಲಯದಲ್ಲಿ ಹಳೆ ಕಾಲದ ಲಾಟೀನ್ಗಳು, ರೇಡಿಯೋಗಳು, ಕ್ಯಾಸೆಟ್, ಟೆಲಿಫೋನ್ಗಳು, ಅಮಿತಾಬ್ ಬಚ್ಚನ್, ವಿಜಯ ಮಲ್ಯ, ರಜನೀಕಾಂತ ಅವರು ಬಳಸಿದ ಹಳೆ ಕಾರುಗಳು, ಆಟಿಕೆ ಸಾಮಾನುಗಳು, ನೂರಾರು ವರ್ಷಗಳ ಹಿಂದೆ ಬಳಕೆಯಲ್ಲಿದ್ದ ಕ್ಯಾಮೆರಾಗಳು, ರಾಜಮಹಾರಾಜರು ಬಳಸಿದ ತಲವಾರಗಳು, ವಿದೇಶಿ ಕೀಲಿಗಳು, ಕಾಲಾನುಕ್ರಮದಲ್ಲಿನ ಟೈಪ್ರೈಟಿಂಗ್ ಮಷಿನ್, ಅಡುಗೆ ಮನೆಯಲ್ಲಿ ಬಳಸುವ ವಸ್ತುಗಳು ಹೀಗೆ ಹತ್ತು ಹಲವು ಮಾದರಿಯ ಇತಿಹಾಸ ಸಾರುವ ಮುಂದಿನ ಪೀಳಿಗೆಗೆ ಪರಿಚಯಾತ್ಮಕವಾಗಿರುವ ವಸ್ತು ಸಂಗ್ರಹಾಲಯ ನೋಡುಗರನ್ನು ಆಕರ್ಷಿಸುತ್ತಿದೆ.ಸಂಸ್ಕೃತಿಯ ಪರಿಚಯ, ವಿನಿಮಯ ಮತ್ತು ವಸ್ತು ಸಂಗ್ರಹಾಲಯಗಳ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದೇ ನಮ್ಮ ಉದ್ದೇಶವಾಗಿದೆ ಎನ್ನುತ್ತಾರೆ ಬಸವರಾಜ ದಲಾಲ. ಒಂದು ಎಕರೆ ತೋಟದ ಮೈದಾನದಲ್ಲಿ ಅನೇಕ ತೆಂಗಿನ ಮರಗಳು, ವಿವಿಧ ರೀತಿಯ ಹೂವುಗಳನ್ನು ನೆಟ್ಟಿದ್ದೇವೆ. ಇತಿಹಾಸದ ಅವಶೇಷಗಳನ್ನು ಸಂರಕ್ಷಿಸುವ, ಅಧ್ಯಯನ ಮಾಡುವ ಮತ್ತು ಪ್ರದರ್ಶಿಸುವ ಸಂಸ್ಥೆಗಳಾಗಿ ವಸ್ತು ಸಂಗ್ರಹಾಲಯಗಳ ಪಾತ್ರವನ್ನು ಇದು ಎತ್ತಿ ಹಿಡಿಯುತ್ತದೆ ಎನ್ನುತ್ತಾರೆ.
ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಈ ಸ್ಥಳವನ್ನು ಹೆಚ್ಚು ಇಷ್ಟ ಪಡುತ್ತಿದ್ದರು. ಅನೇಕ ಬಾರಿ ಇಲ್ಲಿಯೇ ಉಳಿದುಕೊಳ್ಳುತ್ತಿದ್ದರು. ಅವರಿಗೆ ಒಂದು ಉತ್ತಮವಾದ ಕೊಠಡಿ ಕೂಡ ನಿರ್ಮಿಸಿದ್ದೆವು, ಅವರು ಬಳಸಿದ ಈ ಕೊಠಡಿಯನ್ನು ಇಂದಿಗೂ ನಾವು ದೇವಾಲಯದಂತೆ ಬಳಸುತ್ತೇವೆ ಎನ್ನುತ್ತಾರೆ ಇವರು.
ಇದನ್ನು ನೋಡಲು ನಾಡಿನ ಅನೇಕ ಶ್ರೀಗಳು, ರಾಜಕೀಯ ಮುಖಂಡರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಬರುತ್ತಿದ್ದು, ಉಚಿತ ಪ್ರದರ್ಶನಕ್ಕೆ ದಲಾಲ್ ಸಹೋದರರು ವ್ಯವಸ್ಥೆಗೊಳಿಸಿದ್ದಾರೆ.
- ಬಸವರಾಜ ದಲಾಲ ವಸ್ತು ಸಂಗ್ರಹಾಲಯ ಮಾಲೀಕರು