ಕನ್ನಡಪ್ರಭ ವಾರ್ತೆ ಮಂಡ್ಯ
ಪಹಲ್ಗಾಂನಲ್ಲಿ ಹಿಂದೂಗಳ ಮಾರಣ ಹೋಮ ನಡೆಸಿದ ಉಗ್ರರ ವಿರುದ್ಧ ಪ್ರತೀಕಾರ ತೀರಿಸಲು ಆಪರೇಷನ್ ಸಿಂದೂರ ಮೂಲಕ ಪಾಕಿಸ್ತಾನದ ಉಗ್ರರ ನೆಲೆಗಳನ್ನು ಧ್ವಂಸ ಮಾಡಿ ಯಶಸ್ವಿ ಕಾರ್ಯಾಚರಣೆ ನಡೆಸಿದ ಭಾರತೀಯ ಸೇನೆಗಳಿಗೆ ಕೃತಜ್ಞತೆ ಅರ್ಪಿಸಲು ಕೆರಗೋಡಿನಲ್ಲಿ ತಿರಂಗಾ ಯಾತ್ರೆ ಆಯೋಜಿಸಲಾಗಿತ್ತು.ಪಕ್ಷಾತೀತವಾಗಿ ವಿದ್ಯಾರ್ಥಿಗಳು, ರೈತರು ತಿರಂಗಾ ಯಾತ್ರೆಯಲ್ಲಿ ಭಾಗವಹಿಸುವ ಮೂಲಕ ಭಾರತ್ ಮಾತಾ ಕಿ ಜೈ ಮತ್ತು ಭಾರತೀಯ ಸೇನೆ ಪರವಾಗಿ ಜಯಘೋಷಣೆ ಮೊಳಗಿಸಿದರು.
ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅಶೋಕ್ ಜಯರಾಂ ಮಾತನಾಡಿ, ಆಪರೇಷನ್ ಸಿಂದೂರ ಮುಗಿದಿಲ್ಲ. ಭಯೋತ್ಪಾದಕ ದಾಳಿ ಪುನರಾವರ್ತನೆಯಾದರೆ, ಪಾಕಿಸ್ತಾನವು ಭಾರೀ ಬೆಲೆ ತೆರಬೇಕಾಗುತ್ತದೆ ಎಂದರು.ಭವಿಷ್ಯದಲ್ಲಿ ಪಾಕಿಸ್ತಾನ ಯಾವುದೇ ದುಸ್ಸಾಹಸದಲ್ಲಿ ತೊಡಗಿದರೆ ವಿನಾಶದ ಹಾದಿ ಹಿಡಿಯಬೇಕಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಬಲವಾದ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿದ್ದಕ್ಕಾಗಿ ಶ್ಲಾಘಿಸಿದರು. ದೇಶವು ಜನರು ಬಯಸಿದ್ದನ್ನು ಮಾಡಿದೆ. ಪಾಕಿಸ್ತಾನಕ್ಕೆ ಸೂಕ್ತ ಉತ್ತರ ನೀಡಿದ ಸೈನಿಕರ ಬೆಂಬಲಕ್ಕೆ ಇಡೀ ರಾಷ್ಟ್ರ ನಿಂತಿದೆ ಎಂದರು.
ಕೆಲವು ಕಾಂಗ್ರೆಸ್ ನಾಯಕರು ಪಾಕಿಸ್ತಾನದೊಂದಿಗೆ ಯುದ್ಧವನ್ನು ಪ್ರತಿಪಾದಿಸಿದರೆ ಇತರರು ಶಾಂತಿಗೆ ಕರೆ ನೀಡುವರು. 175 ಜನರ ಸಾವಿಗೆ ಕಾರಣವಾದ ಮುಂಬೈ ಭಯೋತ್ಪಾದಕ ದಾಳಿಯ ಸಮಯದಲ್ಲಿ ಡಾ.ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಪ್ರತಿಕ್ರಿಯಿಸಲು ವಿಫಲವಾಯಿತು. ಇದಕ್ಕೆ ವ್ಯತಿರಿಕ್ತವಾಗಿ ಪ್ರಧಾನಿ ಮೋದಿ ಸೂಕ್ತ ಉತ್ತರ ನೀಡಿದ್ದಾರೆ ಎಂದರು.ಪ್ರಧಾನಿ ನರೇಂದ್ರ ಮೋದಿ ಸಿಂಧೂ ಜಲ ಒಪ್ಪಂದವನ್ನು ರದ್ದುಗೊಳಿಸಿದ್ದಾರೆ. ಹಿಂದೆ ನಡೆದ ಭಯೋತ್ಪಾದಕ ದಾಳಿಯ ಸಮಯದಲ್ಲಿ ಕಾಂಗ್ರೆಸ್ ಅಂತಹ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿತ್ತು ಎಂದರು.
ಮರಿಲಿಂಗನ ದೊಡ್ಡಿ ಮಠದ ಶ್ರೀಗಳು, ಗ್ರಾಮಾಂತರ ಮಂಡಲ ಅಧ್ಯಕ್ಷ ಭೀಮೇಶ್, ಮನ್ಮುಲ್ ಮಾಜಿ ನಿರ್ದೇಶಕ ಎಂ.ಎಸ್.ರಘುನಂದನ್, ವಿನೋಬಾ, ಬಸಂತ್, ಯೋಗೇಶ್, ಶಶಿಕುಮಾರ್, ಷಣ್ಮುಖಾರಾಧ್ಯ, ಶಿವಕುಮಾರ್ ಆರಾಧ್ಯ, ಶಿವು, ಕಾರ್ತಿಕ್, ಹರೀಶ, ಗುರುದರ್ಶನ್ ಇತರರು ಭಾಗವಹಿಸಿದ್ದರು.