ಮಂಜುನಾಥ ಕೆ.ಎಂ.
ಕೊಲೆ ಆರೋಪದಡಿ ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದ ಜೈಲಿನಲ್ಲಿದ್ದ ನಟ ದರ್ಶನ್, ಜೈಲಿನಲ್ಲಿ ರಾಜಾತಿಥ್ಯ ಹಿನ್ನೆಲೆಯಲ್ಲಿ ಬಳ್ಳಾರಿ ಜೈಲಿಗೆ ಶಿಫ್ಟ್ ಆದರು. ಬಳ್ಳಾರಿ ಜೈಲಿನಲ್ಲಿ ಹೆಚ್ಚುವರಿ ಸೌಕರ್ಯಕ್ಕಾಗಿ ನಟನ ಮನವಿ, ಅಧಿಕಾರಿಗಳ ನಿರಾಕರಣೆ, ಆರೋಗ್ಯ ಸಂಬಂಧಿ ಸಮಸ್ಯೆಗಳು ಹೆಚ್ಚು ಚರ್ಚಿತಗೊಂಡವು. ಬಳ್ಳಾರಿ ಜೈಲಿನಿಂದ ಜಾಮೀನು ಪಡೆದು ತೆರಳುವವರೆಗೆ ದರ್ಶನ್ ನಾನಾ ಕಾರಣಗಳಿಂದ ಸುದ್ದಿಯಲ್ಲಿದ್ದರು.
ಬೆಂಗಳೂರಿನ ಕೇಂದ್ರ ಕಾರಾಗೃಹದಿಂದ ಬಳ್ಳಾರಿ ಜೈಲಿಗೆ 2024ರ ಆಗಸ್ಟ್ 29ರಂದು ಶಿಫ್ಟ್ ಆದ ದರ್ಶನ್ ಗೆ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿನ ಬಿಗಿ ನಿಯಮ ನುಂಗದ ತುತ್ತಾಯಿತು. ಸಮಯ ಕಳೆಯಲು ಟಿವಿ, ಮೆತ್ತನೆ ಹಾಸಿಗೆ, ದಿಂಬು, ಸರ್ಜಿಕಲ್ ಚೇರ್, ಶೌಚಕ್ಕೆ ವೆಸ್ಟನ್ ಕಮೋಡ್ ಬೇಕು ಎಂಬ ನಟ ದರ್ಶನ್ ಬೇಡಿಕೆಗಳನ್ನು ಜೈಲಿನ ಅಧಿಕಾರಿಗಳು ತಿರಸ್ಕರಿಸಿದರು. ಬೆನ್ನುನೋವಿನ ಸಮಸ್ಯೆ ಕುರಿತು ವೈದ್ಯರು ಖಚಿತಪಡಿಸಿದ ಬಳಿಕ ಸರ್ಜಿಕಲ್ ಚೇರ್ ನೀಡಲಾಯಿತು.ದರ್ಶನ್ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇಟ್ಟ ಜೈಲಿನ ಅಧಿಕಾರಿಗಳು, ನಿಯಮ ಮೀರಿ ಯಾವುದೇ ಸೌಲಭ್ಯ ನೀಡದಿರುವುದು ದರ್ಶನ್ಗೆ ನುಂಗದ ತುತ್ತಾಗಿತ್ತು. ತೀವ್ರ ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ನಟ ದರ್ಶನ್ಗೆ ನಗರದ ಬಿಮ್ಸ್ ಆಸ್ಪತ್ರೆಯಲ್ಲಿ ಎಂಆರ್ಐ ಸ್ಕ್ಯಾನ್ ಮಾಡಿಸಲಾಯಿತು. ದರ್ಶನ್ ಬೆನ್ನುನೋವು ಉಲ್ಬಣಗೊಂಡಿದೆ. ಆರೋಗ್ಯದಲ್ಲಿ ವ್ಯತ್ಯಯವಾಗಿದೆ ಎಂದು ವೈದ್ಯಕೀಯ ವರದಿ ಬಂದ ಬಳಿಕವಷ್ಟೇ ದರ್ಶನ್ಗೆ ನ್ಯಾಯಾಲಯದಲ್ಲಿ ಷರತ್ತುಬದ್ಧ ಮಧ್ಯಂತರ ಜಾಮೀನು ದೊರೆಯಿತು. 2024ರ ಅಕ್ಟೋಬರ್ 30ರಂದು ದರ್ಶನ್ ಬಳ್ಳಾರಿ ಜೈಲಿಂದ ಬಿಡುಗಡೆಗೊಂಡು ಬೆಂಗಳೂರಿಗೆ ತೆರಳಿದರು.
ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಜಾಡು ಹಿಡಿದು ಹೊರಟ ರಾಷ್ಟ್ರೀಯ ತನಿಖಾ ದಳ ಅಧಿಕಾರಿಗಳು ಬಳ್ಳಾರಿಯ ಕೌಲ್ಬಜಾರ್ ಪ್ರದೇಶದಲ್ಲಿ ಅಡಗಿದ್ದ ನಿಷೇಧಿತ ಪಿಎಫ್ಐ ಸಂಘಟನೆ ಜತೆ ನಂಟು ಹೊಂದಿದ್ದ ಮಿನಾಜ್ ಅಲಿಯಾಸ್ ಎಂ.ಡಿ. ಸುಲೇಮಾನ್ ಹಾಗೂ ಸೈಯದ್ ಸಮೀರ್ ಎಂಬುವರನ್ನು ಕಳೆದ ಮಾರ್ಚ್ 12 ರಂದು ಬಂಧಿಸಿದ್ದರು. ಕಚ್ಚಾ ಸಾಮಗ್ರಿಗಳನ್ನು ಬಳಸಿಕೊಂಡು ರಾಜ್ಯದಲ್ಲಿ ಸುಧಾರಿತ ಬಾಂಬ್ಗಳನ್ನು ತಯಾರಿಸಿ ದೇಶದಲ್ಲಿ ಉಗ್ರ ಕೃತ್ಯ ಎಸಗಲು ಇವರು ಸಂಚು ರೂಪಿಸಿದ್ದರು ಎಂಬ ಆಘಾತಕಾರಿ ಸಂಗತಿ ತನಿಖೆ ವೇಳೆ ಬಹಿರಂಗಗೊಂಡಿತ್ತು.
ಜಾರಿ ನಿರ್ದೇಶನಾಲಯ ದಾಳಿ:
ವಾಲ್ಮೀಕಿ ಹಗರಣದ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಮಾಜಿ ಸಚಿವ ಬಿ. ನಾಗೇಂದ್ರ ನಿವಾಸ, ಆಪ್ತರ ನಿವಾಸಗಳ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದರು. ಇದೇ ವೇಳೆ ಬೆಂಗಳೂರಿನಲ್ಲಿರುವ ನಾಗೇಂದ್ರ ನಿವಾಸದ ಮೇಲೂ ಅಧಿಕಾರಿಗಳು ದಾಳಿ ನಡೆಸಿ, ಮಾಹಿತಿಯನ್ನು ಸಂಗ್ರಹಿಸಿದ್ದರು. ಕಳೆದ ನವೆಂಬರ್ 30ರಂದು ಬಳ್ಳಾರಿ ತಾಲೂಕಿನ ಚೇಳ್ಳಗುರ್ಕಿ ಗ್ರಾಮ ಮತ್ತು ಆಂಧ್ರಪ್ರದೇಶದ ವಿಡಪನಕಲ್ಲು ಗ್ರಾಮದ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬಿಮ್ಸ್ ಆಸ್ಪತ್ರೆಯ ಇಬ್ಬರು ತಜ್ಞ ವೈದ್ಯರು ಮೃತಪಟ್ಟರು. ವೈದ್ಯರಾದ ಗೋವಿಂದರಾಜುಲು, ಯೋಗೀಶ್ ಅವರ ಸಾವು ಬೆಚ್ಚಿಬೀಳಿಸಿತ್ತು.