4 ವಿಭಾಗಗಳಲ್ಲಿ ಸಹಕಾರಿ ನ್ಯಾಯಾಲಯ ಸ್ಥಾಪಿಸುವ ಚಿಂತನೆ, ಅಕ್ರಮಗಳಿಗೆ ಬ್ರೇಕ್

KannadaprabhaNewsNetwork |  
Published : Aug 16, 2026, 03:30 AM IST
ಸಚಿವ ಲಕ್ಷ್ಮಣ ಸವದಿ. | Kannada Prabha

ಸಾರಾಂಶ

ಸಹಕಾರಿ ವ್ಯಾಜ್ಯಗಳ ವಿಚಾರಣೆಗಾಗಿ ರಾಜ್ಯದ ನಾಲ್ಕು ವಿಭಾಗಗಳಲ್ಲಿ ಸಹಕಾರಿ ನ್ಯಾಯಾಲಯ ಸ್ಥಾಪಿಸುವ ಚಿಂತನೆ ಇದೆ.

ಆಗಸ್ಟ್ ಬಳಿಕ ಬರ ಘೋಷಣೆ ಕುರಿತು ತೀರ್ಮಾನ: ಲಕ್ಷ್ಮಣ ಸವದಿ

ಕನ್ನಡಪ್ರಭ ವಾರ್ತೆ ಕಾರವಾರ

ಸಹಕಾರಿ ವ್ಯಾಜ್ಯಗಳ ವಿಚಾರಣೆಗಾಗಿ ರಾಜ್ಯದ ನಾಲ್ಕು ವಿಭಾಗಗಳಲ್ಲಿ ಸಹಕಾರಿ ನ್ಯಾಯಾಲಯ ಸ್ಥಾಪಿಸುವ ಚಿಂತನೆ ಇದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯದ ಸಹಕಾರ ಸಚಿವ ಲಕ್ಷ್ಮಣ ಸವದಿ ಹೇಳಿದರು.

ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಲಾಗಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಹಕಾರಿ ಸಂಘಗಳಲ್ಲಿನ ಅಕ್ರಮಗಳ ವಿರುದ್ಧ ಲಿಖಿತ ದೂರು ಬಂದರೆ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಲಾಗುವುದು. ತನಿಖೆ ವಿಳಂಬವಾಗುವುದನ್ನು ತಪ್ಪಿಸಲು 65ನೇ ನಿಯಮದಡಿ ತ್ವರಿತ ವಿಚಾರಣೆಗೆ ಆದೇಶಿಸಲಾಗುವುದು. ಕಾರವಾರ ಅರ್ಬನ್ ಬ್ಯಾಂಕ್ ಸೇರಿದಂತೆ ವಿವಿಧ ಸಂಘಗಳಲ್ಲಿ ನಡೆದಿರುವ ₹100 ಕೋಟಿಗೂ ಅಧಿಕ ಮೊತ್ತದ ಅವ್ಯವಹಾರಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಬಡ ಗ್ರಾಹಕರಿಗೆ ನ್ಯಾಯ ಕೊಡಿಸಲು ಪ್ರತಿ ತಿಂಗಳು ಎರಡು ದಿನ ಜಿಲ್ಲೆಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸುತ್ತೇನೆ. ರಾಜ್ಯದ ನಾಲ್ಕು ವಿಭಾಗಗಳಲ್ಲಿ ಸಹಕಾರಿ ನ್ಯಾಯಾಲಯ ಸ್ಥಾಪಿಸಲು ಚಿಂತನೆ ನಡೆಸಲಾಗಿದೆ ಎಂದು ಅವರು ತಿಳಿಸಿದರು.

ಜಿಲ್ಲೆಯಲ್ಲಿ ಮಳೆ ಅಭಾವ ಇದೆ, ವಿಶೇಷವಾಗಿ ಮುಂಡಗೋಡು ಹಾಗೂ ಯಲ್ಲಾಪುರ ತಾಲೂಕುಗಳಲ್ಲಿ ಶೇ. 60ಕ್ಕಿಂತ ಹೆಚ್ಚು ಮಳೆ ಕೊರತೆಯಾಗಿದೆ ಎಂದರು. ಅಡಕೆಗೆ ಬಾಧಿಸಿರುವ ಹಳದಿ ಎಲೆಚುಕ್ಕೆ ರೋಗ ಹಾಗೂ ಭತ್ತದ ಬೆಳೆ ಕುಂಠಿತವಾಗಿರುವ ಬಗ್ಗೆ ವರದಿ ಸಿದ್ಧಪಡಿಸಲಾಗಿದೆ. ಆಗಸ್ಟ್ ತಿಂಗಳು ಮುಗಿದ ನಂತರ ಪರಿಸ್ಥಿತಿಯನ್ನು ಪೂರ್ಣವಾಗಿ ಅವಲೋಕಿಸಿ ಅಧಿಕೃತವಾಗಿ ಬರ ಘೋಷಣೆ ಮಾಡುವ ಬಗ್ಗೆ ತೀರ್ಮಾನಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ಕಡಲ್ಕೊರೆತ ತಡೆಗೆ ಸಂಬಂಧಿಸಿದಂತೆ ₹70 ಕೋಟಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು, ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಲು ನಿರ್ದೇಶನ ನೀಡಲಾಗಿದೆ ಎಂದು ಸಚಿವರು ವಿವರಿಸಿದರು.

ಪ್ರವಾಸಿ ತಾಣಗಳಲ್ಲಿ ಅಗತ್ಯ ಸುರಕ್ಷತಾ ಕ್ರಮ ಕೈಗೊಂಡು ಪ್ರವಾಸಿಗರಿಗೆ ಮುಕ್ತ ಪ್ರವೇಶ ಕಲ್ಪಿಸಬೇಕು. ಈ ಕೂಡಲೇ ಪ್ರವಾಸಿ ತಾಣಗಳ ಗೇಟ್‌ಗಳನ್ನು ತೆರೆಯುವಂತೆ ಅರಣ್ಯ ಇಲಾಖೆಗೆ ಸೂಚಿಸುತ್ತೇನೆ. ಕಡಲಿಗಿಳಿಯಲಾರದೆ ಹಾನಿ ಅನುಭವಿಸಿದ ನಾಡದೋಣಿ ಮೀನುಗಾರರಿಗೆ ರಾಜ್ಯ ಸರ್ಕಾರದಿಂದ ವಿಶೇಷ ಪ್ಯಾಕೇಜ್ ನೀಡುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನ್ಯಾಯ ಒದಗಿಸುವುದಾಗಿ ತಿಳಿಸಿದರು.

ರಾಜೀನಾಮೆ ಕೇಳುವ ನೈತಿಕತೆ ಬಿಜೆಪಿಗರಿಗೆ ಇಲ್ಲ

ಬಿಜೆಪಿಯ ಟೀಕೆಗಳ ಕುರಿತು ಪ್ರತಿಕ್ರಿಯಿಸಿದ ಸಚಿವರು, ಸಚಿವ ಬಿ. ನಾಗೇಂದ್ರ ರಾಜೀನಾಮೆ ಕೇಳುವ ನೈತಿಕ ಹಕ್ಕು ಬಿಜೆಪಿಗೆ ಇಲ್ಲ. ಇತಿಹಾಸದಲ್ಲಿ ಯಾರು ಯಾರ ಸಲುವಾಗಿ ರಾಜೀನಾಮೆ ನೀಡಿದ್ದಾರೆ ಎಂಬುದು ಜನರಿಗೆ ಗೊತ್ತಿದೆ ಎಂದರು.

ಆರ್.ಎಸ್.ಎಸ್. ನೋಂದಣಿ ವಿಚಾರದ ಕುರಿತು ಪ್ರತಿಕ್ರಿಯಿಸಿ, ಸರ್ಕಾರ ಯಾವುದೇ ಸಂಘಟನೆಯನ್ನು ಗುರಿಯಾಗಿಸಿಕೊಂಡು ದ್ವೇಷದ ರಾಜಕಾರಣ ಮಾಡುತ್ತಿಲ್ಲ. ನಾವು ಬೇರೆಯವರ ಕಡೆ ಒಂದು ಬೆರಳು ತೋರಿಸಿದರೆ, ನಾಲ್ಕು ಬೆರಳುಗಳು ನಮ್ಮ ಕಡೆ ಇರುತ್ತವೆ ಎಂಬ ಅರಿವು ನಮಗಿದೆ ಎಂದು ಮಾರ್ಮಿಕವಾಗಿ ನುಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ಯಾರಂಟಿ ಯೋಜನೆ ದೇಶಕ್ಕೆ ಮಾದರಿ
ಸ್ವಾತಂತ್ರ್ಯದ ಮೌಲ್ಯ ಅರಿತು ಗ್ರಾಮಾಭಿವೃದ್ಧಿಗೆ ಶ್ರಮಿಸಿ