ಕನ್ನಡಪ್ರಭ ವಾರ್ತೆ ಬಳ್ಳಾರಿ
12ನೇ ಶತಮಾನದ ಶರಣರು ಮೌಢ್ಯ ಹಾಗೂ ಕಂದಾಚಾರಗಳನ್ನು ತೀವ್ರವಾಗಿ ವಿರೋಧಿಸುತ್ತಿದ್ದರು. ಜನಮನದಲ್ಲಿ ವೈಜ್ಞಾನಿಕ ಮನೋಭಾವ ಬಿತ್ತಿ, ಸತ್ಯದ ಅರಿವು ನೀಡಿದರು ಎಂದು ಲೇಖಕ ವೀರೇಂದ್ರ ರಾವಿಹಾಳ್ ನುಡಿದರುನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಕದಳಿ ವೇದಿಕೆ ಮತ್ತು ಕನ್ನಡ ವಿಭಾಗದ ವತಿಯಿಂದ ಆಯೋಜಿಸಿದ್ದ '''';ವಚನಗಳಲ್ಲಿ ವಿಜ್ಞಾನ ‘ಎನ್ನುವ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು
ಸತ್ಯ ಮತ್ತು ನೇರ ನುಡಿಯ ಅವರ ವಚನಗಳು ನಮಗೆ ಈ ಹೊತ್ತಿಗೂ ಕೈ ದೀವಿಗೆಯಂತೆ ನೆರವಾಗುತ್ತವೆ. ವಿದ್ಯಾರ್ಥಿ-ಯುವ ಸಮುದಾಯ ವಚನಗಳನ್ನು ಅಧ್ಯಯನ ಮಾಡಿ, ಅದರಲ್ಲಿನ ಸತ್ಯಾಸತ್ಯತೆಯನ್ನು ಅರಿಯುವ ಪ್ರಯತ್ನ ಮಾಡಬೇಕು. ಶರಣರ ಆಶಯಗಳನ್ನು ಅರ್ಥ ಮಾಡಿಕೊಂಡು ಸಮಾಜಮುಖಿಯಾಗಿ ಬಾಳಬೇಕು ಎಂದು ಸಲಹೆ ನೀಡಿದರು.ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ಎಸ್.ಟಿ. ನಂದಿಬೇವೂರು, ಪ್ರಕೃತಿಯಲ್ಲಿ ಅಡಕವಾಗಿರುವ ಸತ್ವವನ್ನು ವ್ಯವಸ್ಥಿತವಾಗಿ ಅರಿಯುವುದೇ ವಿಜ್ಞಾನ. ಅರಿತ ವಿಷಯವನ್ನು ಆಚರಣೆಯಲ್ಲಿ ತರುವುದೇ ತಂತ್ರಜ್ಞಾನ. ಶರಣರು ಅರಿತ ಸತ್ಯವನ್ನು ಅನುಷ್ಠಾನಕ್ಕೆ ತರುವುದರ ಮೂಲಕ ತಂತ್ರಜ್ಞಾನಿಗಳೂ ಆಗಿದ್ದಾರೆ ಎಂದು ಅಭಿಪ್ರಾಯ ಪಟ್ಟರು.
ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ಬಿ. ಬಸವನಗೌಡ ಅವರು ಶರಣರು ಸತ್ಯವನ್ನು ತಮ್ಮ ತಾರ್ಕಿಕ ವಿಚಾರಗಳಿಂದ ಸಾಕಾರಗೊಳಿಸಿದರು ಎಂದರು.ಪ್ರಾಂಶುಪಾಲ ಡಾ. ಎಚ್.ಕೆ. ಮಂಜುನಾಥ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ದಸ್ತಗೀರಸಾಬ್ ದಿನ್ನಿ, ಸಂಡೂರು ತಾಲೂಕು ಶಸಾಪ ಅಧ್ಯಕ್ಷ ಬಿ.ನಾಗನಗೌಡ, ಜಿಲ್ಲಾ ಅಧ್ಯಕ್ಷ ಕೆ.ಬಿ.ಸಿದ್ಧಲಿಂಗಪ್ಪ ಇದ್ದರು. ಬಿ. ನಾಗೇಂದ್ರಗೌಡ, ತ್ರಿವೇಣಿ, ಉಮಾಪತಿ ಗೌಡ, ಲಲಿತಮ್ಮ, ನೀಲಾಂಬಿಕೆ, ಕುಸುಮ ಹಿರೇಮಠ, ಡಾ. ಸಿದ್ದೇಶ್ವರಿ, ಜಯರಾಮ್, ವೀಣಾ, ಕೆ.ಬಿ. ಕೊಟ್ರೀಶ್, ಕೆ.ಬಿ. ಸಚ್ಚಿದಾನಂದ, ಮನ್ವಿತಾ ಹಾಗೂ ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು.