ಯಾದಗಿರಿ: ನೀರು ಕುಡಿಯಲು ಹೋಗಿದ್ದ ಮೂವರು ಬಾಲಕರು ಹೊಂಡದಲ್ಲಿ ಕಾಲುಜಾರಿ ಬಿದ್ದು ದುರ್ಮರಣಕ್ಕೀಡಾದ ಘಟನೆ ಯಾದಗಿರಿಯ ಅಚ್ಚೋಲಾ ತಾಂಡಾದಲ್ಲಿ ಭಾನುವಾರ ಮಧ್ಯಾಹ್ನ ಸಂಭವಿಸಿದೆ.ಬೇಸಿಗೆ ಹಿನ್ನೆಲೆ ನೀರಿನ ದಾಹ ತಣಿಸಿಕೊಳ್ಳಲು ನೀರು ಕುಡಿಯಲು ಹೋಗಿದ್ದ ಕುರಿಗಾಹಿ ಈ ಮೂವರು ಬಾಲಕರು, ಹೊಂಡದಲ್ಲಿ ಕಾಲು ಜಾರಿ ಬಿದ್ದು ನೀರು ಪಾಲಾಗಿದ್ದಾರೆ. ಅಚ್ಚೊಲಾ ತಾಂಡಾದ ನಿವಾಸಿಗಳಾದ ಅಮರ್ (12), ಜಯ ರಾಠೋಡ (14) ಹಾಗೂ ಕೃಷ್ಣಾ ರಾಠೋಡ (10) ಮೃತ ದುರ್ದೈವಿಗಳು. ಘಟನೆಯ ಸುದ್ದಿ ಅರಿಯುತ್ತಲೇ ಅಲ್ಲಿಗಾಗಮಿಸಿದ್ದ ಮೃತರ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳೀಯರ ನೆರವಿನೊಂದಿಗೆ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಯಾದಗಿರಿ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.