ಬಿಜೆಪಿಯ ವಕೀಲ ಹೇಳಿಕೆ । ಶಾಸಕ ಶಿವಲಿಂಗೇಗೌಡ ವಿರುದ್ಧ ಆಕ್ಷೇಪ
75ನೇ ವರ್ಷದ ಗಣರಾಜ್ಯೋತ್ಸವದಲ್ಲಿ ನಗರದ ಶಾಲೆಯೊಂದರ ವಿದ್ಯಾರ್ಥಿಗಳು ಪ್ರದರ್ಶಿಸಿದ ರಾಷ್ಟ್ರ ಲಾಂಛನ ಕಮಲದ ಹೂವು ಬಗ್ಗೆ ತಮ್ಮ ಅಜ್ಞಾನದಿಂದ ವರ್ತಿಸಿದ ಶಾಸಕರ ನಡೆ ತಾಲೂಕಿನ ಘನತೆಗೆ ಧಕ್ಕೆ ತಂದಿದೆ ಎಂದು ಬಿಜೆಪಿ ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ಹಾಗೂ ವಕೀಲ ಕೆಂಪು ಸಾಗರ ಶಿವರಾಜ್ ಕುಮಾರ್ ಹೇಳಿದರು
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಷ್ಟ್ರೀಯ ಪುಷ್ಪ ಕಮಲವನ್ನು ತಮ್ಮ ನೃತ್ಯದಲ್ಲಿ ಪ್ರದರ್ಶಿಸಿದ್ದ ಶ್ರೀ ಚಂದ್ರಶೇಖರ ಭಾರತಿ ಶಾಲೆಯ ಮಕ್ಕಳು ಕಮಲಕ್ಕೆ ಗೌರವ ನೀಡುವುದರ ಮೂಲಕ ರಾಷ್ಟ್ರೀಯತೆ ಮೆರೆದಿದ್ದರು, ಈ ಮೂಲಕ ಸಹಜವಾಗಿಯೇ ಪ್ರಥಮ ಬಹುಮಾನ ಘೋಷಣೆ ಆಗಿತ್ತು. ಬಿಜೆಪಿ ಚಿಹ್ನೆ ಎಂದು ಶಾಸಕ ಶಿವಲಿಂಗೇಗೌಡ ತಗಾದೆ ತೆಗೆದು ನಾಲ್ಕನೇ ಬಹುಮಾನ ಕೊಡಿಸುವಲ್ಲಿ ಯಶಸ್ವಿಯಾದರು. ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ನಿರ್ಧಾರ ಸಂವಿಧಾನ ವಿರೋಧಿ ಹಾಗೂ ಅತಿ ಬಾಲಿಶ ಘಟನೆಯಾಗಿದೆ ಎಂದರು.ರಾಷ್ಟ್ರ ಚಿಹ್ನೆಯನ್ನು ಬಿಜೆಪಿ ಕಮಲ ಎಂದು ಶಾಸಕರು ಹೇಳಿದರೆ ಅದಕ್ಕೆ ಒಪ್ಪಿಕೊಂಡ ಅಧಿಕಾರಿಗಳು ಶಾಸಕರ ಭಟ್ಟಂಗಿಗಳೆ? ಎಂದು ಪ್ರಶ್ನಿಸಿದ ಅವರು ಶಾಲಾ ಶಿಕ್ಷಕಿ ಲಕ್ಷ್ಮಿ ಸೂಕ್ತ ಉತ್ತರ ನೀಡುವಲ್ಲಿ ತಮ್ಮ ದಕ್ಷತೆಯನ್ನು ತೋರಿದ್ದಾರೆ. ಇದಕ್ಕೆ ಅವರನ್ನು ಶ್ಲಾಘಿಸುತ್ತೇನೆ. ಅಂತೆಯೇ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಅಧ್ಯಕ್ಷರ ನಡೆಯನ್ನು ಖಂಡಿಸುತ್ತೇನೆ. ಶಿಕ್ಷಕಿಯ ಪರವಾಗಿ ಮತ್ತು ಚಿಹ್ನೆಯ ಪರವಾಗಿ ನಿಲ್ಲಬೇಕಿದ್ದ ತಹಸೀಲ್ದಾರ್ ಚಿಹ್ನೆಗೆ ಮಾಡಿದ ಅಪಮಾನವಾಗಿದೆ. ಇಂತಹ ಅಪವಿತ್ರ ಘಟನೆಗೆ ಕಾರಣರಾದ ಶಾಸಕ ಕೆಎಂ ಶಿವಲಿಂಗೇಗೌಡ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗೆ ವಿಧಾನಸಭೆ ಸಬಾಧ್ಯಕ್ಷರಿಗೆ ರಾಜ್ಯಪಾಲರಿಗೆ ದೂರು ಸಲ್ಲಿಸಲಿದ್ದೇವೆ ಎಂದರು
ಬಿಜೆಪಿ ನಗರ ಅಧ್ಯಕ್ಷ ಎ.ಎಸ್. ಪುರುಷೋತ್ತಮ್, ಕಾರ್ಯಾಲಯ ಕಾರ್ಯದರ್ಶಿ ಸುನಿಲ್ ರಾಂಪುರ, ನಗರ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ವಿನೋದ್ ಜೈನ್ ಉಪಸ್ಥಿತರಿದ್ದರು.