ಮರಿಯಮ್ಮನಹಳ್ಳಿ: ಸಾಮೂಹಿಕ ವಿವಾಹದಲ್ಲಿ ಮದುವೆಯಾಗುವುದರಿಂದ ಆರ್ಥಿಕ ಹೊರ ತಡೆಯಬಹುದು. ಆರ್ಥಿಕವಾಗಿ ಸಂಕಷ್ಟ ಎದುರುಸುತ್ತಿರುವ ಕುಟುಂಬಗಳಿಗೆ ಸಾಮೂಹಿಕ ವಿವಾಹಗಳು ಸಹಕಾರಿಯಾಗಿವೆ ಎಂದು ಶಾಸಕ ಕೆ. ನೇಮರಾಜ್ ನಾಯ್ಕ ಹೇಳಿದರು.ಸಮೀಪದ 114 ಡಣಾಪುರ ಗ್ರಾಮದಲ್ಲಿ ಕಲಬುರ್ಗಿ ಶರಣಬಸವೇಶ್ವರ 25ನೇ ವರ್ಷದ ಪುರಾಣ ಮಹಾಮಂಗಲ ಕಾರ್ಯಕ್ರಮ ಹಾಗೂ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಮತ್ತು ತುಲಾಭಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನವ ದಂಪತಿಗಳು ಆದರ್ಶ ಗುಣಗಳನ್ನು ಅಳವಡಿಸಿಕೊಂಡು ಪರಸ್ಪರ ಹೊಂದಾಣಿಕೆಯಿಂದ ಜೀವನ ನಡೆಸಬೇಕು. ಮಹಿಳೆಯರು ಮಹಾಲಕ್ಷ್ಮಿ ಸ್ವರೂಪಳು ಯಾವುದೇ ಕಾರಣಕ್ಕೂ ಮಹಿಳೆಯರ ಮನಸ್ಸು ನೋಯಿಸಬೇಡಿ. ತಮ್ಮ ತಂದೆ ತಾಯಿಗಳಂತೆ ಅತ್ತೆ, ಮಾವನವರನ್ನು ಗೌರವದಿಂದ ಕಾಣಬೇಕು. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಧಾರ್ಮಿಕ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಗದಗಿನ ವೀರೇಶ್ವರ ಪುಣ್ಯಾಶ್ರಮದ ಕಲ್ಕಯ್ಯಜ್ಜ ತುಲಭಾರ ಸ್ವೀಕರಿಸಿ ಮಾತನಾಡಿ, ಡಣಾಪುರಗ್ರಾಮದಲ್ಲಿ ಕಲಬುರ್ಗಿ ಶರಣ ಬಸವೇಶ್ವರ ಪುರಾಣ ಸಮಿತಿಯು ಕಳೆದ 25 ವರ್ಷಗಳಿಂದ ಸಾಮೂಹಿಕ ವಿವಾಹ ಹಮ್ಮಿಕೊಂಡು ಸಾರ್ಥಕ ಸೇವೆಯನ್ನು ಕೈಗೊಂಡು, ಪುಣ್ಯದ ಕೆಲಸದಲ್ಲಿ ತೊಡಗಿಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಅವರು ಹೇಳಿದರು.ಸಾಮೂಹಿಕ ವಿವಾಹದಲ್ಲಿ 10 ಜೋಡಿಗಳು ನೂತನ ದಾಂಪತ್ಯಕ್ಕೆ ಕಾಲಿಟ್ಟರು. ನಂತರ ಗದಗಿನ ವೀರೇಶ್ವರ ಪುಣ್ಯಾಶ್ರಮದ ಕಲ್ಯಯ್ಯಜ್ಜ ಅವರ 2970ನೇ ತುಲಾಭಾರ ಹಾಗೂ ಮರಿಯಮ್ಮನಹಳ್ಳಿ ಗುರುಪಾದ ದೇವರ ಮಠದ ಮಲ್ಲಿಕಾರ್ಜುನ ಶಿವಾಚಾರ್ಯರ ತುಲಾಭಾರ ಕಾರ್ಯಕ್ರಮ ಇದೇ ಸಂದರ್ಭದಲ್ಲಿ ನಡೆಯಿತು.
ಗರಗ ನಾಗಲಾಪುರದ ಗುರು ಒಪ್ಪತ್ತೇಶ್ವರ ಮಠದ ನಿರಂಜನ ಪ್ರಭು ಶ್ರೀ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಕುರಿ ಶಿವಮೂರ್ತಿ, ಸ್ಥಳೀಯ ಮುಖಂಡರಾದ ಎಸ್. ಕೃಷ್ಣನಾಯ್ಕ್, ಕಿಚಿಡಿ ಕೊಟ್ರೇಶ್ ಮಾತನಾಡಿದರು.ಗ್ರಾಪಂ ಅಧ್ಯಕ್ಷೆ ದುರುಗಮ್ಮ, ಮೈರಾಡ ಸಂಸ್ಥೆಯ ವೆಂಕಟರೆಡ್ಡಿ ಎಸ್ ಗಿರಣಿ, ಗ್ರಾಪಂ ಸದಸ್ಯರಾದ ಪಾರ್ವತಮ್ಮ ಹನುಮಂತಪ್ಪ, ಬಿ. ಬಸವರಾಜ, ಕೆ.ಎಂ. ಮಂಜಯ್ಯ ಸ್ವಾಮಿ, ಎನ್. ದಾಸಪ್ಪ, ಜ್ಯೋತಿ ಯಮನೂರ, ಸ್ಥಳೀಯ ಮುಖಂಡರಾದ ನಿಂಗಪ್ಪ, ಷಣ್ಮುಖ, ಈರಪ್ಪ, ಭರತ್, ರಾಘವೇಂದ್ರ, ಪಿ. ಓಬಜ್ಜ, ಬಿ.ಎಸ್. ರಾಜಪ್ಪ, ಗುಂಡಾ ಸೋಮಣ್ಣ, ಗುಂಡಾ ಕೃಷ್ಣ, ವೇಣುಗೋಪಾಲ, ಕುರಿ ಹುಲುಗಪ್ಪ ಭಾಗವಹಿಸಿದ್ದರು.