ಸಂಸ್ಮರಣೆ, ಆರಾಧನೆ
ಕೊಪ್ಪ: ಸತ್ತವರು ಯಾರು ಸಾಯುವುದಿಲ್ಲ. ಆದರೆ ಅವರನ್ನು ಮರೆತಾಗ ಮಾತ್ರ ಅವರು ಸಾಯುತ್ತಾರೆ ಎನ್ನುವಂತೆ, ನಾವುಡ ಹಾಗೂ ಧಾರೇಶ್ವರರು ಭೌತಿಕವಾಗಿ ಇಂದು ನಮ್ಮೊಂದಿಗಿಲ್ಲವಾದರೂ ಅವರ ಅಭಿಮಾನಿಗಳ ಮನದಲ್ಲಿರುವ ಅವರಿಗೆ ಸಾವಿಲ್ಲ, ಅವರು ಅಮರರಾಗಿದ್ದಾರೆ ಎಂದು ಹರಿಹರಪುರದ ಟಿ.ಕೆ.ಮಂಜುನಾಥ್ ಹೇಳಿದರು.ಹರಿಹರಪುರದ ಶ್ರೀ ಮಲ್ಲೇಶಯ್ಯ ಛತ್ರದಲ್ಲಿ ಯಕ್ಷಗಾನದ ಕ್ರಾಂತಿ ಕಂಠ, ರಸರಾಗ ಚಕ್ರವರ್ತಿ ಭಾಗವತ ದಿವಂಗತ ಕಾಳಿಂಗ ನಾವುಡ ಹಾಗೂ ಕರಾವಳಿ ಕೋಗಿಲೆ, ಯಕ್ಷ ಸಂಗೀತ ಸ್ವರಸಾರ್ವಭೌಮ ಭಾಗವತ ದಿ. ಸುಬ್ರಹ್ಮಣ್ಯ ಧಾರೇಶ್ವರರ ಸಂಸ್ಮರಣೆ ಹಾಗೂ ಗಾನಾರಾಧನೆಯಲ್ಲಿ ಮಾತನಾಡಿದರು.
ನಾವುಡ, ಧಾರೇಶ್ವರರು ಯಕ್ಷಗಾನ ರಂಗಕ್ಕೆ ಅನುಪಮ ಕೊಡುಗೆ ನೀಡಿದ್ದಾರೆ. ಅವರಿಂದಾಗಿ ಯಕ್ಷಗಾನ ಭಾಗವತಿಕೆ ಎನ್ನುವುದು ಹೊಸ ವಿನ್ಯಾಸದೊಡನೆ ಮೇಳೈಸಿತು. ಇಂದಿಗೂ ಯಕ್ಷಗಾನ ರಂಗದಲ್ಲಿ ನಾವುಡರ ಶೈಲಿ ಹಾಗೂ ಧಾರೇಶ್ವರ ಶೈಲಿ ಎನ್ನುವುದು ಜನಜನಿತವಾಗಿದೆ ಎಂದು ತಿಳಿಸಿದರು.ರೋಟರಿ ಸಮುದಾಯದಳ, ಯಕ್ಷ ವೇದಿಕೆ ಹಾಗೂ ಕಲಾಭಿಮಾನಿ ಬಳಗ ಹರಿಹರಪುರ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮವನ್ನು ಕೊಪ್ಪ ತಾಲೂಕು ಕಸಾಪ ಅಧ್ಯಕ್ಷ ಜೆ.ಎಂ.ಶ್ರೀಹರ್ಷ, ಆರ್ಸಿಸಿ ಅಧ್ಯಕ್ಷ ಶ್ರೀನಿವಾಸಮೂರ್ತಿ ಹಾಗೂ ಯಕ್ಷ ವೇದಿಕೆ ಮಂಜುನಾಥ ಸೇರಿಗಾರ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಬೆಂಗಳೂರಿನ ಕಲಾವಿದರ ರಕ್ಷಣಾ ವೇದಿಕೆ ಹಾಗೂ ಕಲಾವಿದರ ಬೆಳಕು ಕುಂದಾಪುರ ಈ ಸಂಸ್ಥೆಯವರು ನೀಡಿದ ಕರುನಾಡ ಗಾನಗಂಧರ್ವ ಪ್ರಶಸ್ತಿಗೆ ಭಾಜನರಾದ ಹರಿಹರಪುರದ ಶಿವಶಂಕರ ಭಾಗವತರನ್ನು ಅಭಿನಂದಿಸಲಾಯಿತು.ಹೆಸರಾಂತ ಭಾಗವತರಾದ ಕಾವ್ಯಶ್ರೀ ಆಜೇರು ತಮ್ಮ ಸುಶ್ರಾವ್ಯ ಕಂಠಸಿರಿಯಿಂದ ಬೇರೆ ಬೇರೆ ಪ್ರಸಂಗಗಳಿಂದ ಆಯ್ದ ವೀರ, ಶೃಂಗಾರ, ಹಾಸ್ಯ, ಕರುಣ, ದುಃಖ ಸೇರಿ ಬೇರೆ ಬೇರೆ ರಸಭಾವಗಳ ಪದ್ಯಗಳನ್ನು ಸುಮಧುರವಾಗಿ ಹಾಡಿದರು.
ಡಾ.ಅಶ್ವಿನ್ ಶಾಸ್ತ್ರಿ, ಅಗಲಿ ನಾಗೇಶ್ ರಾವ್, ಎ.ಒ.ವೆಂಕಟೇಶ್, ಎಚ್.ಕೆ.ಗೋಪಾಲ್, ಡಾ.ಶಶಿಭೂಷಣ್, ಅರವಿಂದ್ ಮೇಲ್ಕೊಪ್ಪ, ಕಲಾಭಿಮಾನಿಗಳು ಭಾಗವಹಿಸಿದ್ದರು.