ಕನ್ನಡಪ್ರಭ ವಾರ್ತೆ ಸಿರಿಗೆರೆ
ಭರಮಸಾಗರ ಏತ ನೀರಾವರಿ ಯೋಜನೆ ಭರಮಣ್ಣನಾಯಕನ ಕೆರೆ ವೀಕ್ಷಣೆ ನಂತರ ಏರ್ಪಡಿಸಿದ್ದ ಸಾರ್ವಜನಿಕ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಮುಂದೆ ನೀರಿಗಾಗಿ ಪರಿತಪಿಸುವಂತಹ ದಿನಗಳು ಬರುತ್ತವೆ. ಹವಾಮಾನ ಏರುಪೇರಿನ ಕಾರಣ ನೀರಿನ ಕೊರತೆ ಉಂಟಾಗಲಿದೆ. ಜೊತೆಗೆ ಶುದ್ಧ ನೀರಿನ ಲಭ್ಯತೆ ಪ್ರಮಾಣ ಕಡಿಮೆಯಾಗಲಿದೆ. ಆದ್ದರಿಂದ ನೀರಿನ ಮಹತ್ವ ಅರಿತು ಪ್ರತಿ ಹನಿ ನೀರನ್ನೂ ರಕ್ಷಣೆ ಮಾಡಬೇಕು ಮತ್ತು ಮಿತವಾಗಿ ಬಳೆಸಬೇಕು ಎಂದರು.
ಹಲವು ದೇಶಗಳಲ್ಲಿ ನೀರಿಗಾಗಿ ಪರದಾಟ ನಡೆಯುತ್ತಿದೆ. ನೀರಿನ ಬಳಕೆಯ ಮೇಲೆ ಕಟ್ಟುಪಾಡು ವಿಧಿಸಲಾಗಿದೆ. ಮುಂಬರುವ ದಿನಗಳಿಗೆ ಇದೊಂದು ಜಾಗತಿಕ ಎಚ್ಚರಿಕೆಯ ಗಂಟೆಯಾಗಿದೆ ಎಂದರು.೫೬ ಕಿ.ಮೀ. ದೂರದ ಭರಮಸಾಗರ ಏತ ನೀರಾವರಿ ಯೋಜನೆಗೆ ೬೦೦ ಕೋಟಿ ರು.ಗಳನ್ನು ಸರ್ಕಾರ ವೆಚ್ಚ ಮಾಡಿದೆ. ಇದು ಜನರ ತೆರಿಗೆಯ ಹಣ. ಅದನ್ನು ಅರಿತು ಜನರು ಅಪವ್ಯಯವಾಗದಂತೆ ನೋಡಿಕೊಳ್ಳಬೇಕು. ಇಲ್ಲವಾದರೆ ಜನರ ಹಣ ಹಾಳಾದಂತೆ ಆಗುತ್ತದೆ ಎಂದರು.
ಕರ್ನಾಟಕ ನೀರಾವರಿ ನಿಗಮದ ನಿವೃತ್ತ ಅಧ್ಯಕ್ಷ ಮಲ್ಲಿಕಾರ್ಜುನ ಗುಂಗೆ ಮಾತನಾಡಿ, ರಾಜ್ಯದಲ್ಲಿಯೇ ಇದೊಂದು ವಿನೂತನ ಯೋಜನೆ. ೫೬ ಕಿ.ಮೀ. ದೂರದ ರೈಸಿಂಗ್ ಮೇನ್ ಇರುವಂತಹ ಯೋಜನೆಗೆ ರಾಜ್ಯದಲ್ಲಿ ಬೇರೆ ಎಲ್ಲಿಯೂ ಇಲ್ಲ. ೬೦೦ ಕೋಟಿ ರು.ಗಳ ವೆಚ್ಚದಲ್ಲಿ ಈ ಯೋಜನೆ ಕೇವಲ ೨ ವರ್ಷಗಳಲ್ಲಿ ಪೂರ್ಣಗೊಳಿಸಲಾಗಿದೆ. ತರಳಬಾಳು ಶ್ರೀಗಳ ಇಚ್ಚಾಶಕ್ತಿ ಮತ್ತು ಅವರು ಹೆಜ್ಜೆಹೆಜ್ಜೆಗೂ ತೋರಿದ ಮಾರ್ಗದರ್ಶನದಿಂದ ಇದು ಸಾಧ್ಯವಾಗಿದೆ. ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಯಾರಿಂದಲೂ ಒಂದು ಇಂಚು ಭೂಮಿ ಸ್ವಾಧೀನಪಡಿಸಿಕೊಂಡಿಲ್ಲ ಎಂದರು.
ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ, ಮಾಜಿ ಸಚಿವ ಎಚ್.ಆಂಜನೇಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಎನ್. ಚಂದ್ರಪ್ಪ, ಜಗಳೂರು ಶಾಸಕ ಬಿ. ದೇವೇಂದ್ರಪ್ಪ, ಜಿ.ಬಿ. ತೀರ್ಥಪ್ಪ, ಶಶಿ ಪಾಟೀಲ್ ಮಾತನಾಡಿದರು. ಕಾಂಗ್ರೆಸ್ ಮುಖಂಡ ತಿಪ್ಪೇಸ್ವಾಮಿ, ಡಿ.ವಿ. ಶರಣಪ್ಪ, ಎಚ್.ಬಿ. ಮಲ್ಲಪ್ಪ, ಜಗಳೂರು ಮಾಜಿ ಶಾಸಕ ಎಚ್.ಪಿ. ರಾಜೇಶ್, ಮಂಜುನಾಥ್, ಮನೋಜ್ಕುಮಾರ್, ಸಿ.ಆರ್. ನಾಗರಾಜ್ ಮುಂತಾದವರು ಭಾಗವಹಿಸಿದ್ದರು.
ಭರಮಸಾಗರ ಏತ ನೀರಾವರಿ ಯೋಜನೆ ವಿನೂತನವಾದುದು. ಇದರಲ್ಲಿ ಸಾಧ್ಯವಾದ ಎಲ್ಲಾ ವೈಜ್ಞಾನಿಕ ಚಿಂತನೆ ಅಳವಡಿಸಲಾಗಿದೆ. ಕೆರೆ ಏರಿಯಲ್ಲಿ ಬಿರುಕು ಕಾಣಿಸಿಕೊಂಡಿಲ್ಲದೇ ಇದ್ದಲ್ಲಿ ಇಷ್ಟೊತ್ತಿಗೆ ಕೆರೆ ತುಂಬಿ ನೋಡುಗರ ಕಣ್ಮನ ಸೆಳೆಯುತ್ತಿತ್ತು ಎಂದು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಆಶೀರ್ವಚನದಲ್ಲಿ ತಿಳಿಸಿದರು.ಕೆಲವರು ಈ ಯೋಜನೆಗೆ ತಮ್ಮ ಹೆಸರನ್ನು ಇಡಲು ಪ್ರಸ್ತಾಪ ಮಾಡುತ್ತಿದ್ದಾರೆ. ಭರಮಸಾಗರದ ಐತಿಹಾಸಿಕ ಕೆರೆ ೩೦೦ ವರ್ಷಗಳ ಹಿಂದೆ ನಿರ್ಮಿಸಿದವರು ಭರಮಣ್ಣನಾಯಕರು. ಅವರ ಹೆಸರೇ ಮುಂದುವರೆಯಬೇಕು. ಯೋಜನೆಯ ತುರ್ತು ಕೆಲಸ ನಿರ್ವಹಿಸಲು ಸರ್ಕಾರ ನಂಬಿಕೊಂಡು ಇರಬಾರದು. ಅದಕ್ಕಾಗಿ ಎಲ್ಲಾ ಕೆರೆಗಳ ಬಳಕೆದಾರರ ಸಂಘ ರಚನೆ ಮಾಡಬೇಕು. ಅವುಗಳ ನಿರ್ವಹಣೆಗಾಗಿ ಆಪತ್ ನಿಧಿ ಸಂಗ್ರಹಿಸಿಡಬೇಕು ಎಂದರು.
ಭರಮಸಾಗರ ಏತ ನೀರಾವರಿ ಯೋಜನೆಯ ಭರಮಣ್ಣನಾಯಕನ ಕೆರೆ ವೀಕ್ಷಣೆ ಮಾಡಿದ ನಂತರ ಏರ್ಪಡಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ರಾಜ್ಯದಲ್ಲಿ ಭೀಕರ ಬರಗಾಲದ ಬವಣೆ ಇದೆ. ಜನರು ಸಂಕಷ್ಟದಲ್ಲಿದ್ದಾರೆ. ಜನರು ಕಷ್ಟದಲ್ಲಿರುವಾಗ ವಿಜೃಂಬಣೆಯ ಮಹೋತ್ಸವ ಮಾಡುವುದು ಸರಿಯಲ್ಲ ಎಂದರು.
ಭರಮಸಾಗರದಲ್ಲಿ ನಡೆಯಬೇಕಾಗಿದ್ದ ಅದ್ಧೂರಿ ಆಚರಣೆ ಮುಂದೂಡಿ, ಈ ಭಾರಿ ಸಿರಿಗೆರೆ ಮಠದಲ್ಲಿಯೇ ಸರಳವಾಗಿ, ಸಾಂಪ್ರಾದಾಯಿಕವಾಗಿ ಆಚರಿಸಲಾಗುವುದೆಂದು ಪ್ರಕಟಿಸಿದರು.