ಚಿತ್ತಾಪುರ: ಆಪರೇಷನ್ ಸಿಂದೂರ ಯಶಸ್ವಿಯಾದ ಹಿನ್ನಲೆಯಲ್ಲಿ ಭಾರತೀಯ ಸೈನಿಕರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಲು ಹಾಗೂ ದೇಶದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸುವ ಉದ್ದೇಶದಿಂದ ರಾಷ್ಟ್ರ ರಕ್ಷಣೆಗಾಗಿ ನಾಗರಿಕರು ವೇದಿಕೆ ವತಿಯಿಂದ ಮೇ. 21 ಬುಧವಾರ ಸಾಯಂಕಾಲ ೪ ಗಂಟೆಗೆ ನೂರು ಮೀಟರ್ ಉದ್ದದ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ತಿಳಿಸಿದ್ದಾರೆ.
ಜ್ಯಾತ್ಯಾತೀತ ಮತ್ತು ಪಕ್ಷಾತೀತವಾಗಿ ನಡೆಯುವ ಈ ತಿರಂಗಾ ಯಾತ್ರೆಯ ಕಾರ್ಯಕ್ರಮದಲ್ಲಿ ಬಿಜೆಪಿಯ ನಾಯಕ ಛಲವಾದಿ ನಾರಾಯಣಸ್ವಾಮಿ, ಮಠಾಧೀಶರು ಮತ್ತು ಪ್ರಮುಖರು ಮಾತನಾಡಲಿದ್ದು, ತಾಲೂಕಿನ ಎಲ್ಲಾ ಸಮಾಜದವರು, ವಿವಿಧ ಪಕ್ಷದವರು, ಕನ್ನಡ ಪರ ಸಂಘಟನೆಗಳು, ದಲಿತಪರ ಸಂಘಟನೆಯವರು, ಹಮಾಲರ ಸಂಘ, ಕಿರಾಣಿ ಹಾಗೂ ಬಟ್ಟೆ ವ್ಯಾಪಾರಿಗಳ ಸಂಘ ಸೇರಿದಂತೆ, ಮಾಜಿ ಸೈನಿಕರು, ಆಟೋ ಚಾಲಕರ ಸಂಘ, ವಾಹನ ಚಾಲಕ ಮತ್ತು ಮಾಲೀಕರ ಸಂಘ ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಿರಂಗಾ ಯಾತ್ರೆ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರಾಧ್ಯಕ್ಷ ಆನಂದ ಪಾಟೀಲ ನರಿಬೋಳ, ಪುರಸಭೆ ಸದಸ್ಯರಾದ ರಮೇಶ್ ಬೊಮ್ಮನಳ್ಳಿ, ಶಾಮಣ್ಣ ಮೇಧಾ, ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಇಟಗಿ, ನಾಗರಾಜ ಹೂಗಾರ, ಪ್ರಸಾದ್ ಅವಂಟಿ, ವಕ್ತಾರ ಶಿವರಾಮ ಚವ್ಹಾಣ ಇದ್ದರು.