ಇತಿಹಾಸ ಬಲ್ಲವರು, ಇತಿಹಾಸ ಸೃಷ್ಟಿಸ ಬಲ್ಲರು

KannadaprabhaNewsNetwork | Published : Nov 23, 2024 12:35 AM

ಸಾರಾಂಶ

ಪ್ರಾಚ್ಯಾವಶೇಷಗಳ ಅನ್ವೇಷಣೆ ಕಾರ್ಯವು ವಿದ್ಯಾರ್ಥಿ ಜೀವನದಲ್ಲಿಯೇ ಅತ್ಯುತ್ತಮ ಪ್ರಾಯೋಗಿಕ ಮತ್ತು ಉತ್ತಮ ಅನುಭವ ನೀಡುವ ಕೆಲಸವಾಗಲಿದೆ

ಗದಗ: ಇತಿಹಾಸ ಬಲ್ಲವರು ಮಾತ್ರ ಇತಿಹಾಸ ಸೃಷ್ಟಿಸುತ್ತಾರೆ. ಪಾರಂಪರಿಕ ಲಕ್ಕುಂಡಿ ಕ್ಷೇತ್ರದ ಅನ್ವೇಷಣೆ ಮೂಲಕ ಇತಿಹಾಸ ತಿಳಿದು ಲಭ್ಯವಿರುವ ಪ್ರಾಚ್ಯ ವಸ್ತು ಸಂರಕ್ಷಣೆ ಮಾಡುವುದು ನಮ್ಮೇಲ್ಲರ ಕರ್ತವ್ಯವಾಗಿದೆ ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.

ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ ನಲ್ಲಿ ಶುಕ್ರವಾರ ಪ್ರವಾಸೋದ್ಯಮ ಇಲಾಖೆ ಬೆಂಗಳೂರು, ಮೈಸೂರಿನ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಜಿಲ್ಲಾಡಳಿತ, ಜಿಪಂ, ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಗ್ರಾಪಂ ಲಕ್ಕುಂಡಿ ಸಹಯೋಗದಲ್ಲಿ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿ ಪ್ರಾಚ್ಯಾವಶೇಷಗಳ ಅನ್ವೇಷಣೆ ನಿಮಿತ್ತ ಅಧಿಕಾರಿಗಳಿಗೆ ಹಾಗೂ ಸ್ವಯಂ ಸೇವಕರಿಗೆ ನಡೆದ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಲಕ್ಕುಂಡಿಯ ಮನೆಗಳಲ್ಲಿ, ಅಂಗಳದಲ್ಲಿ, ತಿಪ್ಪೆಗಳಲ್ಲಿ ಸ್ಮಾರಕಗಳು ಇದೆ. ಜನರಿಗೆ ಅದರ ಬಗ್ಗೆ ಅರಿವಿಲ್ಲದೆ ಇದ್ದರು, ಲಭ್ಯವಿರುವ ಶಾಸನ, ಶಿಲೆ, ಸ್ಮಾರಕ, ನಾಣ್ಯ ಕುರಿತು ಜನರಲ್ಲಿ ಅರಿವು ಪ್ರಾಚ್ಯಾ ವಸ್ತುಗಳನ್ನು ಅವರಿಂದ ಪಡೆದುಕೊಂಡು ಶೇಖರಣೆ ಮಾಡುವುದು ಈ ಕಾರ್ಯಾಗಾರದ ಮುಖ್ಯ ಉದ್ದೇಶವಾಗಿದೆ. ಲಕ್ಕುಂಡಿಗೆ ತೆರಳಿ ಸಚಿವರ ಸಂದೇಶ ಪತ್ರ ನೀಡಿ ಯಾವ ಓಣಿಗಳಲ್ಲಿ ಯಾರ ಮನೆಗಳಲ್ಲಿ ಸ್ಮಾರಕಗಳು ಲಭ್ಯವಿದೆ ಎನ್ನುವ ಮಾಹಿತಿ ಕಲೆಹಾಕಿ ಪಟ್ಟಿ ಮಾಡಿ ಅಂತಹ ಮನೆಗಳನ್ನು ಗುರುತು ಮಾಡಬೇಕು ಎಂದರು.

ಈ ಪ್ರಾಚ್ಯಾವಶೇಷಗಳ ಅನ್ವೇಷಣೆ ಕಾರ್ಯವು ವಿದ್ಯಾರ್ಥಿ ಜೀವನದಲ್ಲಿಯೇ ಅತ್ಯುತ್ತಮ ಪ್ರಾಯೋಗಿಕ ಮತ್ತು ಉತ್ತಮ ಅನುಭವ ನೀಡುವ ಕೆಲಸವಾಗಲಿದೆ. ವಿದ್ಯಾರ್ಥಿಗಳು ಈ ಸಮಯ ಸದ್ಬಳಕೆ ಮಾಡಿಕೊಂಡು ಎಲ್ಲರಿಗೂ ಸಹಕಾರ ನೀಡಿ ಪ್ರಾಚ್ಯಾವಶೇಷಗಳ ಅನ್ವೇಷಣೆ ಯಶಸ್ವಿಗೊಳಿಸಬೇಕು ಎಂದು ಸೂಚಿಸಿದರು.

ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ನಿರ್ದೇಶಕಿ ಸ್ಮಿತಾ ಮಾತನಾಡಿ, ರಾಜರ ಕಾಲದಲ್ಲಿ ಲಕ್ಕುಂಡಿಯಲ್ಲಿ ಠಂಕಸಾಲೆ ಇತ್ತು ಎಂದು ಶಾಸನಗಳಲ್ಲಿ ಉಲ್ಲೇಖವಿದೆ, ಹಾಗಾಗಿ ಲಕ್ಕುಂಡಿಯಲ್ಲಿ ಮಹತ್ವ ಹಾಗೂ ಮೌಲ್ಯವಿತವಾದ ಶಾಸನ ನಾಣ್ಯ ಸ್ಮಾರಕದ ಸಂಪತ್ತಿದೆ. ಮಣ್ಣಿನಲ್ಲಿ ಹುದುಗಿ ಹೋದ ಮರಳಿ ತೆಗೆಯುವ ಕಾರ್ಯ ಆಗಬೇಕು ಪ್ರಾಚ್ಯಾವಶೇಷಗಳ ಅನ್ವೇಷಣೆಯಲ್ಲಿ ಕಣ್ಣಿಗೆ ಕಾಣುವ ಶಾಸನ, ಶಿಲ್ಪಕಲೆ ದೇವಾಲಯ ಕುರಿತು ಸ್ಥಳೀಯರಿಗೆ ಇರುವ ಮಾಹಿತಿ ಅವರ ಆಚರಣೆ ದಾಖಲಿಸಿಕೊಂಡು ಪ್ರತಿಯೊಬ್ಬರ ಸಹಕಾರದಿಂದ ಲಕ್ಕುಂಡಿಯಲ್ಲಿ ಲಭ್ಯವಾಗುವ ಪ್ರಾಚ್ಯವಸ್ತು ಸಂಗ್ರಹಿಸಿ ವಸ್ತು ಸಂಗ್ರಹಾಲಯ ಮಾಡಿ ಜಾಗತಿಕವಾಗಿ ಲಕ್ಕುಂಡಿಯ ಬಗ್ಗೆ ಗಮನ ಸೆಳೆದು ವಿಶ್ವದ ಪ್ರಸಿದ್ಧ ತಾಣವಾಗಿ ಮಾಡುವ ಕಾರ್ಯವಾಗಬೇಕು ಎಂದರು.

ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಆಯುಕ್ತ ಶರಣು ಗೋಗೇರಿ ಮಾತನಾಡಿದರು. ಈ ವೇಳೆ ಎನ್.ಎಸ್.ಎಸ್, ಎನ್.ಸಿ.ಸಿ, ಸ್ವಯಂ ಸೇವಕರು, ಪ್ರವಾಸಿ ಗೈಡ್, ಇತಿಹಾಸ ಉಪನ್ಯಾಸಕರು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ವಿದ್ಯಾರ್ಥಿಗಳು ಇದ್ದರು.

Share this article