ಕನ್ನಡಪ್ರಭ ವಾರ್ತೆ ತುರುವೇಕೆರೆ
ದೇಶದಾದ್ಯಂತ ಆಸ್ತಿಕರ ದೈವವಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅಪಪ್ರಚಾರದಲ್ಲಿ ತೊಡಗಿದ್ದಾರೆ. ಅಂತಹವರ ಮನೆಗಳು ಹಾಗೂ ಅವರ ಕುಟುಂಬ ಸರ್ವನಾಶ ಆಗಲಿದೆ ಎಂದು ಬಿಜೆಪಿಯ ಮಾಜಿ ಶಾಸಕ ಮಸಾಲಾ ಜಯರಾಮ್ ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣದ ಬಾಣಸಂದ್ರ ವೃತ್ತದಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಕೆಲ ಕಾಲ ನಡೆಸಿದ ಪ್ರತಿಭಟನಾ ಮೆರವಣಿಗೆ ವೇಳೆ ಅವರು ಮಾತನಾಡುತ್ತಿದ್ದರು. ಧರ್ಮಸ್ಥಳದ ಬಗ್ಗೆ ಎಡಪಂಥೀಯರು ಅಪ್ರಚಾರ ಮಾಡುತ್ತಲೇ ಇದ್ದಾರೆ. ಈ ಕುಕೃತ್ಯಕ್ಕೆ ಪರೋಕ್ಷವಾಗಿ ಕಾಂಗ್ರೆಸ್ ಸಹಕಾರ ನೀಡುತ್ತಿದೆ. ಶ್ರೀ ಮಂಜುನಾಥ ಎಲ್ಲೆಡೆ ವ್ಯಾಪಿಸಿದ್ದು, ಎಲ್ಲವನ್ನೂ ನೋಡುತ್ತಿದ್ದಾನೆ. ಈಗ ಪಾಪದ ಕೊಡ ತುಂಬುತ್ತಿದೆ. ಈಗ ಅಪಪ್ರಚಾರ ಮಾಡಿದವರು ಜೈಲು ಪಾಲಾಗುವ ಹಂತ ಬರುತ್ತಿದೆ. ಅಪಪ್ರಚಾರದಲ್ಲಿ ತೊಡಗಿರುವವರಿಗೆ ಕಾಂಗ್ರೆಸ್ ಬೆಂಬಲಕ್ಕೆ ನಿಂತಿದೆ. ಈ ಪಕ್ಷಕ್ಕೂ ತಕ್ಕ ಶಾಸ್ತಿ ಕಾದಿದೆ ಎಂದರು. ಹಿಂದೂ ದೇವಾಲಯಗಳನ್ನೇ ಟಾರ್ಗೆಟ್ ಮಾಡಿ ಅಪಪ್ರಚಾರ ಮಾಡುತ್ತಿರುವ ಮುಸುಕುಧಾರಿ, ಸಮೀರ್, ತಿಮ್ಮರೋಡಿ ಸೇರಿದಂತೆ ಹಲವರನ್ನು ಮೊದಲು ಸರ್ಕಾರ ಬ್ರೈನ್ ಮ್ಯಾಪಿಂಗ್ ಮಾಡಬೇಕಿತ್ತು. ಸುಳ್ಳು ಆಪಾದನೆ ಮಾಡಿ ಹತ್ತಾರು ಗುಂಡಿಗಳನ್ನು ತೆಗೆಸಿ ಧಾರ್ಮಿಕ ಕ್ಷೇತ್ರದ ಬಗ್ಗೆ ಸಾರ್ವಜನಿಕರಲ್ಲಿ ತಪ್ಪು ಭಾವನೆ ಮೂಡಿಸಿದ ಮುಸುಕುಧಾರಿಯ ಬಗ್ಗೆ ಕಾನೂನು ಕ್ರಮ ಜರುಗಿಸಿ ಆತನನ್ನು ಜೈಲಿಗಟ್ಟಬೇಕೆಂದು ಆಗ್ರಹಿಸಿದರು.ಕಾಂಗ್ರೆಸ್ ನವರು ಹಿಂದೂ ಧಾರ್ಮಿಕ ಕ್ಷೇತ್ರಗಳ ಬಗ್ಗೆ ತಾತ್ಸಾರ ಮಾಡಿರುವ ಪರಿಣಾಮ ಈಗಾಗಲೇ ಶೇಕಡಾ 75 ರಷ್ಟು ಕಾಂಗ್ರೆಸ್ ಪಕ್ಷ ಹಾಳಾಗಿದೆ. ಈಗ ಧರ್ಮಸ್ಥಳಕ್ಕೆ ಕೈ ಹಾಕಿರುವುದರಿಂದ ಇನ್ನು ಸಂಪೂರ್ಣ ಹಾಳಾಗಿದೆ ಎಂದು ಮಸಾಲಾ ಜಯರಾಮ್ ಹೇಳಿದರು. ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್ ಮಾತನಾಡಿ ರಾಜ್ಯದ 7 ಕೋಟಿ ಜನರೂ ಧರ್ಮಸ್ಥಳದ ಪರ ಇದ್ದಾರೆ. ಕೆಲವೇ ಬೆರಳೆಣಿಕೆಯಷ್ಟು ಜನ ಧರ್ಮಸ್ಥಳದ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿದರೂ ಸಹ ಕ್ಷೇತ್ರದ ಧರ್ಮಾಧಿಕಾರಿಗಳು ಧೃತಿಗೆಡುವ ಅವಶ್ಯಕತೆ ಇಲ್ಲ. ರಾಜ್ಯದ ಜನತೆ ತಮ್ಮೊಂದಿಗಿದ್ದಾರೆಂದು ಹೇಳಿದರು. ಈ ವೇಳೆ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಮೃತ್ಯುಂಜಯ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷೆ ಸ್ವಪ್ನ ನಟೇಶ್, ಉಪಾಧ್ಯಕ್ಷೆ ಭಾಗ್ಯಮ್ಮ, ಸದಸ್ಯರಾದ ಆಶಾ ರಾಜಶೇಖರ್, ಪ್ರಭಾಕರ್, ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಡೊಂಕಿಹಳ್ಳಿ ಪ್ರಕಾಶ್, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಚೂಡಾರತ್ನ, ಮುಖಂಡರಾದ ಹರಿಕಾರನಹಳ್ಳಿ ಪ್ರಸಾದ್, ಸಿದ್ದಪ್ಪಾಜಿ, ಮಾವಿನಕೆರೆ ಮಂಜಣ್ಣ, ದಬೇಘಟ್ಟ ಮಹೇಶ್, ದೊಂಬರನಹಳ್ಳಿ ತೀರ್ಥಕುಮಾರ್, ಬಸವರಾಜು ಯಾದವ್, ಹಾವಾಳ ರವಿಚಂದ್ರ, ಶೋಭಾ, ಭರತ್, ದಯಾನಂದ್, ನಡುವನಹಳ್ಳಿ ಚಂದ್ರಣ್ಣ, ಕಾಳಂಜೀಹಳ್ಳಿ ಸೋಮಶೇಖರ್ ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು. ಪ್ರತಿಭಟನೆಯ ನಂತರ ಅಪಪ್ರಚಾರದಲ್ಲಿ ತೊಡಗಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ತಹಸೀಲ್ದಾರ್ ರಿಗೆ ಮನವಿ ಪತ್ರ ಸಲ್ಲಿಸಲಾಯಿತು.