ಕೊನೆಯುಸಿರು ಇರುವವರೆಗೊ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವೆ: ಬಸವರಾಜ ರಾಯರಡ್ಡಿ

KannadaprabhaNewsNetwork | Published : Nov 6, 2024 11:45 PM

ಸಾರಾಂಶ

ಯಾವುದೇ ಹಣ, ಅಂತಸ್ತು ಗಳಿಸಬೇಕೆನ್ನುವ ಸ್ವಾರ್ಥಕ್ಕಾಗಿ ರಾಜಕಾರಣ ಮಾಡಲು ಬಂದಿಲ್ಲ.

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪ್ರಾರಂಭೋತ್ಸವಕ್ಕೆ ಚಾಲನೆ

ಕನ್ನಡಪ್ರಭ ವಾರ್ತೆ ಯಲಬುರ್ಗಾ

ಈ ಕ್ಷೇತ್ರ ಸಾಕಷ್ಟು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ತೀರಾ ಹಿಂದುಳಿದಿದೆ. ಇದನ್ನು ಶೈಕ್ಷಣಿಕವಾಗಿ ಅಭಿವೃದ್ಧಿ ಮಾಡುವ ಛಲ ಇಟ್ಟುಕೊಂಡು ರಾಜಕಾರಣಕ್ಕೆ ಬಂದಿದ್ದೇನೆ. ವಿನಃ ಯಾವುದೇ ಹಣ, ಅಂತಸ್ತು ಗಳಿಸಬೇಕೆನ್ನುವ ಸ್ವಾರ್ಥಕ್ಕಾಗಿ ರಾಜಕಾರಣ ಮಾಡಲು ಬಂದಿಲ್ಲ. ನನ್ನ ಕೊನೆಯುಸಿರು ಇರುವವರೆಗೊ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.

ಪಟ್ಟಣದ ಕನಕ ಪುರಭವನದಲ್ಲಿ ಬುಧವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಭಿವೃದ್ಧಿಗಾಗಿ ಸರ್ಕಾರದಿಂದ ಎಷ್ಟು ಬೇಕು ಅಷ್ಟು ಅನುದಾನ ತರುತ್ತೇನೆ. ಆದರೆ ಕಟ್ಟಡಕ್ಕೆ ಜನತೆ ಭೂಮಿ ನೀಡುತ್ತಿಲ್ಲ. ಹೀಗಾಗಿ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ಸರ್ಕಾರದಲ್ಲಿ ಹಣಕ್ಕೆ ಯಾವ ಕೊರತೆಯಿಲ್ಲ. ಆದರೆ ವಿರೋಧ ಪಕ್ಷದವರು ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ, ಇದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.

ಶಿಕ್ಷಣ ಇಲಾಖೆಯ ಕಟ್ಟಡ ಬಹುವರ್ಷಗಳಿಂದ ಶಿಥಲಗೊಂಡ ಕಟ್ಟಡದಲ್ಲೇ ನೌಕರರು ಕರ್ತವ್ಯ ನಿರ್ವೆಹಿಸುವುದನ್ನು ಗಮನಿಸಿ ಕಲ್ಯಾಣ ಕರ್ನಾಟಕ ಅನುದಾನದಡಿ ₹ ೨ಕೋಟಿ ಮಂಜೂರು ಮಾಡಿ ಹೊಸ ಸುಸಜ್ಜಿತ ಕಟ್ಟಡ ನಿರ್ಮಿಸಿಕೊಡಲಾಗುವುದು. ಮುಂದಿನ ವಾರದಲ್ಲೇ ಟೆಂಡರ್ ಕರೆಯಲಾಗುತ್ತದೆ. ಇನ್ನೂ ಸಿಡಿಪಿಒ ನೂತನ ಕಟ್ಟಡಕ್ಕೆ ₹೩.೮೦ಕೋಟಿ, ತಾಲೂಕು ಪಂಚಾಯಿತಿ ಕಟ್ಟಡಕ್ಕೆ ₹೩.೫೦ಕೋಟಿ, ಯಲಬುರ್ಗಾ ಮತ್ತು ಕುಕನೂರ ಪಟ್ಟಣಕ್ಕೆ ಬೈಯಾಪಾಸ್ ಹೆದ್ದಾರಿ ರಸ್ತೆ ಸೇರಿದಂತೆ ೧೫ ಹೊಸ ಬಸ್ ನಿಲ್ದಾಣಗಳು, ಹೊಸ ಕೆರೆ ನಿರ್ಮಾಣ, ಕಲ್ಯಾಣ ಮಂಟಪಗಳು ಇವುಗಳಿಗೆ ಕೋಟ್ಯಾಂತರ ಅನುದಾನವಿದ್ದರೂ ಸಮರ್ಪಕ ಭೂಮಿ ನೀಡುತ್ತಿಲ್ಲ. ಇದರಿಂದ ತಾಲೂಕಿನ ಅಭಿವೃದ್ಧಿಗೆ ತೊಂದರೆ ಆಗುತ್ತಿದೆ. ಜನರು ಪಕ್ಷಬೇಧ ಮರೆತು ಅಭಿವೃದ್ಧಿಗೆ ಕೈಜೋಡಿಸಿದಾಗ ಮಾದರಿ ತಾಲೂಕು ಆಗಲು ಅನುಕೂಲವಾಗುತ್ತದೆ ಎಂದು ಹೇಳಿದರು.

ಮಳೆ ಬಂತೆಂದರೆ ಇಡೀ ಕಟ್ಟಡದಿಂದ ನೀರು ಹರಿದು ಮೇಲ್ಚಾವಣಿ ದುರಸ್ತಿಗೊಂಡಿತ್ತು. ಇದಕ್ಕೆ ಶಾಶ್ವತ ಪರಿಹಾರ ನೀಡಬೇಕೆನ್ನುವ ಉದ್ದೇಶದಿಂದ ಇದೀಗ ತಾತ್ಕಾಲಿಕವಾಗಿ ಕನಕ ಪುರಭವನದಲ್ಲಿ ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಾಡಲಾಗಿದೆ. ಶಿಕ್ಷಣ ಇಲಾಖೆ ಬಹುವರ್ಷಗಳಿಂದ ಕಟ್ಟಡವಿಲ್ಲದೆ ನಿತ್ಯ ಜೀವ ಭಯದಲ್ಲಿ ನೌಕರರು ಕರ್ತವ್ಯ ನಿರ್ವೆಹಿಸುತ್ತಿರುವುದನ್ನು ಮನಗಂಡು ₹೨ ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಬೇಕೆನ್ನುವ ನನ್ನ ಬಹುದಶಕಗಳ ಕನಸು ಇಂದು ನನಸಾಗಿದೆ. ಶಿಕ್ಷಕರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಜಿಲ್ಲೆಯಲ್ಲಿ ಉತ್ತಮ ಫಲಿತಾಂಶ ತಂದು ಕೊಡುವ ಪ್ರಾಮಾಣಿಕ ಕಾರ್ಯವನ್ನು ಅಧಿಕಾರಿಗಳು ಮಾಡಬೇಕು ಎಂದರು.

ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ ಪಾಟೀಲ ಹಾಗೂ ಡಿಡಿಪಿಐ ಶ್ರೀಶೈಲ್ ಬಿರಾದಾರ ಮಾತನಾಡಿದರು.

ಈ ಸಂದರ್ಭ ಪಪಂ ಅಧ್ಯಕ್ಷ ಅಂದಯ್ಯ ಕಳ್ಳಿಮಠ, ತಹಸೀಲ್ದಾರ ಬಸವರಾಜ ತೆನ್ನಳ್ಳಿ, ಮುಖ್ಯಾಧಿಕಾರಿ ನಾಗೇಶ, ನಿವೃತ್ತ ಡಿಡಿಪಿಐ ಎಸ್.ಡಿ. ಗಾಂಜಿ, ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ವೀರಣಗೌಡ ಬಳೂಟಗಿ, ಕೆರಿಬಸಪ್ಪ ನಿಡಗುಂದಿ, ಸತ್ಯನಾರಾಯಣಪ್ಪ ಹರಪನಹಳ್ಳಿ ಸೇರಿದಂತೆ ಮತ್ತಿತರರು ಇದ್ದರು.

Share this article