ಕನ್ನಡಪ್ರಭ ವಾರ್ತೆ ಹಾಸನ
ಹಾಸನದ ಅರಸೀಕೆರೆ ರಸ್ತೆಯ ಎಸ್ ಎಂ ಕೃಷ್ಣ ಬಡಾವಣೆಯ ಕ್ರೀಡಾಂಗಣದಲ್ಲಿ ನಡೆಯಲಿರುವ ಸಮಾವೇಶಕ್ಕಾಗಿ ಬೃಹತ್ ವೇದಿಕೆ ಸಿದ್ಧತೆ ಪೂರ್ಣಗೊಂಡಿದೆ. ಎಲ್ಲೆಡೆ ಕೈ ನಾಯಕರ ಫ್ಲೆಕ್ಸ್ ಹಾಗು ಬ್ಯಾನರ್ಗಳು ರಾರಾಜಿಸುತ್ತಿದೆ. ಜನಕಲ್ಯಾಣ ಸ್ವಾಭಿಮಾನಿ ಸಮಾವೇಶ ಎಂಬ ಹೆಸರಿನಲ್ಲೇ ಬಹುತೇಕ ಫ್ಲೆಕ್ಸ್ ಬ್ಯಾನರ್ ಪ್ರಿಂಟ್ ಮಾಡಲಾಗಿದೆ. ಫ್ಲೆಕ್ಸ್ನಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಭಾವಚಿತ್ರಗಳು ದೊಡ್ಡದಾಗಿ ರಾರಾಜಿಸುತ್ತಿವೆ. ಬಿ.ಎಂ. ರಸ್ತೆ ಉದ್ದಲಕ್ಕೂ ಕಾಂಗ್ರೆಸ್ ನಾಯಕರ ಮುಖಂಡರ ಫ್ಲೆಕ್ಸ್ ಮತ್ತು ಬ್ಯಾನರ್ ಹಾಗೂ ಪಕ್ಷದ ಬಾವುಟ ರಾರಾಜಿಸುತ್ತಿವೆ. ನಗರದ ಅರಸೀಕೆರೆ ರಸ್ತೆ ತುಂಬೆಲ್ಲಾ ಫ್ಲೆಕ್ಸ್ಗಳು ಆವರಿಸಿವೆ.
ಇನ್ನು ಸಮಾವೇಶ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ಭದ್ರತೆ ಒದಗಿಸಲಾಗಿದೆ. ಐವರು ಎಸ್ಪಿ, ಆರು ಎಎಸ್ಪಿ, ೧೨ ಡಿವೈಎಸ್ಪಿ, ೩೦ಕ್ಕೂ ಹೆಚ್ಚು ಇನ್ಸ್ಪೆಕ್ಟರ್, ೮೦ಕ್ಕೂ ಹೆಚ್ಚು ಪಿಎಸ್ಐ ಹಾಗೂ ಸುಮಾರು ೨೦೦೦ಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಿ ಭದ್ರತೆ ವ್ಯವಸ್ಥೆ ಕೊಡಲಾಗಿದೆ.